ರೈತ ಪ್ರತಿಭಟನೆ ಎಂಬ ಬಡಬಾಗ್ನಿಯನ್ನು ಆರಿಸಲು ಪ್ರಭುತ್ವದಿಂದ ಸಾಲು ಸಾಲು ಜಲಫಿರಂಗಿಗಳು ವಿಫಲ: Marjala manthana farmers protest
“ಭಾಗ್ಯವಿಧಾತರು ಹೇಳೋದೆಲ್ಲಾ ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ; ಬುದ್ದಿ ಕಲಿಯದ ಭಕ್ತಮಹಾಜನ – ಬಿದ್ದರೂ ಮೀಸೆ ಮಣ್ಣಾಗದ ಆಳರಸರ ಹುಂಬತನ”
ಸರ್ವೋಚ್ಛ ನ್ಯಾಯಾಲಯಕ್ಕೆ ದೆಹಲಿಯ ರೈತ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಬಿಜೆಪಿ ಸಿಂಪಥೈಸರ್ ಗಳಿಂದ ಒಂದಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದವು. Marjala manthana farmers protest
ದೆಹಲಿ ಗಡಿ ಪ್ರದೇಶದ ರಸ್ತೆಗಳಲ್ಲಿ ಹರಿಯಾಣದ ಸಿಂಗು ಬಾರ್ಡರ್ ನಲ್ಲಿ ಕಿಲೋಮೀಟರ್ ಉದ್ದಕ್ಕೆ ರೈತರು ಬೀಡುಬಿಟ್ಟಿರುವ ಕಾರಣದಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಸಾವಿರಾರು ರೈತರು ನೆರೆದಿರುವುದರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಕೂಡಲೇ ರೈತರನ್ನು ಪ್ರತಿಭಟನಾ ಸ್ಥಳದಿಂದ ದೂರಕಳಿಸಬೇಕು ಎಂದು ಅರ್ಜಿಯಲ್ಲಿ ಅರುಹಲಾಯಿತು. ಕಳೆದ ಕೆಲವು ದಿನಗಳ ಹಿಂದೆ ಬಿಹಾರದ ಚುನಾವಣೆಯಾದಾಗ ಲಕ್ಷಾಂತರ ಜನ ರ್ಯಾಲಿಯ ನೆಪದಲ್ಲಿ ರಸ್ತೆಗಿಳಿದಿದ್ದರಲ್ಲ ಆಗೆಲ್ಲಿ ಹೋಗಿತ್ತು ಈ ಜನಪರ ಸಮಾಜಪರ ಪರಪರ ಶರಂಪರ ಕೋವಿಡ್ ಕಾಳಜಿ?
ಒಂದೆಡೆ ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ಪ್ರತಿಭಟಿಸುತ್ತಿರುವ ರೈತರ ಅಹವಾಲುಗಳಿಗೆ ಶೀಘ್ರದಲ್ಲಿ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ. ಯಾವುದೇ ಮಾತುಕಥೆ ನಡೆಸುವಾಗಲೂ ಪ್ರತಿಭಟನಾಕಾರ ರೈತ ನಾಯಕರನ್ನೂ ಗಣನೆಗೆ ತೆಗೆದುಕೊಂಡು ತೀರ್ಮಾನಿಸಲು ಸುಪ್ರೀಂ ಕೇಂದ್ರಕ್ಕೆ ಸಲಹೆ ನೀಡಿದೆ. ಇದೇ ಹಿನ್ನೆಲೆಯಲ್ಲಿ ರೈತ ಪ್ರತಿಭಟನಾಕಾರರು ಧರಣಿ ಮುಂದುವರೆಸಲು ಅನುಮತಿ ನೀಡಿದೆ ಸುಪ್ರೀಂ. ಇತ್ತ ಕೇಂದ್ರ ಸರ್ಕಾರಕ್ಕೂ ಸಾಧ್ಯವಾದಷ್ಟು ಬೇಗನೆ ಸಮಸ್ಯೆ ಇತ್ಯರ್ಥಗೊಳಿಸುವಂತೆ ತಾಕೀತು ಮಾಡಿದೆ. ಇಷ್ಟೆಲ್ಲಾ ರಾದ್ದಾಂತವಾದ ನಂತರವೇ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತ ನಾಯಕರಿಗೆ ದೀರ್ಘವಾದ ಪತ್ರಬರೆದಿದ್ದು.
