ನಾನಿರುವ ವಿದ್ಯಾಪೀಠ ವಾರ್ಡ್ ನ ಶ್ರೀನಿವಾಸ ನಗರದ ಸುತ್ತಮುತ್ತ ಸುಮಾರು ಕನಿಷ್ಟ ಹತ್ತು ಎಂಆರ್ಪಿ ಔಟ್ ಲೆಟ್ ಗಳಿವೆ. ಹನುಮಂತ ನಗರದ ಗಣೇಶ ಭವನ ಹಿಂಭಾಗ, ಮಾರುತಿ ಸರ್ಕಲ್, 80 ಫೀಟ್ ರಸ್ತೆಯ ಜಂಕ್ಷನ್ ಸಮೀಪ. ಹಳೇ ಮೀನಾಕ್ಷಿ ಆಸ್ಪತ್ರೆಯಿಂದ ಕೊಂಚ ಕೆಳಗೆ, ಅವಲಹಳ್ಳಿ ಮುಖ್ಯರಸ್ತೆಯಲ್ಲಿ 100 ಮೀಟರ್ ಅಂತರದಲ್ಲೇ ಎರಡು ಔಟ್ ಲೆಟ್ ಮಳಿಗೆಗಳು, ಕತ್ರಗುಪ್ಪೆ ಮುಖ್ಯ ರಸ್ತೆಯಲ್ಲಿ ಎರಡು, ಹೊಸಕೆರೆಹಳ್ಳಿ ಸರ್ಕಲ್ ಹತ್ತಿರ ಎದುರು ಬದುರಲ್ಲೇ ಎರಡು ಔಟ್ ಲೆಟ್ ಗಳಿವೆ. ಇಲ್ಲೆಲ್ಲಾ ಕನಿಷ್ಟ 500 ಮೀಟರ್ ಉದ್ದದ ಕ್ಯೂ ಮಧ್ಯಾಹ್ನದ ವರೆಗೂ ಇತ್ತಂತೆ. ಶ್ರಿನಿವಾಸ ನಗರ ಮುಖ್ಯ ರಸ್ತೆಯ ಪ್ರಮುಖ ಔಟ್ ಲೆಟ್ ಮಧುಶಾಲಾದಲ್ಲಿ ಮಧ್ಯಾಹ್ನಕ್ಕೂ ಮೊದಲೇ ಮದ್ಯ ಖಾಲಿಯಾಯ್ತಂತೆ.
ಜನರಲ್ಲಿ ಈ ಮಟ್ಟದ ಮದ್ಯದಾಹ ಹೆಚ್ಚಾಗಲು ಯಾರು ಕಾರಣ? ಸರ್ಕಾರಗಳೇ ಅಲ್ಲವೆ? ಎಲ್ಲಾ ವೈನ್ ಶಾಪ್ ಗಳ ಮುಂದೆ ನಿಂತಿದ್ದ ಜನರಲ್ಲಿ ಸಾಮಾಜಿಕ ಅಂತರ ಅನ್ನುವ ಅಂಶವೇ ಇರಲಿಲ್ಲ. ಏನಾದರೂ ನಾಳೆ ಇವರಿಂದ ಕರೋನಾ ಸೋಂಕು ಹಂಚಿಕೆಯಾದರೆ ಅದಕ್ಕೆ ನೇರ ಕಾರಣ ಸರ್ಕಾರವೇ ಆಗುತ್ತದೆ. ಅಂದರೆ ಸರ್ಕಾರ ಈಗ ವೈನ್ ಶಾಪ್ ತೆರೆಯಲು ಅನುಮತಿ ಕೊಟ್ಟಿದೆ ಅಂತಲ್ಲ. ಮೊದಲು ತಾರ್ಕಿಕ ಕಾರಣಗಳೇ ಇಲ್ಲದೇ ವೈನ್ ಶಾಪ್ ಗಳನ್ನು ಮುಚ್ಚಿದ್ದು ಇದಕ್ಕೆ ಕಾರಣ. ಈ ಮಟ್ಟದ ಹಪಿಹಪಿತನ ಅವರಲ್ಲಿ ಉತ್ತೇಜನಗೊಳ್ಳಲು ವೈನ್ ಶಾಪ್ ಬಂದ್ ಆಗಿದ್ದೇ ಕಾರಣ. ಬೇಕಿದ್ದರೆ ಯಾರಾದರೂ ಮನಃಶಾಸ್ತ್ರಜ್ಞರ ಅಭಿಪ್ರಾಯ ಕೇಳಿ ನೋಡಿ.
