14 ವರ್ಷದ ಬಾಲಕನಿಗೆ ನ್ಯಾಯಾಧೀಶರಿಂದ ಲೈಂಗಿಕ ದೌರ್ಜನ್ಯ
ಜೈಪುರ: ನ್ಯಾಯಾಧೀಶರನ್ನು ನ್ಯಾಯದ ಪರ ನಿಲ್ಲುವ, ಅನ್ಯಾಯವಾದವರಿಗೆ ನ್ಯಾಯ ಕೊಡಿಸುವ ದೇವರಿನ ರೂಪದಲ್ಲಿ ಕಾಣುತ್ತೇವೆ. ಆದ್ರೆ ಇಲ್ಲೊಬ್ಬ ನ್ಯಾಯಾಧೀಶರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ಬಂಧನಕ್ಕೆ ಒಳಗಾಗಿದ್ದಾರೆ. 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನ್ಯಾಯಾಧೀಶರನ್ನ ಬಂಧಿಸಲಾಗಿರುವ ಘಟನೆ ಜೈಪುರದಲ್ಲಿ ನಡೆದಿದೆ. ಜಿತೇಂದ್ರ ಗುಲಿಯಾ ಅವರನ್ನು ಬಂಧಿಸಲಾಗಿದ್ದು, ಗುರುವಾರ ಭರತ್ ಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಬಿಎಂ ಆಸ್ಪತ್ರೆಯಲ್ಲಿ ಗುಲಿಯಾ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಸಂತ್ರಸ್ತ ಬಾಲಕ ಸಹ ಹೇಳಿಕೆ ನೀಡಲು ನ್ಯಾಯಾಲಯಕ್ಕೆ ತೆರಳಿದ್ದು, ಅನಾರೋಗ್ಯದ ಕಾರಣ, ಆತನನ್ನು ಆಸ್ಪತ್ರೆಗೆ ದಾಖಲಿಸಲು ನ್ಯಾಯಾಲಯ ಸೂಚಿಸಿದೆ. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ಮತ್ತು ಎಸ್ಪಿ ದೇವೇಂದ್ರ ವಿಷ್ಣೋಯ್ ಅವರು ಸಂತ್ರಸ್ತನ ಮನೆಗೆ ಭೇಟಿ ನೀಡಿದ್ದರು. ನ್ಯಾಯಾಧೀಶರ ಕುಟುಂಬದವರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಬಾಲಕನ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ. ಪ್ರಕರಣದ ತನಿಖಾಧಿಕಾರಿ ಸತೀಶ್ ವರ್ಮಾ ಅವರು ಜೈಪುರದಿಂದ ನ್ಯಾಯಾಧೀಶರನ್ನು ಬಂಧಿಸಿ ಭರತ್ಪುರಕ್ಕೆ ಕರೆತಂದಿದ್ದಾರೆ ಎಂದು ಎಸ್ಪಿ ದೇವೇಂದ್ರ ವಿಷ್ಣೋಯ್ ಹೇಳಿದ್ದಾರೆ.