ಇದೇನ್ ಸ್ವಾಮಿ ಕೊರೊನಾ ರಾಜ್ಯದಿಂದ ಓಡಿ ಹೋಗ್ಬಿತ್ತಾ..? ಅರ್ರೆ ಈಗ ಡಿಜೆ ಹಳ್ಳಿ ಕೆಜೆ ಹಳ್ಳಿಯಲ್ಲಿ ಎಲ್ಲಾ ಕೂಲ್ ಆಗಿದ್ಯಾ..? ಹೌದು.. ಸಿಎಂ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಕೇಳಿಬಂದ ಭ್ರಷ್ಟಚಾರದ ಆರೋಪ ಏನಾಯ್ತು..?
ಸದ್ಯ ನನ್ನ ತಲೆಯಲ್ಲಿ ಗಿರಗಿಟ್ಟಲೇ ಹೊಡೆಯುತ್ತಿರುವ ಪ್ರಶ್ನೆಗಳಿವು. ಹೆಮ್ಮಾರಿ ಕೊರೊನಾ ವೈರಸ್ ಎಲ್ಲರ ಬದುಕುಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೀವ ಉಳಿದರೂ ಮುಂದಿನ ಜೀವನ ಹೇಗಪ್ಪಾ ಎಂದು ಯೋಚಿಸುತ್ತ ಕುಳಿತ್ತಿದ್ದಾರೆ. ದೇಶದ ವಿಷಯಕ್ಕೆ ಬಂದ್ರೆ ಗಲ್ಲಿ ಗಲ್ಲಿಗಳಲ್ಲೂ ಮಹಾಮಾರಿ ಆರ್ಭಟಿಸುತ್ತಿದೆ. ಜಾಗತಿಕವಾಗಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ಇತರೆ ದೇಶಗಳನ್ನು ಹಿಂದಿಕ್ಕಿ ಭಾರತ ಮುನ್ನಗ್ಗುತ್ತಿದೆ. ಇನ್ನು ಕೊರೊನಾದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿಯೂ ಸಂಪೂರ್ಣವಾಗಿ ಕುಸಿದಿದೆ. ಆದ್ರೆ ಯಾರೊಬ್ಬರು ಇದರ ಬಗ್ಗೆ ಮಾತನಾಡುತ್ತಿಲ್ಲ.. ಇದನ್ನು ಪ್ರಶ್ನಿಸಿ ವಾಚ್ ಡಾಗ್ ಆಗಿ ಕೆಲಸ ಮಾಡಬೇಕಿದ್ದ ಹೆಸರಾಂತ ಸುದ್ದಿ ವಾಹಿನಿಗಳು ಟಿಆರ್ ಪಿ ರೇಸ್ ನಲ್ಲಿ ಕುದುರೆಗಳಂತೆ ಓಡುತ್ತಿವೆ.
ಆರಂಭದ ಶೂರತ್ವ
ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ ಅಧಿಕಾರದ ಗದ್ದುಗೆಯಲ್ಲಿ ವಿರಾಜಮಾನವಾಗಿ ಕುಳಿತಿದ್ದ ‘ರಾಜ’ಕಾರಣಿಗಳು ಯುದ್ಧ ಸೇನಾನಿಗಳಂತೆ ಹೆಮ್ಮಾರಿ ವಿರುದ್ಧ ಹೋರಾಟಕ್ಕೆ ನಿಂತರು. ಹಿಂದೆ ಮುಂದೆ ಯೋಜಿಸದೇ ಇತರ ದೇಶಗಳ ಮಾದರಿಗಳನ್ನು ಹಾಗೂ ತಮಗೆ ತೋಚಿದ ಕೆಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರು. ಇದರಿಂದ ಆರಂಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂತು, ಆದ್ರೆ ಮುಂದೆ ಆಗಿದ್ದೇನು..? ಕೊರೊನಾ ಸ್ಫೋಟ.. ಕೊರೊನಾ ಜೊತೆ ಬದುಕಬೇಕು ಎಂದು ಹೇಳುತ್ತಾ ತೆಗೆದುಕೊಂಡ ಕೆಲ ಆತುರದ ನಿರ್ಧಾರಗಳು ಈಗ ಜನರನ್ನು ಸಾವಿನಂಚಿನಲ್ಲಿ ನಿಲ್ಲಿಸಿವೆ.
