ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ನೇರಾನೇರ ಸವಾಲುಗಳ ಅಖಾಡವಾಗಿ ಮಾರ್ಪಟ್ಟಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹಾಗೂ ವಶಪಡಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈ ಚುನಾವಣಾ ಕಾವು ಈಗ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹಾಗೂ ದಾವಣಗೆರೆ ಸ್ಥಳೀಯ ಬಿಜೆಪಿ ನಾಯಕರ ನಡುವಿನ ಪ್ರತಿಷ್ಠೆಯ ಕದನಕ್ಕೆ ಸಾಕ್ಷಿಯಾಗಿದೆ.
ತಾಕತ್ತಿದ್ದರೆ ದಾವಣಗೆರೆಗೆ ಕಾಲಿಡಲಿ ಎಂದು ಬಿಜೆಪಿ ಮುಖಂಡ, ಮಾಜಿ ಮೇಯರ್ ಬಿ.ಜಿ ಅಜಯ್ ಕುಮಾರ್ ಹಾಕಿದ್ದ ಸವಾಲನ್ನು ಸ್ವೀಕರಿಸಿ ಅಖಾಡಕ್ಕಿಳಿದ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಬಿಜೆಪಿ ಕಾರ್ಯಕರ್ತರು ಧಿಕ್ಕಾರದ ಸ್ವಾಗತ ಕೋರಿದ್ದಾರೆ. ಪ್ರದೀಪ್ ಈಶ್ವರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಮಲ ಪಡೆಯ ಕಾರ್ಯಕರ್ತರು, ಅವರಿಗೆ ರಸ್ತೆಯಲ್ಲಿ ಪೊರಕೆ ಮತ್ತು ಚಪ್ಪಲಿಗಳನ್ನು ಪ್ರದರ್ಶಿಸಿ, ಹುಚ್ಚ ಹುಚ್ಚ ಎಂದು ಜರಿದರು.
ಇತ್ತೀಚೆಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರದೀಪ್ ಈಶ್ವರ್, ತಮ್ಮ ಭಾಷಣದಲ್ಲಿ ಬಿಜೆಪಿಯವರನ್ನು ತೀವ್ರವಾಗಿ ಟೀಕಿಸಿದ್ದರು. ಬಿಜೆಪಿಯವರು ಅಯೋಗ್ಯರು, ಅವರು ಮುಸ್ಲಿಂ ಮಹಿಳೆಯರಿಗೆ ಕಿಂಚಿತ್ತೂ ಗೌರವ ನೀಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದರು. ಶಾಸಕರ ಈ ಹೇಳಿಕೆ ಸ್ಥಳೀಯ ಬಿಜೆಪಿಗರ ಕಣ್ಣು ಕೆಂಪಾಗಿಸಿತ್ತು.
ಈ ಹೇಳಿಕೆಗೆ ತಿರುಗೇಟು ನೀಡಿದ್ದ ಮಾಜಿ ಮೇಯರ್ ಬಿ.ಜಿ ಅಜಯ್ ಕುಮಾರ್, ಮಹಿಳೆಯರ ಬಗ್ಗೆ ಮಾತನಾಡುವ ನೈತಿಕತೆ ಪ್ರದೀಪ್ ಈಶ್ವರ್ ಅವರಿಗೆ ಇಲ್ಲ. ಇಡೀ ದಾವಣಗೆರೆಯ ಮುಸ್ಲಿಂ ಮಹಿಳೆಯರಿಗೆ ಅವರು ಅವಮಾನ ಮಾಡಿದ್ದಾರೆ. ಧೈರ್ಯವಿದ್ದರೆ, ತಾಕತ್ತಿದ್ದರೆ ಅವರು ಮತ್ತೆ ದಾವಣಗೆರೆಗೆ ಕಾಲಿಡಲಿ ಎಂದು ಏಕವಚನದಲ್ಲಿಯೇ ಬಹಿರಂಗ ಸವಾಲು ಎಸೆದಿದ್ದರು.