ಇದು ರೈತ ಕಲ್ಯಣವಲ್ಲ ; ಕೃತಕ ಆಹಾರ ಅಭಾವ ಸೃಷ್ಟಿಸಲು ರೆಡ್ ಕಾರ್ಪೆಟ್ ಸ್ವಾಗತ:
ಪ್ರತೀ ರಾಜ್ಯಗಳಲ್ಲಿ ನೂರಾರು ಧಾನ್ಯ ಸಂಗ್ರಹಣಾ ಕೇಂದ್ರಗಳ ನಿರ್ಮಾಣ ಆರಂಭಗೊಂಡ ನಂತರವೇ ಪ್ರಧಾನಿಗಳ ತನ್ನ ಜಿಗರಿ ದೋಸ್ತ್ ಅದಾನಿಗಾಗಿ ಹೊಸ ಕೃಷಿ ಬಿಲ್ ಮೋದಿ ಪಾಸ್ ಮಾಡಿಸಲು ಪ್ಲಾನ್ ಹಾಕಿದ್ದು. ಇವು ಹೈಟೆಕ್ ಸಂಗ್ರಹಾಲಯಗಳು. ಇದರಲ್ಲಿ ಅಕ್ಕಿ, ಗೋಧಿ, ಆಹಾರ ಧಾನ್ಯಗಳನ್ನು ಶೇಖರಿಸಿಟ್ಟು ವರ್ಷಗಳವರೆಗೆ ಕೇಡಾಗದಂತೆ ಸಂರಕ್ಷಿಸುವ ತಂತ್ರಜ್ಞಾನವಿದೆ. ಅಲ್ಲಿಗೆ ಅನಧಿಕೃತ ದಾಸ್ತಾನು ಮಾಡಲು ಕೇಂದ್ರವೇ ಕಾರ್ಪೊರೇಟ್ ವಲಯಕ್ಕೆ ಪರವಾನಗಿ ಕೊಟ್ಟಂತಲ್ಲವೇ?
ಇದರ ಪರಿಣಾಮವೇನಾಗುತ್ತದೆ? ಅಗತ್ಯಕ್ಕೆ ತಕ್ಕಂತೆ ಮಾರುಕಟ್ಟೆಗೆ ಸರಕುಗಳನ್ನು ತಲುಪಿಸದೇ ತಡೆಹಿಡಿದು, ಕೃತಕ ಕ್ಷಾಮ ಸೃಷ್ಟಿಸಿ ಡಿಮ್ಯಾಂಡ್ ಹೆಚ್ಚಾದಾಗ ಒಂದಕ್ಕೆ ನಾಲ್ಕರಷ್ಟು ಬೆಲೆಯಲ್ಲಿ ಮಾರಬಹುದಲ್ಲ. ಹೇಳೋರು ಕೇಳೋರು ಯಾರಿಲ್ಲ. ಕಾಳಿ ಕಾಟ ಇಲ್ಲ ಬೋಳಿ ಹಂಗಿಲ್ಲ. 20 ರೂಪಾಯಿಗೆ ಸಿಗುವ ಈರುಳ್ಳಿಯನ್ನು ಗೋಡೌನ್ ನಲ್ಲಿ ಮುಚ್ಚಿಟ್ಟು ಅಭಾವ ಹೆಚ್ಚಾದಾಗ 100 ರೂಪಾಯಿ ಕೇಜಿಗೆ ಮಾರಬಹುದಲ್ಲ. ಇದು ಇಲ್ಲಿಯತನಕ ಈರುಳ್ಳಿಗೆ ಮಾತ್ರ ಈ ಪರಿಸ್ಥಿತಿ ಇತ್ತು. ಈ ಬಿಲ್ ಜಾರಿಯಾದರೆ ನಾವು ತಿನ್ನುವ ಪ್ರತೀ ಆಹಾರದ ಉತ್ಪನ್ನಗಳಿಗೂ ಇದೇ ಗತಿಯಾಗುತ್ತದೆ. ಅಂದ ಹಾಗೆ ನೂತನ ಕೃಷಿ ಕಾಯ್ದೆಯಲ್ಲಿ ಆರ್ಟಿಫಿಶಿಯಲ್ ಸ್ಟೋರೇಜ್ ವಿಚಾರದಲ್ಲಿ ಕಾರ್ಪೊರೇಟ್ ವಲಯಕ್ಕೆ ನಿಯಂತ್ರಣ ಹೇರುವ ಮಾನದಂಡವೇ ಇಲ್ಲ. ನಾಳೆ ಆರ್ಟಿಫಿಶಿಯಲ್ ಶಾರ್ಟೇಜ್ ಸ್ಥಿತಿ ಒದಗಿದರೇ ರೈತರು ಯಾರನ್ನು ಕೇಳಬೇಕು? ಕಷ್ಟ ಬಂದಾಗ ರಾಮ ರಾಮ ಎನ್ನಬೇಕು. ಆದರೆ ರಾಮನೇ ಕಷ್ಟ ಕೊಟ್ಟರೇ ಇನ್ಯಾರನ್ನು ಬೇಡಬೇಕು? ಇದು ಸನ್ಮಾನ್ಯ ಪ್ರಧಾನಿಗಳು ಈ ದೇಶವಾಸಿಗಳಿಗೆ ಮಾಡುತ್ತಿರುವ ಮಹದುಪಕಾರ.
