ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಪತ್ರಕರ್ತರಿಗಾಗಿ ಆಯೋಜಿಸಿದ್ದರು ಎನ್ನಲಾದ ‘ಬಜೆಟ್ ಪೂರ್ವ ಗುಂಡು ಪಾರ್ಟಿ’ ರಾಜ್ಯ ರಾಜಕಾರಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದದ ಕುರಿತು ಇದೀಗ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಸ್ಫೋಟಕ ಪ್ರತಿಕ್ರಿಯೆ ನೀಡಿದ್ದು, ಇಂತಹ ಪಾರ್ಟಿಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಪತ್ರಕರ್ತರಿಗೆ ಸತ್ಯ ಸಿಗುವುದೇ ಪಾರ್ಟಿಗಳಲ್ಲಿ
ರಾಜಕಾರಣಿಗಳ ಮತ್ತು ಪತ್ರಕರ್ತರ ನಡುವಿನ ಈ ರೀತಿಯ ಪಾರ್ಟಿಗಳ ನಂಟು ಇಂದಿನದಲ್ಲ, ಇದು ಎರಡೂ ವೃತ್ತಿಗಳು ಆರಂಭವಾದ ದಿನದಿಂದಲೂ ನಡೆದುಕೊಂಡು ಬಂದಿದೆ. ಕುಡಿಯುವ ಅಭ್ಯಾಸ ಇರುವ ಯಾವುದೇ ಕಾರ್ಯನಿರತ ಪತ್ರಕರ್ತ ತಾನು ರಾಜಕಾರಣಿಗಳ ಜೊತೆ ಗುಂಡು ಹಾಕಿಲ್ಲ ಎಂದರೆ ಆತ ಪತ್ರಕರ್ತನೇ ಅಲ್ಲ ಎಂದು ಮಟ್ಟು ಖಡಕ್ ಆಗಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಗಳಲ್ಲಿ ಕೇವಲ ಅಧಿಕೃತ ಸುದ್ದಿಗಳು
ಮಾತ್ರ ಸಿಗುತ್ತವೆ. ಆದರೆ ಸುದ್ದಿಯ ಹಿಂದಿನ ಅಸಲಿ ಸತ್ಯಗಳು, ಒಳಮರ್ಮಗಳು ಹೊರಬೀಳುವುದು ಇಂತಹ ಊಟ, ತಿಂಡಿ ಹಾಗೂ ಮದ್ಯದ ಪಾರ್ಟಿಗಳಲ್ಲಿಯೇ. ಮದ್ಯ ಸೇವಿಸಿದಾಗ ಮನುಷ್ಯ ಸ್ವಲ್ಪ ಭಾವುಕ ಹಾಗೂ ಪ್ರಾಮಾಣಿಕನಾಗುತ್ತಾನೆ. ಆ ಸಮಯದಲ್ಲಿ ಆತನಿಂದ ಹೊರಬೀಳುವ ಹಳೆಯ ನೆನಪುಗಳು ಮತ್ತು ಸತ್ಯ ಸಂಗತಿಗಳು ಕಸುಬುದಾರ ವರದಿಗಾರನಿಗೆ ಅತ್ಯಮೂಲ್ಯ ಮಾಹಿತಿಯಾಗಿರುತ್ತವೆ. ಕೇವಲ ಚಹಾ ಅಥವಾ ನಿಂಬೆಹಣ್ಣಿನ ರಸ ಹಿಡಿದುಕೊಂಡು ಇಂತಹ ಆಳವಾದ ವಿಷಯಗಳನ್ನು ಕಲೆಹಾಕಲು ಸಾಧ್ಯವಿಲ್ಲ ಎಂದು ಅವರು ತಮ್ಮ ವೃತ್ತಿಜೀವನದ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಇದು ಸಿದ್ದರಾಮಯ್ಯನವರಿಂದ ಶುರುವಾದದ್ದಲ್ಲ
ಗುಂಡು ಪಾರ್ಟಿ ಸಂಸ್ಕೃತಿ ಸಿದ್ದರಾಮಯ್ಯನವರಿಂದ ಆರಂಭವಾಗಿಲ್ಲ ಎಂದು ಇತಿಹಾಸವನ್ನು ಕೆದಕಿರುವ ಮಟ್ಟು, ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ಕೂಡ ಹಿರಿಯ ಪತ್ರಕರ್ತರನ್ನು ಕರೆದು ದುಬಾರಿ ಮದ್ಯದೊಂದಿಗೆ ಊಟ ಮಾಡಿಸಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂಬುದನ್ನು ನೆನಪಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರು ದೆಹಲಿಯಲ್ಲಿ ಪತ್ರಕರ್ತರಿಗೆ ಗುಂಡು ಪಾರ್ಟಿ ಆಯೋಜಿಸುತ್ತಿದ್ದರಾದರೂ, ತಾವು ಮಾತ್ರ ನಿಂಬೆಹಣ್ಣಿನ ರಸ ಹಿಡಿದು ಕೂರುತ್ತಿದ್ದರು ಎಂಬ ಸ್ವಾರಸ್ಯಕರ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ.
ಸಿದ್ದರಾಮಯ್ಯನವರಿಗೆ ಕುಡಿತದ ವ್ಯಾಮೋಹವಿಲ್ಲ
ತಾವು ನೋಡಿದಂತೆ ಸಿದ್ದರಾಮಯ್ಯನವರಿಗೆ ಮದ್ಯದ ಬಗ್ಗೆ ಅತಿಯಾದ ವ್ಯಾಮೋಹವಿಲ್ಲ. ವಿರೋಧ ಪಕ್ಷದ ನಾಯಕರಾಗಿದ್ದ ಕಾಲದಲ್ಲಿ ಅವರು ಮದ್ಯಸೇವನೆ ಮಾಡುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕುಡಿತದ ಬಗ್ಗೆ ಅವರಲ್ಲಿದ್ದ ಮಡಿವಂತಿಕೆ ಕಡಿಮೆಯಾಗಿದ್ದು, ಬಜೆಟ್ ಪೂರ್ವದ ಇಂತಹ ಪಾರ್ಟಿಗಳಲ್ಲಿ ಸಣ್ಣ ಪೆಗ್ ಹಾಕುತ್ತಾರೆ. ನಂತರ ಎಲ್ಲರನ್ನೂ ಮಾತನಾಡಿಸಿ ತೆರಳುತ್ತಾರೆ. ಅಷ್ಟಕ್ಕೂ ಇಂತಹ ಪಾರ್ಟಿಗಳಿಗೆ ಸರ್ಕಾರದ ಬೊಕ್ಕಸದಿಂದ ಹಣ ಹೋಗುವುದಿಲ್ಲ, ಬದಲಾಗಿ ಯಾವುದಾದರೂ ಸಚಿವರು ಬಿಲ್ ಪಾವತಿಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಫೋಟೋ ಹರಿಬಿಟ್ಟ ಪತ್ರಕರ್ತನ ನಡವಳಿಕೆಗೆ ತೀವ್ರ ಖಂಡನೆ
ತಮ್ಮ ಅಧಿಕಾರಾವಧಿಯಲ್ಲಿ ಇಂತಹ ಪಾರ್ಟಿಗಳಲ್ಲಿ ಮದ್ಯದ ಬಾಟಲಿಗಳು ಮತ್ತು ಗ್ಲಾಸ್ ಗಳು ಕ್ಯಾಮೆರಾ ಕಣ್ಣಿಗೆ ಬೀಳದಂತೆ ತಾವು ಮತ್ತು ಪ್ರಭಾಕರ್ ಅವರು ಎಚ್ಚರಿಕೆ ವಹಿಸುತ್ತಿದ್ದೆವು. ಮುಖ್ಯಮಂತ್ರಿಗಳು ಪಾರ್ಟಿ ಆಯೋಜಿಸುವುದು ಯಾವುದೇ ಅಪರಾಧವಲ್ಲ. ಆದರೆ, ಅಲ್ಲಿ ಭಾಗವಹಿಸಿದ್ದ ಪತ್ರಕರ್ತನೊಬ್ಬ ಆ ಆಪ್ತ ಕ್ಷಣಗಳ ಫೋಟೋ ತೆಗೆದು ಬೇಜವಾಬ್ದಾರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಅಪರಾಧವಲ್ಲದಿದ್ದರೂ, ಅದು ಖಂಡಿತವಾಗಿಯೂ ಸಜ್ಜನಿಕೆಯ ನಡವಳಿಕೆಯಲ್ಲ ಎಂದು ದಿನೇಶ್ ಅಮಿನ್ ಮಟ್ಟು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.







