ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಡಾ ಯತೀಂದ್ರ ಅವರನ್ನು ರಾಜಕೀಯ ನಾಯಕನನ್ನಾಗಿ ರೂಪಿಸಲು ಮೈಸೂರು ಭಾಗದ ಹಿರಿಯ ಕಾಂಗ್ರೆಸ್ ನಾಯಕರ ರಾಜಕೀಯ ಭವಿಷ್ಯವನ್ನೇ ಬಲಿ ಕೊಟ್ಟಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ರಾಜಕೀಯ ಶೈಲಿಯ ವಿರುದ್ಧ ಕಟು ಟೀಕೆಗಳನ್ನು ಮಾಡಿದರು. ಮಗನನ್ನು ಮಂತ್ರಿ ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಭಾಗದ ನಾಯಕರನ್ನು ಹೇಗೆ ಮೂಲೆಗುಂಪು ಮಾಡಿದರೋ, ಅದೇ ಮಾದರಿಯನ್ನು ಸಿದ್ದರಾಮಯ್ಯ ಅವರು ಇಲ್ಲಿ ಅನುಸರಿಸಿದ್ದಾರೆ ಎಂದು ಅವರು ಆರೋಪಿಸಿದರು.
ಆಪ್ತ ಸ್ನೇಹಿತರನ್ನೇ ಮೂಲೆಗುಂಪು ಮಾಡಿದ ಮಾಜಿ ಸಿಎಂ
ತಮ್ಮ ಸುದೀರ್ಘ ರಾಜಕೀಯ ಹಾದಿಯಲ್ಲಿ ಸದಾ ಜೊತೆಗಿದ್ದ ಸ್ನೇಹಿತರಾದ ಡಾ ಎಚ್ ಸಿ ಮಹದೇವಪ್ಪ ಮತ್ತು ಕೆ ವೆಂಕಟೇಶ್ ಅವರ ಸ್ನೇಹಕ್ಕೆ ಸಿದ್ದರಾಮಯ್ಯ ಬೆಲೆ ಕೊಡಲಿಲ್ಲ. ಮಗನ ತಲೆ ಮೇಲೆ ಮಾತ್ರ ಅಧಿಕಾರದ ಕಿರೀಟ ಇರಬೇಕು ಎಂಬ ಕಾರಣಕ್ಕೆ ದಲಿತರ ಧ್ವನಿಯಾಗಿದ್ದ ಮಹದೇವಪ್ಪ ಅವರನ್ನು ಬದಿಗೊತ್ತಿದ್ದಾರೆ. ಸಭ್ಯ ರಾಜಕಾರಣಿ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗದಂತೆ ತಡೆದಿದ್ದೇ ಸಿದ್ದರಾಮಯ್ಯ ಎಂದು ಪ್ರತಾಪ ಸಿಂಹ ದೂರಿದರು.
ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಭ್ರಷ್ಟಾಚಾರದ ಬಗ್ಗೆ ದೊಡ್ಡ ಭಾಷಣ ಮಾಡುವ ಅವರು, ಈಗ ಮಗನಿಗಾಗಿ ಎಲ್ಲರನ್ನೂ ತುಳಿಯುವ ಮೂಲಕ ರಾಜಕೀಯ ವ್ಯವಸ್ಥೆಯನ್ನು ಕಲುಷಿತಗೊಳಿಸಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅಥವಾ ಗಾಯತ್ರಿ ಶಾಂತೇಗೌಡ ಅವರಂತಹ ಮಹಿಳೆಯರಿಗೆ ಸ್ಥಾನ ನೀಡದೆ ಇರುವುದು ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
ಅಪ್ಪನ ಕೋಟಾದಲ್ಲಿ ಮಂತ್ರಿಯಾದ ಯತೀಂದ್ರ
ಯತೀಂದ್ರ ಅವರು ತಮ್ಮ ಸ್ವಂತ ಮೆರಿಟ್ ನಿಂದ ಅಥವಾ ಶಕ್ತಿಯಿಂದ ಮಂತ್ರಿಯಾಗಿಲ್ಲ. ಕೇವಲ ಅಪ್ಪನ ಕೋಟಾದಡಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಮೆರಿಟ್ ಇಲ್ಲದ ಯತೀಂದ್ರ ಅವರು ನಾಯಕರಾಗುವುದಿಲ್ಲ ಎಂಬ ಭಯದಿಂದಲೇ ಸಿದ್ದರಾಮಯ್ಯ ಅವರು ಈ ಭಾಗದ ಇತರ ಸಮರ್ಥ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ. ಕರ್ನಾಟಕದ ರಾಜಕೀಯವನ್ನು ಹೊಲಸು ಮಾಡಿದ್ದೇ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.
ಹಿಂದೂ ರಾಷ್ಟ್ರದ ಬಗ್ಗೆ ಯತೀಂದ್ರ ಹೇಳಿಕೆಗೆ ಕಿಡಿ
ಭಾರತ ಹಿಂದೂ ರಾಷ್ಟ್ರವಾಗಬಾರದು ಎಂಬ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ ಸಿಂಹ, ಭಾರತವನ್ನು ಯಾರೋ ಹೊಸದಾಗಿ ಹಿಂದೂ ರಾಷ್ಟ್ರ ಮಾಡಬೇಕಿಲ್ಲ, ಇದು ಸ್ವಾಭಾವಿಕವಾಗಿಯೇ ಹಿಂದೂ ರಾಷ್ಟ್ರವಾಗಿದೆ. ಯತೀಂದ್ರ ಅವರೇ, ನಿಮಗೆ ಇಂದು ಮಂತ್ರಿ ಸ್ಥಾನ ಸಿಕ್ಕಿರುವುದು ಇದೇ ಹಿಂದೂ ಧರ್ಮದ ಜಾತಿ ವ್ಯವಸ್ಥೆಯಿಂದ ಎಂಬುದನ್ನು ಮರೆಯಬೇಡಿ. ಅಂತಹ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಅವರ ಪುತ್ರ ವ್ಯಾಮೋಹ ಮತ್ತು ಹಿರಿಯ ನಾಯಕರ ಕಡೆಗಣನೆ ಈಗ ಮೈಸೂರು ಕಾಂಗ್ರೆಸ್ ನಲ್ಲಿ ಆಂತರಿಕ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಪ್ರತಾಪ ಸಿಂಹ ಅಭಿಪ್ರಾಯಪಟ್ಟರು.