ಇಷ್ಟಾದರೂ ನಮ್ಮ ಕೃತಘ್ನ ಜನರಿಗೆ ಮಾತ್ರ ಆಳುವ ಸರ್ಕಾರಗಳ ಹಗಲು ಪಾರಾಯಣ ಮಾತ್ರ ನಿಲ್ಲಿಸಲು ಮನಸಿಲ್ಲ. ಇವರಿಗೆ ತಿನ್ನುವ ಪ್ರತಿ ಅಗುಳಿನ ಕೃತಜ್ಞತೆಯೂ ಇಲ್ಲ. ದೆಹಲಿ ಮತ್ತು ಹರಿಯಾಣ ಗಡಿಯ ಸಿಂಗು ಬಾರ್ಡರ್ ನಲ್ಲಿ ಕೇಂದ್ರ ಸರ್ಕಾರದ ಕೃಷಿ ವಿಧಾಯಕದ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ರೈತರೇ ಅಲ್ಲ ಎಂದರು. ಪ್ರತಿಭಟನೆಯಲ್ಲಿರುವವರು ಪ್ರತ್ಯೇಕ ಖಲಿಸ್ತಾನ್ ಹೋರಾಟಗಾರರು ಎನ್ನಲಾಯ್ತು. ನಮ್ಮ ಶೋಭಕ್ಕನವರಂತೂ ಅವರು ರೈತರಲ್ಲ ಭಯೋತ್ಪಾದಕರು ತುಕಡೆ ತುಕಡೆ ಗ್ಯಾಂಗ್ ನವರು ಎಂದು ಬಿಟ್ಟರು. ಬಿಜೆಪಿ ಭಕ್ತ ಭಜನಾ ಮಂಡಳಿ ಸದಸ್ಯರು ಅವರನ್ನು ನಗರ ನಕ್ಸಲರು ದೇಶದ್ರೋಹಿಗಳು ಎಂದು ಘೋಷಣೆ ಮಾಡಿದರು. ಇಷ್ಟಾದರೂ ಪ್ರತಿಭಟನೆ 22 ದಿನಗಳಿಂದ ನಿಂತಿಲ್ಲ. ಪ್ರತೀ ದಿನ 3500 ಕೋಟಿ ನಷ್ಟವಾಗುತ್ತಿದೆ. ಬಿಜೆಪಿ ಪಿಆರ್ ಏಜೆನ್ಸಿ ಎಷ್ಟೇ ಹರಸಾಹಸ ಪಟ್ಟರೂ ಕೊರೆಯುವ ಚಳಿಯಲ್ಲಿ ರೈತರ ಉಗ್ರಹೋರಾಟ ನಿರಾತಂಕವಾಗಿ ಮುಂದುವರೆದಿದೆ. ಬಕರಾ ಭಕ್ತಾಧಿಗಳು ಮಾತ್ರ ಇದು ಅವತಾರ ಪುರುಷನ ತೇಜೋವಧೆಗೆ ವಿರೋಧ ಪಕ್ಷಗಳ ಷಡ್ಯಂತ್ರ ಎಂದು ಪುಂಗಿ ಊದುತ್ತಾ ತಿರುಗುತ್ತಿವೆ. ನೇಗಿಲಯೋಗಿಯ ಸಾತ್ವಿಕ ಹಠದ ಎದುರು ಯಾವ ಅಧಕಾರಶಾಹಿ ಕುತಂತ್ರಗಳೂ ನಡೆಯುವುದಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಇಷ್ಟರ ನಡುವೆ ಪ್ರತಿಭಟನೆಯೊಳಗೆ ನೂರಾರು ಜನ ಚಳುವಳಿಯ ದಾರಿ ತಪ್ಪಿಸುವವರೂ ಸೇರಿಕೊಂಡಿದ್ದಾರೆ ಎನ್ನುವುದು ನಿಸ್ಸಂಶಯ. ಪ್ರತ್ಯೇಕ ಖಲಿಸ್ತಾನದ ಭಿತ್ತಿಪತ್ರ ಕಂಡುಬಂದರೆ ಅವರು ಆ ಬಣದವರೆಂದು ನಿರ್ಧರಿಸಬಹುದು.
