ತುಮಕೂರು : ಬಿ.ಸಿ.ಪಾಟೀಲ್ ಇಂದು ತಮ್ಮ ಮಹತ್ವಾಕಾಂಕ್ಷಿಯ ರೈತರೇ ತಮ್ಮ ಜಮೀನಿನ ಸಮೀಕ್ಷೆಯನ್ನು ನಡೆಸುವ ರೈತಬೆಳೆ ಸಮೀಕ್ಷೆ ಆಪ್ ಕುರಿತು ಪ್ರಾತ್ಯಕ್ಷಿತೆ ನಡೆಸಿದರು. ತುಮಕೂರಿನ ಕೊರಗ್ರಾಮದ ರೈತರೊಬ್ಬರ ಜಮೀನಿಗೆ ಭೇಟಿ ನೀಡಿದ ಕೃಷಿ ಸಚಿವರು ಆಪ್ ಕುರಿತು ಪ್ರಾತ್ಯಕ್ಷಿತೆ ಮೂಲಕ ರೈತರಿಗೆ ವಿವರ ನೀಡಿದರು.
ಈ ವೇಳೆ ಮಾತನಾಡಿದ ಅವರು, ರೈತ ತನಗೆ ತಾನೇ ಸರ್ಟಿಫಿಕೇಟ್ ಕೊಡುವಂತಹ ರೈತನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಬೆಳೆ ಸಮೀಕ್ಷೆ ಇದಾಗಿದ್ದು, 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ತಾನೇ ತನ್ನ ಹೊಲದ ಬಗ್ಗೆ ಸರ್ಟಿಫಿಕೇಟ್ ಕೊಡುವಂತಹ ಆಪ್ ಇದಾಗಿದೆ ಎಂದು ಹೇಳಿದ್ದಾರೆ.
ಸ್ವಾಭಿಮಾನಿ ರೈತ ತನ್ನ ಬೆಳೆ ಸಮೀಕ್ಷೆಯನ್ನು ತಾನೇ ನಡೆಸಿ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಬಹುದಾದ ಮಹತ್ತರ ಯೋಜನೆಯಿದಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಪ್ ಡೌನ್ಲೋಡ್ ಮಾಡಿಕೊಂಡು ತಮ್ಮ ಬೆಳೆ ವಿವರ ದಾಖಲಿಸಬೇಕು. ಇದೂವರೆಗೂ ಗ್ರಾಮದ ಪಿಆರ್ ಓ ಗಳು ಬೆಳೆ ಸಮೀಕ್ಷೆ ನಡೆಸುತ್ತಿದ್ದರು. ಕೆಲವೆಡೆ ಬೆಳೆ ಸಮೀಕ್ಷೆ ತಾಳೆಯಾಗದಿರುವುದು ಗಮನಕ್ಕೆ ಬಂದಿರುತ್ತದೆ. ಹೀಗಾಗಿ ಈ ಆಪ್ ಜಾರಿಗೊಳಿಸಲಾಗಿದೆ. ರೈತರೇ ತಮ್ಮ ಬೆಳೆ ಸಮೀಕ್ಷೆ ನಡೆಸುವ ವಿವರ ದಾಖಲಿಸುವ ಇಂತಹ ಬೆಳೆ ಸಮೀಕ್ಷೆ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಲೋಕಾರ್ಪಣೆಗೊಂಡಿದೆ.
ಕೇಂದ್ರ ಸರ್ಕಾರ ರೈತ ಬೆಳೆ ಸಮೀಕ್ಷೆ ಆಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೇರೆ ರಾಜ್ಯಗಳಿಗೂ ಇದು ಜಾರಿಗೊಳಿಸಲು ಚಿಂತನೆ ನಡೆಸಿದೆ ಎಂದು ಸಚಿವರು ತಿಳಿಸಿದರು. ನಿಗದಿತ ದಿನಾಂಕದೊಳಗೆ ಆಪ್ ಡೌನ್ಲೊಡ್ ಮಾಡಿಕೊಂಡು ವಿವರ ದಾಖಲಿಸಬೇಕು.ರೈತರೇ ಸ್ವತಃ ಬೆಳೆ ವಿವರ ದಾಖಲಿಸಿ ಫೋಟೋ ಅಪ್ಲೋಡ್ ಮಾಡಬೇಕು.ಯಾವುದೇ ಕಾರಣಕ್ಕೂ ಈ ಸದಾವಕಾಶದಿಂದ ರೈತರು ವಂಚಿತರಾಗಬಾರದು ಎಂದು ಸಚಿವರು ಹೇಳಿದರು.