ಯಾದಗಿರಿ: ಬರೋಬ್ಬರಿ 25 ವರ್ಷಗಳ ಹಿಂದೆಯೇ ಸಾವನ್ನಪ್ಪಿದ ವ್ಯಕ್ತಿಯ ಹೆಸರಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಸೃಷ್ಟಿಸಿ ಆಸ್ತಿ ಕಬಳಿಸಲು ಯತ್ನಿಸಿದ ಭೂಪನೊಬ್ಬ ಈಗ ಬಲೆಗೆ ಬಿದ್ದಿದ್ದಾನೆ.
ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಗ್ರಾಮದ ನಿವಾಸಿ ನರಸಪ್ಪ ಕಳೆದ 25 ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಮೃತ ನರಸಪ್ಪನ ಹೆಸರಿಗೆ ಸುಮಾರು 3 ಎಕರೆ 28 ಗುಂಟೆ ಜಮೀನು ಇತ್ತು. ಆದರೆ, ನರಸಪ್ಪ ಸಾವನ್ನಪ್ಪಿ 25 ವರ್ಷಗಳು ಕಳೆದಿದ್ದವು. ಆತನ ಕುಟುಂಬಸ್ಥರು ಆಸ್ತಿ ವರ್ಗಾವಣೆ ಮಾಡಿಸಿಕೊಂಡಿರಲಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದ ಇದೇ ಗ್ರಾಮದ ಗಂಗಪ್ಪ ಎಂಬ ವ್ಯಕ್ತಿ, ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಆಸ್ತಿ ವರ್ಗಾವಣೆಗೆ ಪ್ರಯತ್ನ ನಡೆಸಿದ್ದ.
ಯಾದಗಿರಿಯ ಹೆಡಗಿಮುದ್ರಾ ಗ್ರಾಮದ ನಿವಾಸಿ ನರಸಪ್ಪ ಎಂಬ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಗಂಗಪ್ಪ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಇದೆ ಗ್ರಾಮದ ಸುಭಾಷ್ ಎಂಬಾತನಿಗೆ ಮಾರಾಟ ಮಾಡಿದ್ದಾನೆ. ಹೆಡಗಿಮುದ್ರ ಗ್ರಾಮದ ನರಸಪ್ಪನೇ ಜಮೀನಿನ ಮಾಲೀಕ ಅಂತ ಸುಭಾಷ್ಗೆ ನಂಬಿಸಿದ್ದಾನೆ. ನಂತರ ಸುಮಾರು ಮೂರು ಲಕ್ಷ ಹಣ ಪಡೆದು ಸುಭಾಷ್ ಗೆ ಮಾರಾಟ ಮಾಡಿದ್ದಾನೆ.
ಇಷ್ಟೆಲ್ಲ ಆದರೂ ಮೃತ ನರಸಪ್ಪನ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಇಲ್ಲ. ಬೆಟ್ಟದ ಮದ್ಯೆ ಜಮೀನು ಇರುವ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಉಳುಮೆ ಕಡಿಮೆ ಮಾಡಿದ್ದರು. ನಕಲಿ ವ್ಯಕ್ತಿ ಸೃಷ್ಟಿ ಮಾಡಿ ಜಮೀನು ಮಾರಾಟ ಮಾಡಿ ರಿಜಿಸ್ಟರ್ ಮಾಡಿ ಬಳಿಕ ಮುಟೇಷನ್ ವೇಳೆ ಅಧಿಕಾರಿಗಳು ಗ್ರಾಮಕ್ಕೆ ಬಂದ ಮೇಲೆ ಗಂಗಪ್ಪನ ಕಳ್ಳಾಟ ಗೊತ್ತಾಗಿದೆ.