ಹೊಸಕೋಟೆ : ಡ್ರಗ್ ಮಾಫಿಯಾದಿಂದ ಬಂದ ಹಣದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಎಂಎಲ್ ಸಿ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರೇ ರಾಜಕೀಯ ಪ್ರೇರಿತರಾಗಿ ಮಾತನಾಡಬೇಡಿ, ಸತ್ಯವನ್ನು ಅರಿತು ಮಾತನಾಡಿ ಎಂದು ತಿರುಗೇಟು ನೀಡಿದ್ದಾರೆ.
ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್, ಡ್ರಗ್ ದಂಧೆಯಿಂದ ಬಂದ ಹಣದಿಂದ ಮೈತ್ರಿ ಸರ್ಕಾರವನ್ನು ಕೆಡವಿ, ಬಿಜೆಪಿ ಸರ್ಕಾರವನ್ನು ರಚನೆ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ ಕುಮಾರಸ್ವಾಮಿ 18 ತಿಂಗಳುಗಳ ಕಾಲ ಸಿಎಂ ಆಗಿದ್ದರೂ ಆಗ ಯಾಕೆ ರಾಜ್ಯದಲ್ಲಿ ಮಾದಕ ವಸ್ತುಗಳನ್ನು ನಿಯಂತ್ರಣ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಆದರೆ ಐದು ವರ್ಷ ಅಧಿಕಾರವನ್ನು ಪೂರ್ಣಗೊಳಿಸಿಲ್ಲ. ಕಳೆದ ಬಾರಿ ಬಿಜೆಪಿ ಜೊತೆ ಸರ್ಕಾರ ರಚನೆ ಮಾಡಿ 20 ತಿಂಗಳುಗಳ ಕಾಲ ಅಧಿಕಾರ ನಡೆಸಿದರು. ಅವರೇ ಆ ಸರ್ಕಾರವನ್ನು ಸಹ ಕೆಡವಿದರು, ನಂತರ ಸಮ್ಮಿಶ್ರ ಸರ್ಕಾರ ರಚನೆ ಮಾಡಿದರು ಅದು ಸಹ ಕೆಡವಿದರು. ಆದರೆ, ಯಾವುದೇ ಸರ್ಕಾರ ಆದರೂ ಆಡಳಿತ ನಡೆಸಬೇಕಾದರೆ ಜನಪರವಾದ ಆಡಳಿತ ನಡೆಸುವಂತಾಗಬೇಕು. ಮುಖ್ಯಮಂತ್ರಿಗಳಾಗಿದ್ದ ಅವರ ಅಧಿಕಾರಾವಧಿಯಲ್ಲಿ ಮಾದಕ ವಸ್ತು ನಿಯಂತ್ರಣ ಏಕೆ ಮಾಡಲಿಲ್ಲ, ಅವರ ಅಧಿಕಾರಾವಧಿಯಲ್ಲಿ ಮಾಡಬೇಕಿತ್ತು ಆದರೆ ಅವರು ಮಾಡಿಲ್ಲ. ಈಗ ರಾಜಕೀಯ ಪ್ರೇರಿತವಾಗಿ ಭಾಷಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
https://youtu.be/eUpiOvdy6yI?list=UUJKHM6z4CpcN_F-SuK2wPDw