ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಈ ಘಟನೆ ಹಲವರಿಗೆ ನೋವುಂಟು ಮಾಡಿದರೆ, ಹಲವರು ದರ್ಶನ್ ಗೆ ತಕ್ಕ ಶಾಸ್ತಿ ಆಗಲಿ ಅಂತಿದ್ದಾರೆ. ಆದರೂ ದರ್ಶನ್ ಆಪ್ತರ ಮನಸ್ಸಿಗೆ ಘಾಸಿ ಮಾಡಿದ್ದಂತು ಸತ್ಯ. ಹೀಗಾಗಿಯೇ ಆಪ್ತ ಬಳಗದ ಕೆಲವರು ಘಟನೆಯ ಕುರಿತು ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ ಹ್ಯಾಟ್ರಿಕ್ ಹೀರೋ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿರಿಯ ನಟ ಶಿವರಾಜ್ಕುಮಾರ್,ಯಾವುದೇ ಪ್ರಕರಣ ಇರಲಿ ಅಲ್ಲಿ ನ್ಯಾಯ ಸಿಗಬೇಕು ಎಂದು ಅವರು ಹೇಳಿದ್ದಾರೆ. ಒಮ್ಮೊಮ್ಮೆ ನಿರೀಕ್ಷೆ ಮೀರಿದ ಘಟನೆಗಳು ನಡೆಯುತ್ತವೆ. ಏನೂ ಮಾಡೋಕೆ ಆಗಲ್ಲ. ಹಣೆಬರಹ ಅಂತ ಒಂದು ಇರುತ್ತದೆ. ಆ ವಿಚಾರ ಬಂದಾಗ ನಾವು ಏನೂ ಮಾಡೋಕೆ ಆಗುವುದಿಲ್ಲ. ಆದರೆ, ಮಾತಾಡೋಕೆ ಹೋದರೂ, ನಾವು ಮಾಡುತ್ತಿರುವುದು ಸರಿಯಾಗಿ ಇದೆಯಾ ಎಂಬುದನ್ನು ಮೊದಲು ಯೋಚನೆ ಮಾಡಬೇಕು. ಅದನ್ನು ಹೊರತುಪಡಿಸಿ ನಾವು ಏನೂ ಹೇಳೋಕೆ ಬರಲ್ಲ ಎಂದು ಹೇಳಿದ್ದಾರೆ.
ಇಂತಹ ಘಟನೆ ನಡೆದಾಗ ಮನಸ್ಸಿಗೆ ತುಂಬಾ ನೋವಾಗತ್ತೆ. ಯಾಕಪ್ಪಾ ಹೀಗೆಲ್ಲ ಆಯಿತು ಅಂತ ಬೇಸರ ಆಗುತ್ತದೆ. ರೇಣುಕಾ ಸ್ವಾಮಿ ಕುಟುಂಬಕ್ಕೆ, ದರ್ಶನ್ ಅವರ ಕುಟುಂಬಕ್ಕೆ ನೋವಾಗುತ್ತದೆ. ದರ್ಶನ್ ಮಗನ ಬಗ್ಗೆ ಬೇಸರ ಆಗುತ್ತೆ. ಆದರೆ, ಏನೂ ಮಾಡೋಕೆ ಆಗಲ್ಲ, ನಾವು ಎಲ್ಲದನ್ನೂ ಎದುರಿಸಬೇಕು. ಈಗಾಗಲೇ ಪ್ರಕರಣದ ತನಿಖೆ ನಡೆದಾಗಿದೆ. ಏನಾಗುತ್ತದೋ ನೋಡೋಣ. ಏನಾಗಬೇಕೋ ಅದೇ ಆಗುತ್ತದೆ. ನ್ಯಾಯ ಏನಿದೆಯೋ ಅದೇ ಆಗುತ್ತದೆ. ಇದರ ಮೇಲೆ ಇನ್ನೇನೂ ಹೇಳಲು ನಾನು ಇಷ್ಟಪಡಲ್ಲ. ಎಲ್ಲವೂ ಹಣೆಬರಹ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರೇಣುಕಾ ಸ್ವಾಮಿ, ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಅಪಹರಣ ಮಾಡಿಕೊಂಡು ಬೆಂಗಳೂರಿಗೆ ಕರೆತಂದು ಸಾಯಿಸಿದ ಆರೋಪ ದರ್ಶನ್ ಮತ್ತು ಟೀಂ ಮೇಲಿದೆ. ಈಗಾಗಲೇ ಅವರೆಲ್ಲ ಬಂಧನವಾಗಿದ್ದಾರೆ. ಸೆಲೆಬ್ರಿಟಿಗಳೆಲ್ಲ ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಅನೇಕ ಸೆಲೆಬ್ರಿಟಿಗಳು ಒತ್ತಾಯಿಸಿದ್ದಾರೆ. ಇದಕ್ಕೆ ಶಿವಣ್ಣ ಕೂಡ ಹೊರತಲ್ಲ.