ಜನರಿಗೆ ಆರ್ ಸಿಬಿ ಮೇಲೆ ನಂಬಿಕೆ ಇಲ್ಲ.. ಆದ್ರೆ ಆಟಗಾರರಿಗೆ ವಿಶ್ವಾಸವಿದೆ.. ವಿರಾಟ್ ಕೊಹ್ಲಿ
ಇಂಡಿಯನ್ ಪ್ರೀಮಿಯರ್ ಲೀಗ್…
ಪ್ರತಿಷ್ಠಿತ ದೇಸಿ ಟಿ-ಟ್ವೆಂಟಿ ಕ್ರಿಕೆಟ್ ಟೂರ್ನಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಹಾಗೇ ಐಪಿಎಲ್ ನಲ್ಲಿ ಅತ್ಯಂತ ಜನಪ್ರಿಯ ತಂಡ ನಮ್ಮ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು.
ಬೆಂಗಳೂರಿನ ಹೆಮ್ಮೆ, ಕರುನಾಡಿನ ಪ್ರತಿಷ್ಠೆಯ ತಂಡ ನಮ್ಮ ಆರ್ ಸಿಬಿ
ಆರ್ ಸಿಬಿಯಲ್ಲಿ ಕರ್ನಾಟಕದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿಲ್ಲ.
ಆದ್ರೂ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ನಂತಹ ಆಟಗಾರರನ್ನು ನಮ್ಮವರೇ ಅನ್ನೋ ಭಾವನೆ ಆರ್ ಸಿಬಿ ಅಭಿಮಾನಿಗಳ ಮನದಲ್ಲಿದೆ.
ಇಷ್ಟೆಲ್ಲಾ ಇದ್ರೂ ಆರ್ ಸಿಬಿ ತಂಡದ ಮೇಲೆ ಅಭಿಮಾನಿಗಳಿಗೆ ನಂಬಿಕೆ ಇಲ್ಲ.
ಇದಕ್ಕೆ ಕಾರಣ ಕಳೆದ 12 ವರ್ಷಗಳಲ್ಲಿ ಆರ್ ಸಿಬಿ ಪ್ರಶಸ್ತಿ ಗೆಲ್ಲದೇ ಇರೋದು.
ಹೀಗಾಗಿ ಪ್ರತಿ ಬಾರಿ ಐಪಿಎಲ್ ಶುರುವಾದಾಗ ಈ ಬಾರಿ ಕಪ್ ನಮ್ದೆ ಅಂತ ಅಭಿಮಾನಿಗಳು ಹೇಳ್ತಾನೆ ಬಂದಿದ್ದಾರೆ.
ಆದ್ರೆ ಅಭಿಮಾನಿಗಳನ್ನು ನಿರಾಸೆಗೊಳಿಸಿರುವ ಆರ್ ಸಿಬಿ ತಂಡದ ಆಟಗಾರರು ಟ್ರೋಲ್ಗೆ ಆಹಾರವಾಗುತ್ತಿದ್ದಾರೆ.
ಈ ನಡುವೆ ಆರ್ ಸಿಬಿ ಈ ಬಾರಿ ಮತ್ತೆ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.
13ನೇ ಆವೃತ್ತಿಯಲ್ಲಿ ಆರ್ ಸಿಬಿ ತಂಡ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿದೆ.
ಇದ್ರಿಂದ ಯುಎಇ ಐಪಿಎಲ್ ನಲ್ಲಿ ಆರ್ ಸಿಬಿ ಪ್ರಶಸ್ತಿ ಗೆದ್ದೇ ಗೆಲ್ಲುತ್ತೆ ಅನ್ನೋ ಲೆಕ್ಕಚಾರದಲ್ಲಿದೆ.
ಇನ್ನು ಕಳೆದ 12 ವರ್ಷಗಳಿಂದ ಅಭಿಮಾನಿಗಳಿಗೆ ನಿರಾಸೆಗೊಳಿಸಿದ್ದೇವೆ ಅಂತ ಆರ್ ಸಿಬಿ ನಾಯಕನಿಗೆ ಬೇಸರವೂ ಇದೆ.
ಅಷ್ಟೇ ಅಲ್ಲ ಅಭಿಮಾನಿಗಳ ಮನಸ್ಸನ್ನು ಕೂಡ ನಾಯಕ ವಿರಾಟ್ ಕೊಹ್ಲಿ ಅರ್ಥ ಮಾಡಿಕೊಂಡಿದ್ದಾರೆ.
