ಟೀಮ್ ಇಂಡಿಯಾ ಗರ್ಭಗುಡಿಯಿಂದ ಹೊರ ಬಂದ ಚೌಕಿದಾರ..!
ಮಹೇಂದ್ರ ಸಿಂಗ್ ಧೋನಿ ಯಾವಾಗ ನಿವೃತ್ತರಾಗುತ್ತಾರೆ..? ಇದು ಕಳೆದ ಒಂದು ವರ್ಷದಿಂದ ಚರ್ಚೆಯಾಗುತ್ತಿದ್ದ ವಿಚಾರ. ಇದಕ್ಕೆ ಧೋನಿ ಸಿಂಪಲ್ ಆಗಿ ಉತ್ತರ ನೀಡಿದ್ದಾರೆ. ಆಗಸ್ಟ್ 15, ರಾತ್ರಿ ಗಂಟೆ 17.29ರ ನಂತರ ಇದ್ರ ಬಗ್ಗೆ ಚರ್ಚೆ ಬೇಡ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಯಾಗಿದೆ ಎಂಬ ರೀತಿಯಲ್ಲೇ ಧೋನಿ ತನ್ನ ನಿವೃತ್ತಿಯನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಪ್ರೀತಿಗೆ ಮತ್ತು ಬೆಂಬಲಕ್ಕೆ ಧನ್ಯವಾದಗಳು.. 1729ರಿಂದ ನನ್ನನ್ನು ನಿವೃತ್ತನೆಂದು ಪರಿಗಣಿಸಿ… ಹಾಗಂತ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಸಂತೃಪ್ತಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
ಅಂದ ಹಾಗೇ ಧೋನಿ ಎಲ್ಲರಿಗೂ ಗೊತ್ತು.. ಆದ್ರೆ ಧೋನಿ ಏನು ಯಾರು ಎಂಬುದು ಮಾತ್ರ ಅವರಿಗೆ ಮಾತ್ರ ಗೊತ್ತು. ಯಾಕಂದ್ರೆ ಧೋನಿಯನ್ನು ಅರ್ಥ ಮಾಡಿಕೊಳ್ಳುವುದು ಅಂದುಕೊಂಡಷ್ಟು ಸುಲಭವಿಲ್ಲ. ನಿಗೂಢ ಹೆಜ್ಜೆಯ ಮೂಲಕ ಎದುರಾಳಿ ಆಟಗಾರರನ್ನು ದಂಗಬಡಿಸುವ ಧೋನಿ ವಿಶ್ವ ಕ್ರಿಕೆಟ್ ನ ಚಾಣಕ್ಯ. ಪಂದ್ಯದ ಗತಿಯನ್ನು ಕ್ಷಣ ಮಾತ್ರದಲ್ಲಿ ಅರಿತುಕೊಂಡು ಅದಕ್ಕೆ ತಕ್ಕಂತೆ ಪ್ಲಾನ್ ಮಾಡುವ ಮಾಸ್ಟರ್ ಮೈಂಡ್ ಧೋನಿಯವರದ್ದು. ಧೋನಿ
ತೆಗೆದುಕೊಳ್ಳುವ ಪ್ರತಿಯೊಂದು ವಿಷ್ಯದಲ್ಲೂ ಒಂದೊಂದು ವಿಶೇಷತೆ ಇರುತ್ತೆ. ಹೀಗಾಗಿಯೇ ಧೋನಿ ಎಲ್ಲರಿಗಿಂತ ಡಿಫರೆಂಟ್. ಇದೀಗ ತನ್ನ ನಿವೃತ್ತಿಯನ್ನು ಡಿಫರೆಂಟ್ ಆಗಿಯೇ ಹೇಳಿದ್ದಾರೆ.
1976ರಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ಕಭೀ.. ಕಭೀ..ಚಿತ್ರದ ಮೈನೆ ಪಾಲ್ ದೋ ಪಾಲ್ ಕಾ ಶಾಯಾರ್ ಹೂ.. ಪಾಲ್ ದೋ ಪಾಲ್ ಮೇರಿ ಕಹಾನಿ ಹೈನ್ ಹಾಡಿಗೆ ತನ್ನ ಕ್ರಿಕೆಟ್ ಬದುಕಿನ ಅಮೂಲ್ಯ ಕ್ಷಣಗಳ ಫೋಟೋಗಳನ್ನು ಹಾಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ತನ್ನ ವಿದಾಯದ ಪದಗಳನ್ನು ಬರೆದುಕೊಂಡಿದ್ದಾರೆ.