ವೈನ್ ಶಾಪ್ ಗಳು ಸಹ ತರಕಾರಿ ದಿನಸಿ ಅಂಗಡಿಗಳಂತೆ ತೆರದಿದ್ದರೆ ಜನರು ಈ ಮಟ್ಟಿಗೆ ಹುಚ್ಚರಂತೆ ಮೂರ್ಖರಂತೆ ಬೆಳ್ಳಂಬೆಳಿಗ್ಗೆ ಸರತಿಯಲ್ಲಿ ನಿಲ್ಲುವ ಪ್ರಮೆಯ ಬರುತ್ತಿರಲಿಲ್ಲ. ಮದ್ಯದಿಂದ ಸಮಾಜದ ಸ್ವಾಸ್ಥ ಹಾಳಾಗುತ್ತದೆ ಎಂದು ಆಚಾರ ಹೇಳುವ ಹಲವರು ಇಂದು ಕ್ಯೂನಲ್ಲಿ ನಿಂತಿದ್ದರು. ಮದ್ಯ ಮುಕ್ತ ಸಮಾಜ ಮಾಡಬೇಕು ಅಂತ ಬೊಂಬ್ಡಿ ಬಡಿದುಕೊಳ್ಳುವ ಬಹಳಷ್ಟು ಜನರು ಶುದ್ಧ ಅವಕಾಶವಾದಿಗಳು. ಅಂತವರು ಕೆಲವರು ನನ್ನ ಸ್ನೇಹ ವಲಯದಲ್ಲಿದ್ದಾರೆ.
ಇನ್ ಫ್ಯಾಕ್ಟ್ ಹೆಚ್ಚಾಗಿ ಮಡಿವಂತ ಬ್ರಾಹ್ಮಣರೇ ವಾಸಿಸುವ ವಿದ್ಯಾಪೀಠ ಶ್ರೀನಿವಾಸ ನಗರ, ಹನುಮಂತನಗರ, ಗಿರಿನಗರ, ಬ್ಯಾಂಕ್ ಕಾಲೋನಿಗಳಲ್ಲೇ ಇಷ್ಟು ಎಂಆರ್ಪಿ ವೈನ್ ಶಾಪ್ ಗಳು ತಲೆ ಎತ್ತಿದ್ದಾಗ ಯಾರಾದರೂ ಪ್ರಶ್ನೆ ಮಾಡಿದರಾ? ಎಂಆರ್ಪಿ ಔಟ್ ಲೆಟ್ ಗಳನ್ನು ಹೊರತುಪಡಿಸಿದ ಖಾಸಗಿ ವೈನ್ ಶಾಪ್, ಬಾರ್ ಗಳ ಸಂಖ್ಯೆ ಬೇರೆ ಇದೆ. ಇವತ್ತು ಅವು ತೆರೆದಿಲ್ಲ. ಸಾಲು ಸಾಲಾಗಿ ವೈನ್ ಸ್ಟೋರ್ ಓಪನ್ ಆಗುವ ನಿಮ್ಮ ಪ್ರಜ್ಞಾವಂತಿಕೆ ಮಣ್ಣು ತಿನ್ನುತ್ತಿತ್ತಾ? ಇವತ್ತಿಗೆ ತಪ್ಪು ಎಂದರೆ ಅವತ್ತಿಗೂ ತಪ್ಪೇ ಆಗಿತ್ತಲ್ಲವೇ. ಅವತ್ತಿಗೆ ಅದು ಸಮಾಜದ ಒಪ್ಪಿತ ವ್ಯಸನವಾಗಿತ್ತಾದರೇ ಇವತ್ತೇಕೆ ಇಲ್ಲ?