ಇನ್ನು ನಮ್ಮ ಮೋದಿ ಭಜನಾ ಕೇಂದ್ರದ ಮಾಧ್ಯಮ ವಿಭಾಗದ ಪಾರಾಯಣ ಇನ್ನೂ ಸ್ಟ್ರಾಂಗು. ಇವರ ಪ್ರಕಾರ ಪ್ರತಿಭಟನೆಯಲ್ಲಿರುವ ಭಾಗಶಃ ಜನ ರೈತರಲ್ಲ. ಪ್ರತಿಭಟನಾಕಾರರ ಮುಖಂಡರೂ ರೈತರಲ್ಲ. ಆ ಎಂಟು ಜನರಾದರೂ ಯಾರು ಗೊತ್ತಾ?
1) ಯೋಗೆಂದ್ರ ಯಾದವ್ – ಸ್ವರಾಜ್ ಇಂಡಿಯಾ ಸಂಘಟನೆಯ ಕನ್ವೀನರ್ ಹಾಗೂ ಖ್ಯಾತ ಸಾಮಾಜಿಕ ರೈತಪರ ಹೋರಾಟಗಾರ, ಸಂಯುಕ್ತ ಕಿಸಾನ್ ಮೋರ್ಚಾದ ಸಕ್ರೀಯ ಸದಸ್ಯರೂ ಸಹ ಹೌದು.
2) ಅಕ್ಷಯ್ ಕುಮಾರ್ – ನವಿ ನಿರ್ಮಾಣ ವಿಕಾಸ್ ಸಂಘಟನೆ(NNVS)ಸದಸ್ಯ, ಅಣ್ಣಾ ಹಜಾರೆ ಹಾಗೂ ಮೇಧಾ ಪಾಟ್ಕರ್ ನಿಕಟವರ್ತಿ, ನರ್ಮದಾ ಬಚಾವ್ ಅಂದೋಲನ ಹಾಗೂ ಆಝಾದಿ ಬಚಾವ್ ಆಂದೋಲನದ ಪ್ರಮುಖ ಸದಸ್ಯ.
3) ದರ್ಶನ್ ಪಾಲ್ – ಕ್ರಾಂತಿಕಾರಿ ಕಿಸಾನ್ ಯೂನಿಯನ್, ಪಂಜಾಬ್ ಸಂಘಟನೆ ರಾಜ್ಯಾಧ್ಯಕ್ಷ.