ಕಭೀ.. ಕಭೀ..ಚಿತ್ರದ ಮೈನೆ ಪಾಲ್ ದೋ ಪಾಲ್ ಕಾ ಶಾಯಾರ್ ಹೂ.. ಪಾಲ್ ದೋ ಪಾಲ್ ಮೇರಿ ಕಹಾನಿ ಹೈನ್ ಹಾಡು ಧೋನಿಯವರ ಅಚ್ಚುಮೆಚ್ಚಿನ ಹಾಡು. ಹೀಗಾಗಿ ತನ್ನ ಕ್ರಿಕೆಟ್ ಬದುಕಿನಲ್ಲಿ ಮರೆಯಲಾಗದ ಕ್ಷಣಗಳನ್ನು ಈ ಹಾಡಿನ ಮೂಲಕ ಹೇಳಿಕೊಂಡಿದ್ದಾರೆ. ಹಾಡಿನಲ್ಲಿ ಕವಿ ತನ್ನ ಬಗ್ಗೆ ಹೇಳಿಕೊಂಡಿದ್ರೂ ಧೋನಿ ಅದಕ್ಕೆ ಕ್ರಿಕೆಟ್ ಸ್ಪರ್ಶ ನೀಡಿದ್ದಾರೆ.
ಹಾಡಿನಲ್ಲಿ ನಾನು ಒಂದು ಕ್ಷಣ ಅಥವಾ ಎರಡು ಕ್ಷಣದ ಕವಿ ಅಂತಿದ್ರೆ, ಧೋನಿಯೂ ಅಷ್ಟೇ,, ನಾನು ಒಂದು ಕ್ಷಣ ಅಥವಾ ಎರಡು ಕ್ಷಣದ ಕ್ರಿಕೆಟಿಗ ಎಂದು ಬಿಂಬಿಸಿಕೊಂಡಿದ್ದಾರೆ. ಇಲ್ಲಿ ಪ್ರತಿ ಕ್ಷಣಗಳನ್ನು ಒಂದೊಂದು ವರ್ಷ ಎಂದು ಪರಿಗಣಿಸಬಹುದು. ನನ್ನ ಕಥೆ, ನನ್ನ ಅಸ್ತಿತ್ವ, ನನ್ನ ಯೌವನ ಒಂದು ಅಥವಾ ಎರಡು ಕ್ಷಣ ಮಾತ್ರವಿರುತ್ತದೆ. ಅದೇ ರೀತಿ ಕ್ರಿಕೆಟಿಗನ ಬದುಕು ಕೂಡ. ಕ್ರಿಕೆಟಿಗರ ಸಾಧನೆ ಒಂದು ಕಥೆಯಾಗಿ ಅನೇಕರಿಗೆ ಸ್ಪೂರ್ತಿಯಾಗುತ್ತದೆ. ಹಾಗೇ ಧೋನಿಯ ಬದುಕಿನ ಕಥೆಯೂ ಹಾಗೇ ಇದೆ. ಅನೇಕ ಕ್ರಿಕೆಟಿಗರಿಗೆ ಇದು ಮಾದರಿಯಾಗಬಹುದು.
ಇನ್ನು ತಂಡದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಾಕಷ್ಟು ಹೋರಾಟ ನಡೆಸಬೇಕಾಗುತ್ತದೆ. ಯೌವನ ಇದ್ದಾಗ ಎಲ್ಲಾ ಸಂಘರ್ಷಗಳನ್ನು ಮೆಟ್ಟಿ ನಿಲ್ಲಬಹುದು. ಆದ್ರೆ ನನಗೆ ಈಗ ವಯಸ್ಸಾಗಿದೆ. ಮನಸ್ಸು ಕ್ರಿಕೆಟ್ ಆಡಬೇಕು ಅಂತ ಹೇಳುತ್ತಿದ್ರೂ ದೇಹ ಸ್ಪಂದಿಸುತ್ತಿಲ್ಲ. ಹೀಗಾಗಿ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಧೋನಿಯು ಈ ಹಾಡನ್ನು ಕೇಳುತ್ತಾ ತನ್ನ ನಿರ್ಧಾರವನ್ನು ಪ್ರಕಟಿಸಿರಬಹುದು.