ಇನ್ನು 40 ದಿನ ಎಣ್ಣೆ ಬಿಟ್ಟಿದ್ದ ಜನರು ಚಟ ಮುಕ್ತರಾಗುವ ಹೊತ್ತಿಗೆ ಎಣ್ಣೆ ಅಂಗಡಿ ತೆರೆದಿದ್ದೂ ವಾಸ್ತವದಲ್ಲಿ ತಪ್ಪೇ ನಿಜ. ಆದರೆ ಬೆಳಗಿನಿಂದಲೂ ನಮ್ಮ ಸಂವೇದನೆ ಸತ್ತ ನ್ಯೂಸ್ ಚಾನೆಲ್ ಗಳು ಮೇಲಿಂದ ಮೇಲೆ ಎಣ್ಣೆ ಅಂಗಡಿಗಳ ನೂಕು ನುಗ್ಗಲು ತೋರಿಸಿ ಮನೆಯಲ್ಲಿದ್ದ ಮದ್ಯಪ್ರಿಯರನ್ನು ಬೀದಿಗಿಳಿಸಿದ್ದು ಯಾರಾದರೂ ಒಪ್ಪಲು ಸಾಧ್ಯವೇ? ಮದ್ಯ ವ್ಯಸನಿ ಗಟ್ಟಿ ಪ್ರತಿಜ್ಞೆ ಮಾಡಿದ್ದವರೂ ಸಹ ಎಣ್ಣೆ ಅಂಗಡಿಗಳತ್ತ ನುಗ್ಗಿದ್ದು ಸುದ್ದಿ ವಾಹಿನಿಗಳ ವರದಿ ಫಲಶೃತಿಯೇ ಅಲ್ಲವಾ? ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿದರೆ ಈಗ ಸದ್ಯದ ಸರಕಾರಿ ಆದಾಯ ಅಬಕಾರಿ ಮಾತ್ರವೇ. ಆ ನಿಟ್ಟಿನಲ್ಲಿ ನೋಡುವುದಾದ್ರೆ ಯಾವುದೇ ರಾಜ್ಯ ಸರ್ಕಾರಗಳದ್ದೂ ಇದರಲ್ಲಿ ತಪ್ಪಿಲ್ಲ. ಕೇಂದ್ರ ಸರ್ಕಾರ ಮದ್ಯದಂಗಡಿ ಕ್ಲೋಸ್ ಮಾಡಲೇಬೇಕು ಎಂದು ಅಪ್ಪಣೆ ಹೊರಡಿಸದಿದ್ದರೆ ಇಷ್ಟರಲ್ಲಾಗಲೇ ಬಹುತೇಕ ರಾಜ್ಯಗಳಲ್ಲಿ ವೈನ್ ಮಾರಾಟ ಶುರುವಾಗಿರುತ್ತಿತ್ತು. ಹಾಗೊಂದು ವೇಳೆ ರಾಜ್ಯ ಸರ್ಕಾರಗಳು ವಿವೇಚನೆಯಿಂದ ಯೋಚಿಸಿದ್ದಿದ್ದರೆ ದಿನ ಬಿಟ್ಟು ದಿನ ಮಾರಾಟ ಮಾಡುವುದೋ, ಆನ್ ಲೈನ್ ನಲ್ಲಿ ಮಾರುವುದೋ, ಸಮಯ ನಿಗದಿ ಮಾಡಿ ಮಾರಾಟಕ್ಕೆ ಅನುಮತಿ ಕೊಡುವುದೋ ಮಾಡುತ್ತಿದ್ದವು. ಆಗ ಈ ಪರಿಸ್ಥಿತಿ ಇರುತ್ತಿರಲಿಲ್ಲ.