4) ಹನನ್ ಮೊಲ್ಲ – ಕುಲ್ಹಿಂದ ಕಿಸಾನ್ ಸಂಘರ್ಷ ತಾಲ್ಮೇಲ್ ಕಮಿಟಿ(AIKS) ಸದಸ್ಯ
5) ಕವಿತಾ ಕುರುಂಗತಿ – AIKSCC ಸಂಘಟನೆ ಸದಸ್ಯೆ
6) ಜಗ್ಮೋಹನ್ ಸಿಂಗ್ ಪಟಿಯಾಲ – BKU(ದಕೌಂದ) ಸಂಘಟನೆ ಸದಸ್ಯ,
7) ಕೀರನ್ಜೀತ್ ಸೆಖೋ – ಕುಲ್ಹಿಂದ್ ಕಿಸಾನ್ ಫೆಡರೇಶನ್ ಸದಸ್ಯ
8) ಪ್ರೇಮ್ ಸಿಂಗ್ ಬ್ನಾಂಗು- ಕಿಸಾನ್ ಫೆಡರೇಶನ್ ಸದಸ್ಯ
ಇನ್ನು ರೈತರ ಹೋರಾಟ ಬೆಂಬಲಿಸಿ ಉಪವಾಸ ಕುಳಿತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಸಹ ರೈತರಲ್ಲ. ಹಾಗಿದ್ದರೆ ರೈತರು ಯಾರು? ಸನ್ಮಾನ್ಯ ಪ್ರಧಾನಿಗಳು, ಗೃಹಸಚಿವರು, ರೈತನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪನವರು, ಮಣ್ಣಿನ ಮಗ ದೊಡ್ಡಗೌಡರು ಎಂಡ್ ಫ್ಯಾಮಿಲಿ. ಲಾಸ್ಟ್ ಬಟ್ ನಾಟ್ ಲೀಸ್ಟ್ ಸೀಸನಲ್ ಹೋರಾಟಗಾರ ಕಂ ಸೋ ಕಾಲ್ಡ್ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು. ಅಲ್ಲವೇ? ಇಲ್ಲಿ ವಿಷಯ ಸ್ಪಷ್ಟವಿದೆ ಕಮ್ಯುನಿಷ್ಟರು ಕಾಂಗ್ರೆಸ್ಸಿಗರು ರೈತರ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ವಿರೋಧ ಪಕ್ಷವಾಗಿ ಅವರ ನಡೆ ಸಹಜ. ಅವರು ಬೆಂಬಲಿಸಿದ್ದಾರೆಂದ ಮಾತ್ರಕ್ಕೆ ಈ ರೈತ ಹೋರಾಟವೇ ದೇಶದ್ರೋಹದ ನಡೆ ಎಂದು ಪರಿಗಣಿಸುವ ಬಿಜೆಪಿ ಉಗ್ರ ಸಮರ್ಥಕರ ವಾದವಿದೆಯಲ್ಲ ಅದನ್ನು ಮೂರ್ಖತನವನ್ನಬೇಕೋ ಅಥವ ಶಿವಲೀಲೆ ಎನ್ನಬೇಕೋ. ಆದದ್ದು ಆಯಿತು. ಕೇಂದ್ರದ ಯಾವ ಅಸ್ತ್ರಗಳು ಈಗ ಕೆಲಸ ಮಾಡುತ್ತಿಲ್ಲ. ಈಗಲಾದರೂ ಕುಳಿತು ಮಾತುಕಥೆಯ ಮೂಲಕ ಸಮಸ್ಯೆ ಪರಿಹರಿಸಿ ರೈತರ ಪರವಾದ ಬಿಲ್ ಜಾರಿ ಮಾಡಲಿ. ನಿಜವಾದ ರೈತ ಕಲ್ಯಾಣದ ಮಾರ್ಗಸೂಚಿಗಳನ್ನು ಬಿಲ್ ನಲ್ಲಿ ಸೇರಿಸಲಿ. ಈಗಾಗಲೆ 70 ಸಾವಿರ ಕೋಟಿಗೂ ಅಧಿಕ ಬೊಕ್ಕಸಕ್ಕೆ ನಷ್ಟವಾಗಿದೆ. ಆರ್ಥಿಕವಾಗಿ ಚೇತರಿಸಿಕೊಳ್ಳಬೇಕಾಗಿರುವ ಈ ಸಂದರ್ಭದಲ್ಲಿ ಹೀಗೆ ಉಡಾಫೆಯಿಂದ ವರ್ತಿಸುವುದು ಪ್ರಧಾನಿಯವರಿಗಾಗಲೀ, ಸರ್ಕಾರಕ್ಕಾಗಲಿ ಶೋಭೆಯಲ್ಲ.
–ವಿಭಾ ( ವಿಶ್ವಾಸ್ ಭಾರದ್ವಾಜ್ )
ಮಾರ್ಜಾಲ ಮಂಥನ ಕಾಲಂ
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel