ಚೆನ್ನೈ: ನಿನ್ನೆ ನಡೆದ ಲಖನೌ ಸೂಪರ್ ಜಯಂಟ್ಸ್ ವಿರುದ್ದದ ಪಂದ್ಯದಲ್ಲಿ ಚೆನ್ನೈ 12 ರನ್ ಗಳ ಗೆಲುವುಪಡೆದಿದೆ. ಆದರೂ ತಮ್ಮ ತಂಡದ ಬೌಲರ್ಗಳ ವಿರುದ್ದ ನಾಯಕ ಎಂಎಸ್ ಧೋನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಪಂದ್ಯಗಳಿಗೆ ಸುಧಾರಣೆ ಕಂಡುಕೊಳ್ಳಬೇಕೆಂದು ಎಚ್ಚರಿಕೆ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ಗಳ ಪ್ರದರ್ಶನದ ಬಗ್ಗೆ ಎಂಎಸ್ ಧೋನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಬೌಲರ್ಗಳು 13 ವೈಡ್ ಬಾಲ್ಗಳು, 3 ನೋ ಬಾಲ್ಗಳು ಸೇರಿದಂತೆ ಹೆಚ್ಚುವರಿಯಾಗಿ 16 ರನ್ ಬಿಟ್ಟು ಕೊಟ್ಟಿದ್ದರು.
ವೇಗಿ ದೀಪಕ್ ಚಹರ್ ಅವರು ಮೂರು ನೋ ಬಾಲ್ಗಳನ್ನು ಎಸೆದಿದ್ದರೆ, ತವರು ಮೈದಾನದಲ್ಲಿ ಇನ್ನುಳಿದ ಬೌಲರ್ಗಳು ಒಟ್ಟಾರೆ 13 ವೈಡ್ ಬಾಲ್ಗಳನ್ನು ಎಸೆದಿದ್ದರು. ಮೊದಲನೇ ಪಂದ್ಯದಲ್ಲಿಯೂ ಸಿಎಸ್ಕೆ ಬೌಲರ್ಗಳು 4 ವೈಡ್ ಬಾಲ್ಗಳು ಹಾಗೂ ಎರಡು ನೋ ಬಾಲ್ಗಳನ್ನು ಹಾಕಿದ್ದರು.
ಗೆಲುವಿನ ನಂತರ ಮಾತನಾಡಿದ ಧೋನಿ, ನೋ ಬಾಲ್ಗಳು ಹಾಗೂ ವೈಡ್ ಬಾಲ್ಗಳಿಲ್ಲದೆ ಅವರು ಬೌಲ್ ಮಾಡಬೇಕಾದ ಅಗತ್ಯವಿದೆ. ನಾವು ಸಾಕಷ್ಟು ಹೆಚ್ಚುವರಿ ಎಸೆತಗಳನ್ನು ಹಾಕಿದ್ದೇವೆ ಹಾಗೂ ಇವುಗಳನ್ನು ನಿಯಂತ್ರಿಸಬೇಕಾಗಿದೆ. ಇಲ್ಲವಾದಲ್ಲಿ ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.