ಇವತ್ತು ಒಂದೇ ದಿನದಲ್ಲಿ ರಸ್ತೆಗಿಳಿದ ವಾಹನಗಳ ಪ್ರಮಾಣ ಕಳೆದ 40 ದಿನಗಳ ಪ್ರಮಾಣದ ಮುಕ್ಕಾಲುವಾಸಿ. ಅವರಲ್ಲಿ ಬಹುಪಾಲು ಜನರು ಬೀದಿಗೆ ಇಳಿದಿದ್ದೇ ಎಣ್ಣೆ ಖರೀದಿಗೆ. ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ ಎಂದು ಖಂಡಿತಾ ಅನ್ನಿಸುತ್ತಿಲ್ಲ.
ಅಯ್ಯಾ ಸುದ್ದಿ ವಾಹಿನಿಗಳ ಔಟ್ ಪುಟ್ ನಿರ್ಧರಿಸುವ ಮಹಾನುಭಾವರಾ! ನಿಮ್ ಯೋಗ್ಯತೆಗಿಷ್ಟು ಬೆಂಕಿ ಬೀಳಾ! ಇವತ್ತು ನಿಮ್ಮ ಜರ್ನಲಿಸಂ ಎಥಿಕ್ಸ್ ಅನ್ನು ಮನೆಯ ತಿಜೋರಿಯಲ್ಲಿಟ್ಟು ಕೀಲಿ ಜಡಿದು ಕಚೇರಿಗೆ ಬಂದ್ರಾ? ಎಂಆರ್ಪಿ ಔಟ್ ಲೆಟ್ ಮುಂದೆ ಕ್ಯೂನಲ್ಲಿ ನಿಂತ ಮಹಿಳೆಯರನ್ನು ಜೂಮ್ ಮಾಡಿ ಮಾಡಿ ತೋರಿಸ್ತೀರಲ್ಲ ನಿಮಗೆ ಕನಿಷ್ಟ ಕಾಮನ್ ಸೆನ್ಸ್ ಇದ್ಯಾ? ಕೆಲವು ವಾಹಿನಿಗಳಲ್ಲಂತೂ ಎಣ್ಣೆ ಖರೀದಿಗೆ ಬಂದ ಹುಡುಗಿಯರದ್ದೇ ಸುದ್ದಿ. ಇನ್ನು ಕೆಲವು ಕ್ಯಾಮರಾಮನ್ ಅವಿವೇಕಿಗಳು ಬಿಸಿಲೆಂದು ಚಡ್ಡಿ ಮಿಡಿ ತೊಟ್ಟು ಬಂದಿದ್ದ ಯುವತಿಯರ ಸೊಂಟವನ್ನೇ ಜೂಮ್ ಮಾಡಿ ತೋರಿಸುತ್ತಿದ್ದರು. ಈ ಔಟ್ ಪುಟ್ ಹೆಡ್ ಗಳೆಂಬ ಹೆಡ್ಡರು ಅದನ್ನೇ ರಿಪೀಟ್ ಆಗಿ ತೋರಿಸುತ್ತಿದ್ದರು. ನೀವಿಂದು ಕೆಲಸ ಮಾಡುವ ಮಾಧ್ಯಮದಲ್ಲೇ ಈಗೊಂದು ವರ್ಷದ ಹಿಂದೆತನಕ ನಾನು ಕೆಲಸ ಮಾಡಿದ್ದೇನೆ. ಈಗೊಂದು ವರ್ಷದಲ್ಲಿ ಇಷ್ಟೊಂದು ಗತಿಗೆಟ್ಟುಬಿಡ್ತಾ ಎಲೆಕ್ಟ್ರಾನಿಕ್ ಮೀಡಿಯಾ!
