ಮಡಿಕೇರಿ : ಯಾವ ಪಕ್ಷ ಅಥವಾ ಯಾರೇ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರು ನಿರ್ದಾಕ್ಷಿಣ್ಯ ಕ್ರಮ ಆಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಕೊಡಗು ಜಿಲ್ಲೆಯ ಬಲಮುರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಎನ್ನೋದು ಸಾಮಾಜಿಕ ಪಿಡುಗಾಗಿ ಕಾಡುತ್ತಿದೆ. ಈಗ ನಾವೆಲ್ಲರೂ ಪಕ್ಷ ಭೇದ ಮರೆತು ಡ್ರಗ್ಸ್ ಮಾರಾಟ ಮತ್ತು ಸೇವನೆ ವಿರುದ್ಧ ಹೋರಾಡಬೇಕಾಗಿದೆ. ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಡ್ರಗ್ಸ್ ಮಾರಾಟ ಮತ್ತು ಸೇವನೆ ವಿರುದ್ಧ ಹೋರಾಡಿ, ಜನರನ್ನು ಎಚ್ಚರಗೊಳಿಸಲು ಟ್ವಿಟ್ಟರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ. ಪಕ್ಷ ಅದಕ್ಕಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ಪರ ರಾಗಿಣಿ ಪ್ರಚಾರ ಮಾಡಿದ ಬಗ್ಗೆ ಮಾತನಾಡಿದ ಸಂಸದರು, ಚುನಾವಣೆ ಸಂದರ್ಭದಲ್ಲಿ ಸಿನಿಮಾ ತಾರೆಯರನ್ನು ಕರೆದುಕೊಂಡು ಬಂದು ಪ್ರಚಾರ ಮಾಡುವುದು ಸಾಮಾನ್ಯವಾಗಿದೆ. ಇದನ್ನು ಎಲ್ಲಾ ಪಕ್ಷಗಳು ಮಾಡಿವೆ. ಒಂದೇ ಚುನಾವಣೆಯಲ್ಲಿ ಸಿನಿಮಾ ತಾರೆಯರು ಮೂರು ಪಕ್ಷಗಳ ಕ್ಯಾಂಪೇನ್ ಮಾಡಿದ್ದಾರೆ. ಈ ಹಿಂದೆ ರಾಗಿಣಿ ಕಾಂಗ್ರೆಸ್ ಮತ್ತು ಜೆಡಿಎಸ್ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಹಾಗೆಂದ ಮಾತ್ರಕ್ಕೆ ಅದಕ್ಕೆ ರಾಜಕೀಯ ಬಣ್ಣ ಬಳಿಯಬೇಕಾಗಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.