ಅದು ಜೈಪುರದ ಸವಾಯ್ ಮಾನ್ ಸಿಂಗ್ ಅಂಗಣ. ಎಲ್ಲರ ಚಿತ್ತ ಇದ್ದದ್ದು ಆ 14ರ ಹರೆಯದ ಪುಟ್ಟ ಪೋರನತ್ತ…ಆ ಹುಡುಗ ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ. ಝಗಮಗಿಸುವ ವಿದ್ಯುತ್ ಮಂಡಲದ ಪ್ರಭೆಯಲ್ಲಿ ಶೋಭಿಸುತ್ತಾ… ಪ್ರಖರ ಸೂರ್ಯನ ಜ್ವಾಲೆಯಂತೆ ಪ್ರಜ್ವಲಿಸುತ್ತಾ.. ಚಂದಿರನ ಬೆಳಕಿನಲ್ಲಿ ಅರಳಿದ ಮಲ್ಲಿಗೆಯಂತೆ ಇಡೀ ವಿಶ್ವ ಕ್ರಿಕೆಟ್ಗೆ ಸುವಾಸನೆಯನ್ನು ಬೀರಿದ ವೈಭವನ ವೈಭೋಗದ ಆಟಕ್ಕೆ ಯಾರ ದೃಷ್ಟಿಯೂ ಬೀಳದಿರಲಿ ಅಷ್ಟೇ.!
ಹೌದು, 14ರ ಹರೆಯದ ಬಾಲಕ ವೈಭವ್ ಈ ಬಾರಿಯ ಐಪಿಎಲ್ನಲ್ಲಿ ಚೆಂಡಾಡಿದ ಪರಿ ನಿಜಕ್ಕೂ ಬೆರಗುಗೊಳಿಸುತ್ತೆ. ಆಡಿದ ಮೊದಲ ಪಂದ್ಯದ ಮೊದಲ ಎಸೆತವನ್ನೇ ಸಿಕ್ಸರ್ಗಟ್ಟಿದ್ದಾಗಲೇ ಈತ ಅಸಾಮಾನ್ಯ ಬಾಲಕ ಎಂಬುದು ಸಾಬೀತಾಗಿತ್ತು. ಅದರಲ್ಲೂ ವಿಶ್ವ ದರ್ಜೆಯ ಬೌಲರ್ಗಳನ್ನು ಈತ ದಂಡಿಸುವ ರೀತಿಗೆ ಅಚ್ಚರಿಗೊಳ್ಳದೇ ಇರಲು ಸಾಧ್ಯವೇ ಇಲ್ಲ.
ಹೊಡಿ ಬಡಿ ಆಟವೇ ಈತನ ಮೂಲ ಮಂತ್ರ. ಬೌಲರ್ ಯಾರು ಅನ್ನೋದನ್ನು ನೋಡಲ್ಲ. ಅದು ಆತನಿಗೆ ಬೇಕಾಗಿಯೂ ಇಲ್ಲ. ತನ್ನ ಬ್ಯಾಟ್ನಿಂದ ರನ್ ಹೊಡೆಯಬೇಕು ಅಷ್ಟೇ.. ಚೆಂಡು ಬೌಂಡರಿ – ಸಿಕ್ಸರ್ ಗೆರೆ ದಾಟಬೇಕು. ಅದನ್ನು ನೋಡಿಯೇ ಮನದೊಳಗೆ ಖುಷಿ ಪಡುತ್ತಾನೆ.. ಸೀನಿಯರ್ ಬೌಲರ್ಗಳೇ ಈತನ ಬ್ಯಾಟಿಂಗ್ ವೈಖರಿಗೆ ಸುಸ್ತಾಗುತ್ತಾರೆ ಅಂದ ಮೇಲೆ ಬೇರೆ ಬೌಲರ್ಗಳಿಗೆ ನರಕ ದರ್ಶನವಾಗುವುದರಲ್ಲಿ ಅಚ್ಚರಿ ಏನಿಲ್ಲ.