ಬಹುತೇಕ ಜನ ಆರ್ ಸಿಬಿ ಸಾಮಥ್ರ್ಯದ ಬಗ್ಗೆ ನಂಬಿಕೆ ಇಟ್ಟುಕೊಂಡಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಆದ್ರೆ ಆಟಗಾರರಿಗೆ ತಮ್ಮ ಸಾಮಥ್ರ್ಯದ ಬಗ್ಗೆ ನಂಬಿಕೆ ಇದೆ. ಆತ್ಮವಿಶ್ವಾಸವೂ ಇದೆ ಎಂದು ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
ಮೊನ್ನೆ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬಳಿಕ ವಿರಾಟ್ ಕೊಹ್ಲಿ ಈ ರೀತಿ ಹೇಳಿದ್ದಾರೆ.
ತಂಡದಲ್ಲಿ ವಿಶ್ವದ ಅತ್ಯುತ್ತಮ ಆಟಗಾರರು ಇದ್ದಾರೆ. ಆದ್ರೆ ಅವರ ಮೇಲೆ ನಂಬಿಕೆ ಇಲ್ಲ ಅಂದ್ರೆ ಯಾವುದೇ ರೀತಿಯ ಪ್ರಯೋಜನವಿಲ್ಲ.
ಆಟಗಾರರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು ಎಂಬುದು ವಿರಾಟ್ ಕೊಹ್ಲಿಯ ಅಭಿಮತ.
ಕ್ರಿಸ್ ಮೋರಿಸ್ ಅವರು ಜವಾಬ್ದಾರಿಯನ್ನು ನಿಭಾಯಿಸುವುದನ್ನು ಇಷ್ಟಪಡುತ್ತಾರೆ.
ತಂಡದಲ್ಲಿ ಅವರು ನಾಯಕನಂತೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಕಳೆದ ವರ್ಷ ಅವರು ಅಷ್ಟೊಂದು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದ್ರೆ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ.
ಕಠಿಣ ಪರಿಶ್ರಮ ಪಟ್ಟಿದ್ರು. ಹೀಗಾಗಿ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಇನ್ನು ಮಹಮ್ಮದ್ ಸಿರಾಜ್. ಆತನನ್ನು ತಡವಾಗಿ ನಾವು ಬಳಸಿಕೊಂಡೆವು.
ಆತನಿಗೆ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಲು ಅವಕಾಶ ನೀಡಬೇಕಿತ್ತು.
ನಮ್ಮಲ್ಲಿ ಪ್ಲಾನ್ ಎ ಪ್ಲಾನ್ ಬಿ ಅಂತ ತಂತ್ರಗಳನ್ನು ರೂಪಿಸಿದ್ದೇವೆ. ಸಿರಾಜ್ ಕೂಡ ಅವಕಾಶವನ್ನು
ಸರಿಯಾಗಿಯೇ ಬಳಸಿಕೊಂಡ ಎಂದು ವಿರಾಟ್ ಕೊಹ್ಲಿ ಹೇಳುತ್ತಾರೆ.
ಒಟ್ಟಿನಲ್ಲಿ ಆರ್ ಸಿಬಿ ನಾಯಕನಿಗೆ ಅಭಿಮಾನಿಗಳ ನಿರೀಕ್ಷೆ ಏನು ಎಂಬುದು ಗೊತ್ತಿದೆ.
ಅದೇ ರೀತಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆಟವಾಡುವ ಆಸೆಯೂ ಆರ್ ಸಿಬಿ ತಂಡಕ್ಕಿದೆ.
ಆದ್ರೂ ಕೆಲವೊಂದು ಬಾರಿ ನಿರೀಕ್ಷೆಗೆ ತಕ್ಕಂತೆ ಆಟವಾಡಲು ಸಾಧ್ಯವಾಗುವುದಿಲ್ಲ.
ಆದ್ರೂ ನಂಬಿಕೆಯನ್ನು ಇಟ್ಟುಕೊಳ್ಳಬೇಕು ಎಂಬುದು ವಿರಾಟ್ ಕೊಹ್ಲಿಯ ಅಭಿಪ್ರಾಯವಾಗಿದೆ.