ಐನೂರು ರೂಪಾಯಿಯಲ್ಲಿ ಬದುಕು ಕಟ್ಟಿದವ ಸಾವಿರ ಕೋಟಿಯ ಒಡೆಯನಾದ !
ಮುಂಬೈ, ಜುಲೈ9: ಜೀವನದಲ್ಲಿ ನಾವು ಏನಾದರೂ ಸಾಧಿಸಬೇಕು ಎಂದು ಹೊರಟಾಗ ಬಹಳಷ್ಟು ಅಡೆತಡೆಗಳು, ನಮ್ಮನ್ನು ಮೇಲಕ್ಕೆ ಏರದಂತೆ ತಡೆಯುವ ಜನರು, ಅನೇಕ ಕಷ್ಟನಷ್ಟಗಳು ಎದುರಾಗುತ್ತದೆ. ಆದರೆ ಸಾಧಿಸಲೇ ಬೇಕು ಎನ್ನುವ ಮನಸ್ಥಿತಿಯೊಂದಿದ್ದರೆ, ನಮ್ಮ ಯಶಸ್ಸನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.
ತನ್ನ ಬದುಕಲ್ಲಿ ಎಲ್ಲವನ್ನೂ ಕಳೆದುಕೊಂಡು, ಪ್ರಾರಂಭದಿಂದಲೇ ತನ್ನ ಬದುಕನ್ನು ಆರಂಭಿಸಿದ ವ್ಯಕ್ತಿಯೊಬ್ಬರ ಕಥೆ ಇದು.
ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ಅವರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು. ಎಲ್ಲವನ್ನೂ ಕಳೆದುಕೊಂಡು ಬರಿಕೈನಲ್ಲಿ ಬೀದಿಗೆ ಬಂದಿದ್ದ ಆತ ಇಂದು ವರ್ಷಕ್ಕೆ 1,000 ಕೋಟಿ ರೂ ಆದಾಯ ಗಳಿಸುವ ಸಂಸ್ಥೆಗಳ ಒಡೆಯ.

ನಿತಿನ್ ಷಾ ಮಹಾರಾಷ್ಟ್ರದ ಸಣ್ಣ ವ್ಯಾಪಾರ ಕುಟುಂಬದಲ್ಲಿ ಜನಿಸಿದ್ದರು. ಅಲ್ಲಿ ಅವರ ತಂದೆ ಅಗ್ನಿ ಶಾಮಕಗಳನ್ನು ಸ್ಥಳೀಯವಾಗಿ ಪೂರೈಸುವಂತ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಜೀವನವು ಚೆನ್ನಾಗಿ ನಡೆಯುತಿತ್ತು. ಚಿಕ್ಕಂದಿನಿಂದಲೇ ಚುರುಕುತನದಿಂದ ಕೂಡಿದ್ದ ನಿತಿನ್ ಶಾಲೆಯಿಂದ ಮನೆಗೆ ಹಿಂದಿರುಗಿದ ಮೇಲೆ ಏನನ್ನಾದರೂ ಮಾಡಲು ಯೋಚಿಸುತ್ತಿದ್ದರು ಮತ್ತು ಅವರು ಆಗಾಗ್ಗೆ ತನ್ನ ತಂದೆಯೊಂದಿಗೆ ಅಂಗಡಿಯಲ್ಲಿ ಸಮಯ ಕಳೆಯುತ್ತಿದ್ದರು
ನಿತಿನ್ ಕಾಲೇಜಿಗೆ ಸೇರಿದಾಗಲೂ ಈ ಅಭ್ಯಾಸವೇ ಮುಂದುವರೆಯಿತು. ಅವರು ತನ್ನ ಎಲ್ಲಾ ರಜಾದಿನಗಳನ್ನು ತನ್ನ ತಂದೆಯನ್ನು ಗಮನಿಸುತ್ತಾ ಮತ್ತು ವ್ಯಾಪಾರದ ತಂತ್ರಗಳನ್ನು ಕಲಿಯುತ್ತಾ ಕಳೆದರು. ಆದರೆ ಅವರು ಕಾಲೇಜು ಮುಗಿಸಿ ತನ್ನ ತಂದೆಯ ವ್ಯವಹಾರದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಪ್ರಾರಂಭಿಸುವ ಹೊತ್ತಿಗೆ ಅವರ ಬದುಕಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಯಿತು. ನಿತಿನ್ ಅವರ ಹಿರಿಯ ಸಹೋದರ ಮೋಸ ಮಾಡಿ ತಂದೆಯ ವ್ಯವಹಾರವನ್ನು ಸಂಪೂರ್ಣ ತನ್ನ ವಶಮಾಡಿ ಅವರನ್ನು ಮನೆ ಬಿಟ್ಟು ಓಡಿಸಿದ. ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಮುಗಿಸಿದ ನಂತರ ತಂದೆಯ ವ್ಯವಹಾರವನ್ನು ವಿಸ್ತರಿಸುವುದಾಗಿ ಕನಸು ಕಾಣುತ್ತಾ ಬೆಳೆದಿದ್ದ ನಿತಿನ್ ಗೆ ಆ ಸಮಯ ಬಂದಾಗ ಮನೆಯೂ ಸೇರಿದಂತೆ ಯಾವುದು ಇರಲಿಲ್ಲ.
ಅವರ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ, ಅವರು ಖಿನ್ನತೆಗೆ ಬಲಿಯಾಗುತ್ತಿದ್ದರು ಅಥವಾ ಜೀವನವನ್ನು ಎದುರಿಸಲು ಸಾಧ್ಯವಾಗದೇ ಬದುಕನ್ನೇ ಕೊನೆಗೊಳಿಸುತ್ತಿದ್ದರೋ ಎನೋ, ಆದರೆ ನಿತಿನ್ ತಾನು ಕಂಡಿದ್ದ ಕನಸನ್ನು ನನಸಾಗಿಸುವ ಧೈರ್ಯವನ್ನು ಹೊಂದಿದ್ದರು. ಅವರು ತಮ್ಮ ಜೇಬನ್ನು ಪರಿಶೀಲಿಸಿದಾಗ ಅದರಲ್ಲಿ ಕೇವಲ 20 ರೂಪಾಯಿ ನೋಟು ಮಾತ್ರ ಇತ್ತು. ಇಷ್ಟು ಸಣ್ಣ ಮೊತ್ತದಿಂದ ತಾನು ಏನನ್ನಾದರೂ ಮಾಡಬಹುದೇ ಎಂದು ನಿತಿನ್ ಯೋಚಿಸಿದರು ಮತ್ತು ಸಂಕೋಚದಿಂದ, ಅವರ ಸ್ನೇಹಿತರನ್ನು ಸಂಪರ್ಕಿಸಿ ನಡೆದ ಘಟನೆಗಳನ್ನು ಅವರಿಗೆ ವಿವರಿಸಿದರು.
ನಿತಿನ್ ಸ್ನೇಹಿತರು ಅವರಿಗೆ ಆಗಿರುವ ಮೋಸವನ್ನು ತಿಳಿದು ಅವರ ಬೆಂಬಲಕ್ಕೆ ನಿಂತರು. ಸ್ನೇಹಿತರಿಂದ 500ರೂ ಮೊತ್ತವನ್ನು ಪಡೆದ ನಿತಿನ್ ಅದರಲ್ಲಿ ಕೆಲವು ದಿನಗಳವರೆಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡರು. ಬಳಿಕ ಅವರಿಗೆ ಮುಂಬೈನ ಆಟೋ ಗ್ಯಾರೇಜ್ನಲ್ಲಿ ಕೆಲಸವೊಂದು ಸಿಕ್ಕಿತು. ಅವರು ಆ ಕೆಲಸದಲ್ಲಿ ಸಿಗುತ್ತಿದ್ದ ಸಂಬಳದಲ್ಲಿ ಹಣವನ್ನು ಉಳಿಸಿ ತಮ್ಮದೇ ಆದ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಕುರಿತು ಯೋಚನೆ ಮಾಡಿದರು. ನಂತರ ಅವರು ತಮ್ಮ ತಂದೆ ಜೊತೆಗೆ ಕೆಲಸ ಮಾಡುವಾಗ ಪರಿಚಯವಿದ್ದ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಿದರು. ಈ ವ್ಯಕ್ತಿಯು ಪರಮಾಣು ಇಂಧನ ಇಲಾಖೆಯಲ್ಲಿ ಹಿರಿಯ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದರು ಮತ್ತು ನಿತಿನ್ಗೆ ತನ್ನ ಇಲಾಖೆಯಲ್ಲಿ ಅಗ್ನಿಶಾಮಕ ಯಂತ್ರಗಳ ನಿರ್ವಹಣಾ ಒಪ್ಪಂದವನ್ನು ಕೊಟ್ಟರು.

