ಕೋವಿಡ್ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರಿಂದ ಕೀಳುಮಟ್ಟದ ರಾಜಕೀಯ: ಸುಧಾಕರ್
ಬೆಂಗಳೂರು : ಕೋವಿಡ್ -19 ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಕಿಡಿಕಾರಿದ್ದಾರೆ..
ನಿನ್ನೆ ಅಪೂರ್ಣವಾಗಿದ್ದ ಟಾಸ್ಕ್ ಫೋರ್ಸ್ ಸಭೆ ಇಂದು ಮುಂದುವರಿಯಿತು. ಈ ಸಭೆಯಲ್ಲಿ ಸಚಿವ ಡಾ. ಕೆ. ಸುಧಾಕರ್ ಆರೋಗ್ಯ ಸಚಿವ ಶ್ರೀರಾಮುಲು, ಡಿಸಿಎಂ ಡಾ. ಅಶ್ವತ್ಥನಾರಾಯಣ ಸೇರಿದಂತೆ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ಇದಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಗಳಿಗೆ ನಿನ್ನೆ ಸಚಿವ ಶ್ರೀರಾಮುಲು ಹಾಗೂ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಅವರು ಉತ್ತರ ನೀಡಿದ್ದಾರೆ. 290 ಕೋಟಿಯಷ್ಟು ಪರಿಕರ ಇದುವರೆಗೂ ಖರೀದಿಯಾಗಿದೆ. ಇದರಲ್ಲಿ 33 ಕೋಟಿ ರೂ. ನಷ್ಟು ವೈದ್ಯಕೀಯ ಇಲಾಖೆಯಿಂದ ಖರೀದಿಸಲಾಗಿದೆ. ಒಂದೂವರೆ ಗಂಟೆಗಳ ಕಾಲ ಅಂಕಿ-ಅಂಶಗಳ ಸಮೇತ ಅವರು ತಿಳಿಸಿದ್ದಾರೆ. ಏನಾದರೂ ತಪ್ಪಾಗಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ. ಮಂತ್ರಿಯಾದವರು ಇದಕ್ಕಿಂತ ಇನ್ನೇನು ಹೇಳಲು ಸಾಧ್ಯ ಎಂದರು.
ಇನ್ನು ಕಾಂಗ್ರೆಸ್ ನವರು ವೆಂಟಿಲೇಟರ್ ಇಲ್ಲ, ಅದಿಲ್ಲ, ಇದಿಲ್ಲ ಅಂತ ಆರೋಪ ಮಾಡ್ತಾರೆ. ಮಾಡೋಕೆ ಹೋದರೆ
ಭ್ರಷ್ಟಾಚಾರ ನಡೆದಿದೆ ಎಂದು ಹೇಳ್ತಾರೆ ಎಂದು ಕೈ ಪಡೆ ವಿರುದ್ಧ ಕಿಡಿಕಾರದ ಸಚಿವರು, ಕೋವಿಡ್ ವಿಚಾರದಲ್ಲಿ ಕಾಂಗ್ರೆಸ್ ನವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ದೇಶದಲ್ಲಿ ಯಾರೂ ಕೂಡ ಕೋವಿಡ್ ವಿಚಾರದಲ್ಲಿ ರಾಜಕಾರಣ ಮಾಡಿಲ್ಲ. ಆದ್ರೆ ರಾಜಕೀಯದಲ್ಲಿ ಉಳಿದುಕೊಳ್ಳಬೇಕು ಎಂದು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದು ದುರಂತ ಎಂದು ವ್ಯಂಗ್ಯವಾಡಿದರು.