ಇನ್ನು ರಾಜ್ಯದ ವಿಚಾರಕ್ಕೆ ಬಂದ್ರೆ ಆರಂಭದಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಇಡೀ ದೇಶಕ್ಕೆ ಮಾದರಿ ಆಗಿತ್ತು. ರಾಜಾಹುಲಿ ತೆಗೆದುಕೊಂಡ ಗಟ್ಟಿ ಗುಂಡಿಗೆಯ ನಿರ್ಧಾರಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾದವು. ಆದ್ರೆ ಕಾಲ ಕಳೆದಂತೆ ರಾಜಾಹುಲಿ ಸರ್ಕಾರ ಮಂಕಾಯಿತು. ಪರಿಣಾಮ ಲಾಟರಿ ಸಚಿವರು ಕೊರೊನಾ ಹೆಸರಲ್ಲಿ ಹಣದ ಲೂಟಿಗೆ ಮುಂದಾದರು. ಕೊವೀಡ್ ರಾಜ್ಯದಲ್ಲಿ ವ್ಯಾಪಾರವಾಯಿತು.
ಎಲ್ಲೋದ್ರಿ ಸ್ವಾಮಿ..?
ಆರಂಭದಲ್ಲಿ ಎದೆ ಉಬ್ಬಿಸಿ ಕೊರೊನಾ ವಿರುದ್ಧ ಯುದ್ಧ ಸಾರಿದ ಸಚಿವರು ಈಗ ಸೈಲಂಟ್ ಆಗಿದ್ದಾರೆ. ಕೊರೊನಾ ವೇಗಕ್ಕೆ ಬ್ರೇಕ್ ಹಾಕಲು ಆಗದೇ ವಿಷ್ಯಾಂತರ ಮಾಡುತ್ತಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಮಾಡಿದ 2000 ಕೋಟಿ ಅವ್ಯವಹಾರ ಆರೋಪ ಸರ್ಕಾರಕ್ಕೆ ಭಾರಿ ಮುಜುಗರವನ್ನುಂಟು ಮಾಡಿತು. ಇದರಿಂದ ತಪ್ಪಿಸಿಕೊಳ್ಳಲು ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಕೊರೊನಾ ವಿರುದ್ಧ ಯುದ್ಧವನ್ನು ಅರ್ಧದಲ್ಲೇ ಕೈಬಿಟ್ಟು, ವಿಪಕ್ಷಗಳ ವಿರುದ್ಧ ಸಮರ ಸಾರಿದರು. ಈಗ ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಜನರಿಗೆ ಮುಂದಿನ ದಾರಿ ತೋಚದೆ ಶೂನ್ಯ ಮನಸ್ಸಿನಲ್ಲಿ ಮಂಕಾಗಿ ನಿಂತಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮಗೆ ವೋಟು ಹಾಕಿದವರ ಜೊತೆ ನಿಲ್ಲದೇ ಎಲ್ಲಿ ಅಡಗಿದ್ದಾರಾ ಜನ ನಾಯಕರೇ..?
ಡಿಜೆಹಳ್ಳಿ ಕೆಜೆಹಳ್ಳಿ ಗಲಭೆ ಪ್ರಕರಣ ಏನಾಯ್ತು..?
ಬೆಂಗಳೂರಿನ ಡಿಜೆಹಳ್ಳಿ ಕೆಜಿಹಳ್ಳಿಯಲ್ಲಿ ನಡೆದ ಗಲಭೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿತು. ಈ ಪ್ರಕರಣ ಇಡೀ ರಾಜ್ಯದ ಗಮನ ಸೆಳೆಯಿತು. ಇಂತಹ ಅವಕಾಶಕ್ಕೆ ಕಾಯುತ್ತಿದ್ದಂತೆ ಇದ್ದ ರಾಜ್ಯ ಸರ್ಕಾರದ ಸಚಿವರು ಕೊರೊನಾವನ್ನು ಗಾಳಿಗೆ ತೂರಿ, ಕೇವಲ ಈ ಗಲಭೆಯ ಬಗ್ಗೆ ಮಾತನಾಡುವುದನ್ನೇ ಕೆಲಸವಾಗಿಸಿಕೊಂಡರು. ಅನವಶ್ಯಕ ಹೇಳಿಕೆಗಳನ್ನು ನೀಡುತ್ತ ಪ್ರಕರಣಗಳನ್ನು ಪ್ರಚಾರದ ವಸ್ತುವಾಗಿಸಿಕೊಂಡರು. ಆದರೂ ತಪ್ಪಿಸ್ಥರಿಗೆ ಶಿಕ್ಷೆ ಖಚಿತ ಎಂದ ಸಚಿವರು ಈಗ ಎಲ್ಲೋಗಿದ್ದಾರೋ ಗೊತ್ತಿಲ್ಲ.. ಪ್ರಕರಣದ ತನಿಖೆ ಏನಾಯ್ತೋ ಆ ದೇವರೇ ಬಲ್ಲ.
ಮರಿ ರಾಜಾಹುಲಿ ಮೇಲೆ ಬಂದ ಭ್ರಷ್ಟಾಚಾರ ಸುದ್ದಿ ಆಗಿಲ್ಲ ಯಾಕೆ?
ಕೊರೊನಾ ವೈರಸ್ ಅನ್ನು ಮರೆಸುವಂತೆ ಡಿಜೆ ಹಳ್ಳಿ ಗಲಭೆಯ ಭಜನೆ ಮಾಡಿದ ಬಿಜೆಪಿಯ ಲಾಟರಿ ಸಚಿವರು ಬಿ.ವೈ.ವಿಜಯೇಂದ್ರ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪದ ಬಗ್ಗೆ ತುಟಿಬಿಚ್ಚಲಿಲ್ಲ ಯಾಕೆ..? ಸರ್ಕಾರದ ವಿರುದ್ಧ ಯಾರಾದರೂ ಆರೋಪ ಮಾಡಿದರೇ ಕದನಕಲಿಗಳಂತೆ ಗಂಟೆಗಟ್ಟಲೇ ಭಾಷಣ ಬಿಗಿಯುತ್ತ ತಮ್ಮನ್ನ ಸಮರ್ಥಿಸಿಕೊಳ್ಳುವ ನಾಯಕರು ಈ ವಿಚಾರದ ಬಗ್ಗೆ ಉಸಿರು ಬಿಡಲಿಲ್ಲ ಯಾಕೆ..?
ಡ್ರಗ್ ಮತ್ತಿನಲ್ಲಿ ಕೊರೊನಾ, ಡಿಜೆಕೆ ಪ್ರಕರಣ ಮಂಗಮಾಯ
ಕಳೆದ ತಿಂಗಳ ಡಿಜೆ ಹಳ್ಳಿ ಗಲಭೆ ಪ್ರಕರಣದ ಬೆನ್ನಲ್ಲೆ ಈ ತಿಂಗಳ ಆರಂಭದಲ್ಲಿ ಬೆಳಕಿಗೆ ಬಂದ ಡ್ರಗ್ ಮಾಫಿಯಾ ಸಾಮಾನ್ಯವಾಗಿ ರಾಜ್ಯದ ಜನರ ಗಮನ ಸೆಳೆದಿದೆ. ಅಂದಹಾಗೆ ಕಳೆದ ತಿಂಗಳು ಅಂದರೆ ಆಗಸ್ಟ್ ನಲ್ಲಿ ರಾಜ್ಯದಲ್ಲಿ ಕೊರೊನಾ ವೈರಸ್ ಅಕ್ಷರಶಃ ಅಬ್ಬರಿಸಿ ಬೊಬ್ಬಿಸಿದೆ. ಒಂದೇ ತಿಂಗಳಿನಲ್ಲಿ ಅಂದಾಜು 1 ಲಕ್ಷ ಕೊರೊನಾ ಕೇಸ್ ಗಳು ದೃಢಪಟ್ಟಿವೆ. ಆದ್ರೆ ಈ ವಿಷಯದ ಬಗ್ಗೆ ಘನತೆಹೊತ್ತ ಸಚಿವರು ಆಡಳಿತ ಪಕ್ಷದ ನಾಯಕರು, ವಿಪಕ್ಷ ನಾಯಕರು ಯಾರು ಸಹ ಧ್ವನಿ ಎತ್ತಲಿಲ್ಲ. ಕೇವಲ ರಾಜಕೀಯ ಕೆಸರೆರಚಾಟ ಮಾಡಿಕೊಳ್ಳುತ್ತ ಸೋಂಕಿನಿಂದ ಮೃತಪಟ್ಟವರ ಚಿತೆಯಲ್ಲಿ ತಮ್ಮ ರಾಜಕೀಯ ಬೇಳೆಗಳನ್ನು ಬೇವಿಸಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ನಮ್ಮ ದೌರ್ಭಾಗ್ಯ..
ಮಹೇಶ್ ಎಂ ದಂಡು ಸಾಕ್ಷಾ ಟಿವಿ