ಮೀಸೆ ಚಿಗುರದ ಹುಡುಗನ ತಾಕತ್ತು.. ಪ್ರತಿಭೆಯನ್ನು ಪ್ರಶ್ನೆ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತಿದ್ದಾನೆ. ಈ ಬಾರಿಯ ಐಪಿಎಲ್ನ ಬಲಿಷ್ಠ ತಂಡ ಎಂದೇ ಬಿಂಬಿತವಾಗಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಕೊಟ್ಟ ಏಟು ಇದೆಯಲ್ವಾ ಅದನ್ನು ಮರೆಯಲು ಸಾಧ್ಯವೇ ಇಲ್ಲ.
17 ಎಸೆತದಲ್ಲಿ ಅರ್ಧಶತಕ.. 35 ಎಸೆತದಲ್ಲಿ ಸೆಂಚುರಿ..ಅದರಲ್ಲಿ 11 ಸಿಕ್ಸರ್.. ಏಳು ಬೌಂಡರಿಗಳು… ಅಂದ್ರೆ 94 ರನ್ಗಳು ಬರೀ 18 ಎಸೆತಗಳಲ್ಲಿ ಬಂದಿವೆ. ಹಾಗಂತ ಇದು ಮ್ಯಾಜಿಕ್ ಬ್ಯಾಟ್ನಿಂದ ಬಂದಿರೋದು ಅಲ್ಲ.. ಅಥವಾ ಯಾವುದೇ ಸಿನಿಮಾದಲ್ಲಿ ಮೂಡಿರುವ ಆಟವಲ್ಲ.. 14ರ ಹರೆಯದ ಬಾಲಕ ಬರೆದು, ನಿರ್ದೇಶಿಸಿ, ನಿರ್ಮಾಣ ಮಾಡಿರುವ ವೈಭವನ ಬೇಬಿ ಬಾಸ್ ಆಟದ ಖದರ್.
ಬಹುಶಃ ವೈಭವನ ಬ್ಯಾಟಿಂಗ್ ಝಳಕನ್ನು ಮೈದಾನದಲ್ಲಿ ನೋಡಿದವರಿಗೆ ಹೈಲೈಟ್ಸ್ ನೋಡಿದಂಗೆ ಭಾಸವಾದ್ರೂ ಅಚ್ಚರಿ ಏನಿಲ್ಲ. ಮನೆಯಲ್ಲಿ ಟಿವಿ ನೋಡಿಕೊಂಡು ಪಂದ್ಯ ನೋಡುತ್ತಿದ್ದವರು ಬೇರೆ ಚಾನೆಲ್ ನೋಡೋ ಮನಸ್ಸಾಗಲ್ಲ. ಯಾಕಂದ್ರೆ ಅಷ್ಟೊಂದು ಕೂಲ್ ಆಗಿಯೇ ಆಡುತ್ತಿರುವ ಈ ಪೋರನ ಆಟವನ್ನು ಮನಸಾರೆ ಎಂಜಾಯ್ ಮಾಡಬೇಕು ಎಂದು ಅನ್ನಿಸುತ್ತಿರುತ್ತದೆ. ಮುಖದಲ್ಲಿ ಒಂಚೂರು ಟೆನ್ಷನ್ ಇಲ್ಲ. ಅಹಂ ಇಲ್ಲ.. ಜಾಸ್ತಿ ಸಂಭ್ರಮಪಡಲ್ಲ. ಏನೋ ಮಾಮೂಲಿಯಾಗಿ ಆಡುತ್ತಿದ್ದೇನೆ ಎಂಬಂತೆ ಬ್ಯಾಟ್ ಬೀಸುವ ಈ ಹುಡುಗನ ಹಿಂದಿನ ಶಕ್ತಿಯೇ ಗುರು ರಾಹುಲ್ ದ್ರಾವಿಡ್.
