ಜ್ವರ ಬಂದಿದೆ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದ ಯುವಕನ ಪ್ರಾಣವೇ ಹಾರಿಹೋದ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಉಡುಪಿ ಮೂಲದ ಅಮರ್ ಶೆಟ್ಟಿ (31) ಸಾವನ್ನಪ್ಪಿದ ವ್ಯಕ್ತಿ. ಈ ಯುವಕ ದುಬೈನಲ್ಲಿ 7 ವರ್ಷ ಕೆಲಸ ಮಾಡಿ, ಲೈಫ್ ಸೆಟಲ್ ಮಾಡಿಕೊಳ್ಳುವುದಕ್ಕಾಗಿ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ. ಈತನಿಗೆ ಕಳೆದ ವಾರ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಪಕ್ಕದಲ್ಲಿದ್ದ ಮಾಗಡಿ ರಸ್ತೆಯಲ್ಲಿರುವ ಕ್ಲಿನಿಕ್ ಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದ.
ಕ್ಲಿನಿಕ್ನ ವೈದ್ಯ ತಪಾಸಣೆ ನಡೆಸಿ ಜ್ವರಕ್ಕೆ ಇಂಜೆಕ್ಷನ್ ನೀಡಿದ್ದಾರೆ. ಅಮರ್ ಗೆ ಇಂಜೆಕ್ಷನ್ ಕೊಟ್ಟ ಭಾಗದಲ್ಲಿ ನೋವು, ಊತ ಕಾಣಿಸಿಕೊಂಡಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಯುವಕ ದಾಖಲಾಗಿದ್ದ. ಅಷ್ಟರಲ್ಲಿ ಯುವಕನ ಬಹು ಅಂಗಾಂಗಗಳಿಗೆ ಹಾನಿ ಆಗಿದೆ. ಕಿಮ್ಸ್ ಆಸ್ಪತ್ರೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸಿದೆ ಸಾವನ್ನಪ್ಪಿದ್ದಾನೆ.
ಯುವಕ ಅಮರ್ ಶೆಟ್ಟಿ ಸಾವಿಗೆ ಇಂಜೆಕ್ಷನ್ ಕೊಟ್ಟ ವೈದ್ಯರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಕೆಪಿ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಿಮ್ಸ್ ಶವಗಾರದ ಮುಂದೆ ಮೃತನ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಆರೋಪಿತ ವೈದ್ಯ ನನ್ನದೇನೂ ತಪ್ಪಿಲ್ಲ, ನನ್ನ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.