ಸವಾಲು ಸ್ವೀಕರಿಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಪ್ರದೀಪ್ ಈಶ್ವರ್
ಅಜಯ್ ಕುಮಾರ್ ಅವರ ಈ ಸವಾಲನ್ನು ಗಂಭೀರವಾಗಿ ತೆಗೆದುಕೊಂಡ ಪ್ರದೀಪ್ ಈಶ್ವರ್, ನಾನು ದಾವಣಗೆರೆಗೆ ಮಾತ್ರವಲ್ಲ, ನಿಮ್ಮ ಬಿಜೆಪಿ ಕಚೇರಿ ಬಳಿಯೇ ಬಂದು ಪ್ರಚಾರ ಮಾಡುತ್ತೇನೆ ಎಂದು ಮರು ಸವಾಲು ಹಾಕಿದ್ದರು. ಅದರಂತೆಯೇ ಇಂದು ದಾವಣಗೆರೆಗೆ ಆಗಮಿಸಿದ ಅವರು, ಪಿ.ಬಿ ರಸ್ತೆಯಿಂದಲೇ ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಕಚೇರಿಯತ್ತ ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು.
ಶಾಸಕರು ಬಿಜೆಪಿ ಕಚೇರಿಯತ್ತ ಬರುತ್ತಿದ್ದಂತೆ ಇತ್ತ ಬಿಜೆಪಿ ಕಾರ್ಯಕರ್ತರು ಕೂಡ ಅವರನ್ನು ತಡೆಯಲು ಸಜ್ಜಾಗಿ ನಿಂತಿದ್ದರು. ಎರಡೂ ಗುಂಪುಗಳು ದಾವಣಗೆರೆಯ ಗುಳ್ಳಮ್ಮ ದೇವಸ್ಥಾನದ ಬಳಿ ಮುಖಾಮುಖಿಯಾಗುವ ಸನ್ನಿವೇಶ ನಿರ್ಮಾಣವಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತಿದ್ದ ಪೊಲೀಸ್ ಇಲಾಖೆ, ಭಾರಿ ಸಂಖ್ಯೆಯಲ್ಲಿ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಿತ್ತು. ಪೊಲೀಸರು ಎರಡು ಗುಂಪುಗಳ ನಡುವೆ ಗೋಡೆಯಂತೆ ನಿಂತು ಸಂಭಾವ್ಯ ಘರ್ಷಣೆಯನ್ನು ಯಶಸ್ವಿಯಾಗಿ ತಡೆದರು.
ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್
ಬಿಜೆಪಿ ಕಾರ್ಯಕರ್ತರ ವಿರೋಧ ಮತ್ತು ಧಿಕ್ಕಾರದ ನಡುವೆಯೇ ಗುಡುಗಿದ ಶಾಸಕ ಪ್ರದೀಪ್ ಈಶ್ವರ್, ದಮ್ ಇದ್ರೆ ದಾವಣಗೆರೆಗೆ ಬನ್ನಿ ಅಂತ ಸವಾಲ್ ಹಾಕಿದ್ರು. ಈಗ ನಾನು ನಿಮ್ಮ ಬಿಜೆಪಿ ಕಚೇರಿ ಮುಂದೆಯೇ ಬಂದು ನಿಂತಿದ್ದೀನಿ. ಏನೂ ಮಾಡೋಕಾಗಿಲ್ಲ ಎಂದು ನೇರವಾಗಿ ತಿರುಗೇಟು ನೀಡಿದರು. ಇದೇ ವೇಳೆ ಬಿಜೆಪಿ ಹೈಕಮಾಂಡ್ ನಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೋತಿ ಮರಿ ಎಂದು ಕರೆಯುವ ಮೂಲಕ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದರು.
ಒಟ್ಟಿನಲ್ಲಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಈಗ ಕೇವಲ ಅಭ್ಯರ್ಥಿಗಳ ನಡುವಿನ ಹಣಾಹಣಿಯಾಗಿ ಉಳಿದಿಲ್ಲ, ಬದಲಾಗಿ ಪ್ರದೀಪ್ ಈಶ್ವರ್ ಮತ್ತು ಸ್ಥಳೀಯ ಬಿಜೆಪಿಗರ ನಡುವಿನ ಅಹಂನ ಕದನವಾಗಿ ಮಾರ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಇನ್ನಷ್ಟು ಹೈಡ್ರಾಮಾಗಳಿಗೆ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.