ಮಹಿಳಾ ಸಮಾನತೆಯ ಬಗ್ಗೆ ಪುಂಕಾನುಪುಂಕವಾಗಿ ಚರ್ವಿತ ಚರ್ವಣ ಪುಂಗಿ ಊದುವ ಸಂಪಾದಕ ಮಹಾಶಯರು ಈಗೇನು ಹೇಳ್ತಾರೆ? ಕುಡುಕರಲ್ಲ ಈ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು. ಮಾಧ್ಯಮದ ಮನೆಯಲ್ಲಿ ಕುಳಿತ ನಿಮ್ಮಂತ ಆಶಾಡಭೂತಿಗಳಿಂದ ಸಮಾಜ ಹಾಳಾಗುತ್ತಿವೆ. ಇಲ್ಲಿ ವರದಿಗಾರರ ತಪ್ಪಿಲ್ಲ; ಅವರು ತಮಗೆ ಹಾಕಿದ ಅಸೈನ್ ಮೆಂಟ್ ನಿರ್ವಹಿಸುತ್ತಾರೆ ಅಷ್ಟೆ. ಆ್ಯಂಕರ್ ಗಳದ್ದೂ ತಪ್ಪಿಲ್ಲ ಬುಲೇಟಿನ್ ಪ್ರೊಡ್ಯೂಸರ್ ಟಿಪಿಯಲ್ಲಿ ಹಾಕಿದ ಬುಲೆಟಿನ್ ಬ್ರೇಕಿಂಗ್ ಪಾಯಿಂಟ್ಸ್ ಓದಿ ರ್ಯಾಪ್ ಅಪ್ ಮಾಡುತ್ತಾರೆ. ಅಸೈನ್ ಮೆಂಟ್ ಹಾಕುವ ಇನ್ ಪುಟ್ ಹೆಡ್ ಗಳಿಗೆ ಯಾವ ರೋಗ ಅಮರಿಕೊಂಡಿದೆ? ಎಣ್ಣೆ ಬಿಟ್ಟರೆ ಆದ್ಯತೆ ನೀಡಬೇಕಾದ ಕರೋನ ಸಂಕಷ್ಟದ ಬೇರೆ ಜ್ವಲಂತ ಸಮಸ್ಯೆಗಳಿಲ್ಲವೇ? ಇನ್ನೆ ಆ ಮಹಾನುಭಾವ ಕನ್ನಡದ ಮಹಾನ್ ಕವಿ ನಿಸಾರ್ ದೇಹತ್ಯಾಗ ಮಾಡಿದ್ರು. ಅವರ ಸಾಧನೆಯನ್ನು ತೋರಿಸಲು ಎಷ್ಟು ಕಾಲ ಮೀಸಲಿಟ್ರಿ. ಎಣ್ಣೆ ಅಂಗಡಿ ತೆರೆದಿದ್ದನ್ನು ತೋರಿಸಲು ಎಷ್ಟು ಬುಲೇಟಿನ್ ನಲ್ಲಿ ಜಾಗ ಕೊಟ್ರಿ. ಕೆಲವು ವಾಹಿನಿಗಳಲ್ಲಿ ಎಣ್ಣೆ ಅಂಗಡಿಗಳನ್ನು ತೆರೆಯುವ ಕುರಿತು ಕೌಂಟ್ ಡೌನ್ ಸಹ ಇತ್ತು. ನಿಮ್ಮ ಆದ್ಯತೆಯೇನು? ವೈನ್ ಶಾಪ್ ತೆರೆಯುವ ಬಗ್ಗೆ ನಿಮ್ಮ ನಿಲುವೇನು? ಪರವೋ ವಿರೋಧವೋ? ನೀವು ಸಮಯಸಾಧಕರಲ್ಲವೇ?
ಕರೋನಾ ಅಲ್ಲ ನಿಮಗೆ ಹಿಡಿದಿರುವ ರೋಗವನ್ನು ಭಗವಂತನಿಂದಲೂ ವಾಸಿ ಮಾಡಲು ಸಾಧ್ಯವಿಲ್ಲ. ಈಗ ಹೇಳಿ ಕುಡುಕರನ್ನು ಬಯ್ಯುವ ಹೀಯಾಳಿಸುವ ನೈತಿಕತೆ ನಮಗಿದೆಯೇ?
-ವಿಭಾ