ಅದರಲ್ಲೂ 14ರ ಹರೆಯದ ಹುಡುಗನನ್ನು ಐಪಿಎಲ್ನಂತಹ ಹೈವೋಲ್ಟೆಜ್ ಮ್ಯಾಚ್ನಲ್ಲಿ ಆಡಿಸುವುದು ಅಂದ್ರೆ ಅದು ತಮಾಷೆಯ ಸಂಗತಿಯಲ್ಲ. ಒಬ್ಬ ಕೋಚ್ ಆಗಿ ರಾಹುಲ್ ದ್ರಾವಿಡ್ ಸಾಕಷ್ಟು ರಿಸ್ಕ್ ತಗೊಂಡೇ ಈ ನಿರ್ಧಾರವನ್ನು ತಂಗೋಡಿರುತ್ತಾರೆ. ಹೊಡಿ ಬಡಿ ಆಟವಾಗಿರುವ ಟಿ-20ಯಲ್ಲಿ ಓರ್ವ ಹೈಸ್ಕೂಲ್ ಹುಡುಗನನ್ನು ಆಡಿಸುವುದು ಅಂದ್ರೆ ಆತನ ಪ್ರತಿಭೆ, ಸಾಮಥ್ರ್ಯವನ್ನು ಮೊದಲು ಅರಿತುಕೊಂಡಿರಬೇಕು. ಜೊತೆಗೆ ಆತನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ರೆಡಿ ಮಾಡಿಸಬೇಕು. ಆ ಕೆಲಸವನ್ನು ರಾಜಸ್ತಾನ ರಾಯಲ್ಸ್ ತಂಡದ ಟೀಮ್ ಮ್ಯಾನೇಜ್ಮೆಂಟ್ ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್ ಸರಿಯಾಗಿಯೇ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ಗೆ ಹೊಸ ಹುಡುಗರನ್ನು ಪರಿಚಯಿಸಿದ ರಾಹುಲ್ ದ್ರಾವಿಡ್ ಈಗ ಮತ್ತೊಬ್ಬ ಹುಡುಗನನ್ನು ಪರಿಚಯಿಸಿದ್ದಾರೆ. ದ್ರಾವಿಡ್ ಗುರು ಕುಲದಿಂದ ಐಪಿಎಲ್ ಮಾತ್ರವಲ್ಲ.. ಭಾರತ ತಂಡಕ್ಕೆ, ವಿಶ್ವ ಕ್ರಿಕೆಟ್ಗೆ ಹೊಸ ಕ್ರಿಕೆಟಿಗನ ಉದಯವಾಗಿದೆ.
ಕಡೆಯದಾಗಿ ವೈಭವ್ಗೆ ಐಪಿಎಲ್ನಲ್ಲಿ ಕೋಟಿಗೆ ಬೆಲೆಕಟ್ಟಿರಬಹುದು.. ಆದ್ರೆ ಈತ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾನೆ. ಅದರಲ್ಲೂ ಭಾರತೀಯ ಕ್ರಿಕೆಟಿಗೆ ಕಚ್ಛಾ ಡೈಮಂಡ್ ಸಿಕ್ಕಿದೆ. ಅದನ್ನು ಹೊಳೆಯುವಂತೆ ಮಾಡಬೇಕಿದೆ. ಈತನ ಪ್ರತಿ ಹೆಜ್ಜೆಯನ್ನು ಕಣ್ಣಿಟ್ಟು ನೋಡಿಕೊಳ್ಳಬೇಕಿದೆ. ಯಾಕಂದ್ರೆ ಈತನಿಗೆ ಉಜ್ಜಲ ಭವಿಷ್ಯವಿದೆ. ಆದ್ರೆ ಯಶಸ್ಸಿನ ಅಮಲು ತಲೆಗೆ ಹತ್ತದೇ ಇದ್ರೆ ಮುಂದೊಂದು ದಿನ ಟೀಮ್ ಇಂಡಿಯಾದ ಗರ್ಭಗುಡಿಯಲ್ಲಿ ವೈಭವದ ದಿನಗಳನ್ನು ಎದುರುನೋಡಬಹುದು..
ಸನತ್ ರೈ