ಆ ಒಪ್ಪಂದವು ನಿತಿನ್ ಬದುಕಲ್ಲಿ ಬದಲಾವಣೆಗೆ ಕಾರಣವಾಯಿತು. ಮೊದಲ ನಿಯೋಜನೆಯ ಯಶಸ್ಸಿನಿಂದ ನಿರಾಳರಾದ ಅವರು ಸಹಾಯಕರಾಗಿ ಮೂರು ಜನರನ್ನು ನೇಮಿಸಿಕೊಂಡರು. ಆ ಸಮಯದಲ್ಲಿ ಬಹಳ ಕಡಿಮೆ ಉಪಕರಣಗಳನ್ನು ಅವರು ಹೊಂದಿದ್ದ ಕಾರಣ ಸಂಪನ್ಮೂಲಗಳ ಕೊರತೆಯನ್ನು ಎದುರಾದರೂ ಅದನ್ನು ತನ್ನ ಬುದ್ಧಿವಂತಿಕೆಯಿಂದ ಸರಿದೂಗಿಸುವಲ್ಲಿ ಸಫಲರಾದ ಅವರು ಅಲ್ಲಿಂದ ಹಿಂತಿರುಗಿ ನೋಡಲಿಲ್ಲ. ಕೆಲವೇ ತಿಂಗಳಲ್ಲಿ ಅವರು ಅಗ್ನಿಶಾಮಕ ಉತ್ಪಾದನಾ ಉದ್ಯಮಕ್ಕೆ ಜಾಗವನ್ನು ಖರೀದಿಸಿ ಅಡಿಪಾಯ ಹಾಕಿದರು.
ಹಲವಾರು ಸಣ್ಣ ಕಾರ್ಯಯೋಜನೆಯ ನಂತರ ನಿತಿನ್ ಕಂಪನಿಯು 1986 ರಲ್ಲಿ ಒಎನ್ಜಿಸಿಯ ನಿರ್ವಹಣೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಒಂದು ಒಪ್ಪಂದವು ನಿತಿನ್ರ ಕಂಪನಿಯ ಮಹತ್ವದ ತಿರುವಿಗೆ ಕಾರಣವಾಯಿತು.
1986 ರ ಅಂತ್ಯದ ವೇಳೆಗೆ ಕಂಪನಿಯು 7 ಕೋಟಿ ರೂ.ಗಳ ವಹಿವಾಟಿನ ಗಡಿ ದಾಟಿತು ಮತ್ತು 1987 ರಲ್ಲಿ ನಿತಿನ್ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದರು. ಗುಜರಾತ್ನ ಉಮರ್ಗಾಂವ್ನಲ್ಲಿ 1 ಕೋಟಿ ರೂ ಮತ್ತು 25 ಉದ್ಯೋಗಿಗಳ ಹೂಡಿಕೆಯೊಂದಿಗೆ ಹೊಸ ಘಟಕವನ್ನು ಸ್ಥಾಪಿಸಿದರು. ಇದು ಅವರ ಬಹಳ ದಿಟ್ಟ ಕ್ರಮವಾಗಿತ್ತು ಏಕೆಂದರೆ ಮುಂಬೈನಲ್ಲಿ ಅವರ ಘಟಕವು ಅವರ ಹಲವಾರು ಸ್ಪರ್ಧಿಗಳಿಗಿಂತ ಇನ್ನೂ ಸಣ್ಣ ಮಟ್ಟದಲ್ಲಿ ಇತ್ತು.