ಅನೇಕ ಕ್ರಿಕೆಟಿಗರು ಧೋನಿ ಮುಂದೆ ಬಂದಿದ್ದಾರೆ. ಹಾಗೇ ಕೆಲವರು ತೆರೆಮರೆಗೆ ಸರಿದ್ರು. ವಿದಾಯ ಹೇಳಿದಾಗ ಕಣ್ಣೀರು ಹಾಕಿದ್ದಾರೆ. ಇನ್ನು ಕೆಲವರು ಆಡುತ್ತಿದ್ದಾರೆ. ನಾನು ಇಷ್ಟು ದಿನ ನಿಮ್ಮ ಭಾಗವಾಗಿದ್ದೆ. ಈ ಕ್ಷಣದಿಂದ ನಾನು ಬೇರ್ಪಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅನೇಕ ಕ್ರಿಕೆಟಿಗರು ಬರಲಿದ್ದಾರೆ. ಅದ್ರಲ್ಲಿ ನನಗಿಂತ ಚೆನ್ನಾಗಿ ಆಡುವವರು ಇರುತ್ತಾರೆ. ಹಾಗೇ ನನ್ನನ್ನು ನೆನಪಿಸಿಕೊಳ್ಳಬಹುದು ಎಂದು ನಾನು ಅಂದುಕೊಂಡಿದ್ದೇನೆ. ಟೀಮ್ ಇಂಡಿಯಾದಲ್ಲಿ ನನ್ನ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಹೊಸಬರಿಗೆ ಅವಕಾಶ ಸಿಗುತ್ತದೆ. ಅದಕ್ಕಾಗಿಯೇ ಈ ನನ್ನ ನಿರ್ಧಾರವನ್ನು ಹೇಳಿದ್ದೇನೆ. ಈಗ ನಾನು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಎಂದು ಧೋನಿ ಈ ಹಾಡಿನ ಮೂಲಕ ತನ್ನ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ.
ಅದೇನೇ ಇರಲಿ, ವಿಶ್ವ ಕ್ರಿಕೆಟ್ ನಲ್ಲಿ ಧೋನಿ ಯುಗ ಮುಗಿದಿದೆ. ಆದ್ರೆ ತನ್ನ ಕಟ್ಟ ಕಡೆಯ ಆಸೆಯೊಂದು ಈಡೇರಲಿಲ್ಲ. 2020ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಕೋವಿಡ್ 19 ಸೋಂಕು ಕಸಿದುಕೊಂಡಿತ್ತು. ಆದ್ರೆ ಸಿಎಸ್ಕೆ ಪರ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಬಹುಶಃ ಇದು ಧೋನಿಯವರ ಕೊನೆಯ ಐಪಿಎಲ್ ಟೂರ್ನಿಯಾದ್ರೂ ಆಗಬಹುದು.
ಈ ನಡುವೆ ಧೋನಿ ಕೃಷಿಯತ್ತ ಕೂಡ ಗಮನ ಹರಿಸುತ್ತಿದ್ದಾರೆ. ಕೋವಿಡ್ ಸೋಂಕು ಮತ್ತು ಲಾಕ್ ಡೌನ್ ಸಮಯದಲ್ಲಿ ಧೋನಿ ತನ್ನ ಫಾರ್ಮ್ ಹೌಸ್ ನಲ್ಲಿ ಸಾವಯವ ಕೃಷಿ ಮಾಡುತ್ತಿದ್ದರು. ಅಲ್ಲದೆ ರೈತರಿಗೆ ನೆರವಾಗಲು ಸಾವಯವ ಗೊಬ್ಬರವನ್ನು ತಯಾರು ಮಾಡುವ ಕಂಪೆನಿಯನ್ನು ಶುರು ಮಾಡಿದ್ದಾರೆ.
ಮತ್ತೊಂದೆಡೆ ಸೇನೆಯ ಲೆಫ್ಟಿನೆಂಟ್ ಕರ್ನಲ್ ಕೂಡ ಆಗಿದ್ದಾರೆ. ಸೇನೆ ಮತ್ತು ಸೈನಿಕರ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡಿರುವ ಧೋನಿಯ ಮುಂದಿನ ನಡೆ ಕೂಡ ನಿಗೂಢವಾಗಿದೆ.
ಕೊನೆಯದಾಗಿ ಸರಿ ಸುಮಾರು 16 ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳಿಗೆ ತನ್ನ ಬ್ಯಾಟಿಂಗ್ ವೈಖರಿಯ ಮೂಲಕ ರಂಜಿಸಿದ್ದ ಧೋನಿಗೆ ಸಲಾಂ..







