ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆರೋಪಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವಿಜಯೇಂದ್ರ ಅವರ ಭಾಷಣಗಳು ಅವಿವೇಕತನದಿಂದ ಕೂಡಿದ್ದು, ಅತ್ಯಂತ ಕೀಳುಮಟ್ಟದಲ್ಲಿವೆ ಎಂದು ಸಚಿವರು ಕಿಡಿಕಾರಿದ್ದಾರೆ.
ಸಂಸ್ಕಾರದ ಪಾಠ
ತಮ್ಮ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದ ವಿಜಯೇಂದ್ರ ಅವರಿಗೆ ಸಂಸ್ಕಾರದ ಪಾಠ ಮಾಡಿರುವ ಸಚಿವ ತಂಗಡಗಿ, ರಾಜಕೀಯ ಅನುಭವ, ವಯಸ್ಸು ಮತ್ತು ಜನಸೇವೆಯಲ್ಲಿ ನಾನು ನಿಮಗಿಂತ ಹಿರಿಯ. ಹಿರಿಯರಿಗೆ ಗೌರವ ಕೊಡದಿದ್ದರೆ ನೀವು ದೊಡ್ಡವರಾಗುವುದಿಲ್ಲ, ಅದು ನಿಮ್ಮ ದಡ್ಡತನವನ್ನು ತೋರಿಸುತ್ತದೆ. ನನಗೂ ನಿಮಗಿಂತ ಕೀಳು ಭಾಷೆಯಲ್ಲಿ ಮಾತನಾಡಲು ಬರುತ್ತದೆ, ಆದರೆ ನನಗಿರುವ ಸಂಸ್ಕಾರ ಅದಕ್ಕೆ ಅಡ್ಡಿಪಡಿಸುತ್ತದೆ ಎಂದು ತಿರುಗೇಟು ನೀಡಿದರು. ವಿಜಯೇಂದ್ರ ಅವರ ಈ ಬೊಬ್ಬೆಗಳು ಅಲುಗಾಡುತ್ತಿರುವ ತಮ್ಮ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಸ್ಮಶಾನ ರೋದನೆ ಎಂದು ಲೇವಡಿ ಮಾಡಿದರು.
ರೈತರಿಗೆ ನೀರು ಹರಿಸುವ ವಿಚಾರದಲ್ಲಿ ವಿಜಯೇಂದ್ರ ಮಾಡಿರುವ ಟೀಕೆಗೆ ಉತ್ತರಿಸಿದ ಸಚಿವರು, ಸಂಕಷ್ಟದ ಕಾಲದಲ್ಲೂ ರೈತರ ಹಿತ ಕಾಯುವ ಕೆಲಸವನ್ನು ನಾವು ಮಾಡಿದ್ದೇವೆ. ಕೇಂದ್ರ ಸರಕಾರ 2023ರ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5,300 ಕೋಟಿ ರೂಪಾಯಿ ಅನುದಾನವನ್ನು ಈವರೆಗೂ ಏಕೆ ಬಿಡುಗಡೆ ಮಾಡಿಸಿಲ್ಲ? ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹದಾಯಿ ಯೋಜನೆ ಜಾರಿ ಮಾಡುತ್ತೇವೆ ಎಂದಿದ್ದ ನಿಮ್ಮ ತಂದೆಯವರ ಮಾತು ಏನಾಯಿತು? ಮೊದಲು ಕೇಂದ್ರದಿಂದ ಅನುದಾನ ಮತ್ತು ಅನುಮತಿ ತರುವ ಧೈರ್ಯ ತೋರಿಸಿ ಎಂದು ಸವಾಲು ಹಾಕಿದರು.
ಬಿಜೆಪಿ ಅವಧಿಯ ಸಾಲು ಸಾಲು ಹಗರಣಗಳನ್ನು ನೆನಪಿಸಿದ ಸಚಿವರು, ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋದ ಇತಿಹಾಸ ನಿಮ್ಮ ತಂದೆಯವರದ್ದು. ಡಿ-ನೋಟಿಫಿಕೇಷನ್, ಪ್ರೇರಣಾ ಟ್ರಸ್ಟ್, ಗಣಿ ಲೂಟಿ, ಅಶೋಕ್ ಅವರ ಭೂ ಹಗರಣ, ಚಿಲುಮೆ ಹಗರಣ ಹೀಗೆ ಭ್ರಷ್ಟಾಚಾರದ ಪಿತಾಮಹರನ್ನು ಪಕ್ಕದಲ್ಲಿ ಇಟ್ಟುಕೊಂಡು ನೀವು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಜನರಿಗೆ ವಾಕರಿಕೆ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಬಡವರ ಮತ್ತು ರೈತರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ನಾಯಕರು ಈಗ ಮಾಡುತ್ತಿರುವ ಪಾದಯಾತ್ರೆ ಕೇವಲ ನಾಟಕ ಎಂದು ತಂಗಡಗಿ ಲೇವಡಿ ಮಾಡಿದರು. ವಿಧಾನಸಭೆಯಲ್ಲಿ ಬರಗಾಲದ ಬಗ್ಗೆ ಚರ್ಚೆ ನಡೆಸಲು ಯೋಗ್ಯತೆ ಇಲ್ಲದವರು ಈಗ ರಸ್ತೆಯಲ್ಲಿ ನಿಂತು ಹಾರಾಟ ಮಾಡುತ್ತಿದ್ದಾರೆ. ನೀವು ಮಾಡುತ್ತಿರುವ ಈ ಹೋರಾಟ ಜನಪರ ಹೋರಾಟವಲ್ಲ, ಬದಲಿಗೆ ಮಜಾ ಭಾರತ ಅಥವಾ ಕಾಮಿಡಿ ಕಿಲಾಡಿಗಳು ಶೋನ ಮತ್ತೊಂದು ಎಪಿಸೋಡ್ನಂತಿದೆ ಎಂದು ವ್ಯಂಗ್ಯವಾಡಿದರು.
ಬಿವೈ ವಿಜಯೇಂದ್ರ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಗುಡುಗಿದ್ದಾರೆ.