ನಿತಿನ್ ತನ್ನ ವ್ಯವಹಾರದಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡರು ಮತ್ತು ಅದನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋದರು. ಮತ್ತೊಂದು ಪ್ರಮುಖ ಸಾಧನೆಯಲ್ಲಿ, ಅವರು 1988 ರಲ್ಲಿ ಗೋವಾದಲ್ಲಿ ತಮ್ಮ ಮೂರನೇ ಘಟಕವನ್ನು ತೆರೆದರು ಮತ್ತು ನಿರ್ವಹಣಾ ಒಪ್ಪಂದಗಳ ಜೊತೆಗೆ ಸಲಕರಣೆಗಳ ವಿನ್ಯಾಸ ಮತ್ತು ಉತ್ಪಾದನಾ ಸೇವೆಗಳನ್ನು ಸೇರಿಸಿದರು. 1989 ರಲ್ಲಿ, ಬ್ರಿಟಿಷ್ ಕಂಪನಿ ಅಪೊಲೊ ಫೈರ್ ಡಿಟೆಕ್ಟರ್ಸ್ ನಿತಿನ್ ಅವರೊಂದಿಗೆ ಕೈಜೋಡಿಸಿತು. ನಂತರ ಜೂನ್ 2007 ರಲ್ಲಿ 65 ಕೋಟಿ ರೂ.ಯ ಐಪಿಒ ಪ್ರಾರಂಭಿಸಿತು.
2008, ಅವರ ಸಹೋದರ ಸಂಸ್ಥೆ ನಿತಿನ್ ವೆಂಚರ್ಸ್ ಯುಎಇಯಿಂದ ಕಂಪನಿಯಲ್ಲಿ ಷೇರುಗಳನ್ನು ಖರೀದಿಸಲು ಪ್ರಾರಂಭಿಸಿತು ಮತ್ತು 2010 ರ ಹೊತ್ತಿಗೆ ಅವರು ಅದನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡರು. ಈ ಕ್ರಮವು ಅಬುಧಾಬಿ, ದುಬೈ ಮತ್ತು ಶಾರ್ಜಾದಲ್ಲಿ ಅಗ್ನಿ ಸುರಕ್ಷತಾ ಸಾಧನಗಳೊಂದಿಗೆ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ನಿತಿನ್ ಗೆ ಸಹಾಯ ಮಾಡಿತು. ಇತ್ತೀಚೆಗೆ, ಅವರು ಮತ್ತೊಂದು ಸಾಹಸೋದ್ಯಮ ಕಂಪನಿಯನ್ನು ಪ್ರಾರಂಭಿಸಿದ್ದಾರೆ, ಅದರ ಮೂಲಕ ಅವರು ಯುರೋಪಿಯನ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದಾರೆ.
ಇಂದು, ಈ ಕಂಪನಿಯು ಜಡ ಅನಿಲಗಳು, ರಾಸಾಯನಿಕ ಅನಿಲಗಳು, ನೀರು ಮತ್ತು ಎಲ್ಲಾ ರೀತಿಯ ಅಗ್ನಿ ಸುರಕ್ಷತಾ ಉತ್ಪನ್ನಗಳನ್ನು ನಿರ್ವಹಿಸುವ ವಿಶ್ವದ ಏಕೈಕ ಕಂಪನಿಯಾಗಿದೆ. ಕೇವಲ 500 ರೂ.ಗಳಿಂದ ತನ್ನ ಬದುಕನ್ನು ಪ್ರಾರಂಭಿಸಿದ ನಿತಿನ್ ಅವರ ಕಂಪನಿಯು ಇಂದು ವಾರ್ಷಿಕ 1,000 ಕೋಟಿ ರೂ ಆದಾಯ ಗಳಿಸುತ್ತಿದೆ.








