ಪಂಚಭೂತಗಳಲ್ಲಿ ಲೀನರಾದ ಸಾಹಿತಿ ಡಾ.ಸಿದ್ದಲಿಂಗಯ್ಯ
ಬೆಂಗಳೂರು : ಕೊರೊನಾ ಸೋಂಕಿನಿಂದ ವಿಧಿವಶರಾಗಿದ್ದ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ದಿವಂಗತ ಡಾ. ಶಿವರುದ್ರಪ್ಪ, ಅನಂತ ಮೂರ್ತಿರವರ ಸ್ಮಾರಕದ ಪಕ್ಕದಲ್ಲಿಯೇ ಕೋವಿಡ್ ನಿಯಮಗಳಾನುಸರವಾಗಿ ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕೊರೊನಾ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಲಿಂಗಯ್ಯ ಅವರು ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದರು. ಇಂದು ಮಣಿಪಾಲ್ ಆಸ್ಪತ್ರೆಯಿಂದ ಡಾ. ಸಿದ್ದಲಿಂಗಯ್ಯ ಪಾರ್ಥಿವ ಶರೀರ ರವಾನೆಯಾಗಿ, ಆರ್.ಆರ್ ನಗರದ ಸ್ವಗೃಹ ಬನವಾಸಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸ್ಯಾಂಡಲ್ವುಡ್ ನಟರಾದ ದುನಿಯಾ ವಿಜಯ್, ಡಾಲಿ ಧನಂಜಯ್, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವು ಗಣ್ಯರು ಅಗಲಿದ ಕವಿಗೆ ಅಂತಿಮ ನಮನ ಸಲ್ಲಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸದಾನಂದಗೌಡ ಅಂತಿಮ ದರ್ಶನಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಬೌದ್ಧ ಸಂಪ್ರದಾಯದಂತೆ ಅವರ ಅಂತಿಮ ವಿಧಿವಿಧಾನ ನೆರವೇರಿಸಲಾಗಿದೆ. ಸರ್ಕಾರದ ಪರವಾಗಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹಾಗೂ ಇತರರು ಭಾಗಿಯಾಗಿದ್ದರು. ಮೂರು ಸುತ್ತಿನ ಕುಶಲ ತೋಪು ಸಿಡಿಸಿ ಪೆÇಲೀಸರು ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಗೌರವ ಸಲ್ಲಿಸಿದರು. ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಕಾಲ ಮೌನಾಚಾರಣೆ ಮಾಡಲಾಯಿತು. ಬಳಿಕ ಗೌರವ ಸೂಚಕವಾಗಿ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ಬಾವುಟವನ್ನು ಕುಟುಂಬದ ಸದಸ್ಯರಿಗೆ ಅಶ್ವತ್ ನಾರಾಯಣ್ ಹಸ್ತಾಂತರ ಮಾಡಿದರು. ಬೌದ್ಧ ಬಿಕ್ಕುಗಳಿಂದ ಅಂತಿಮ ವಿಧಿವಿದಾನ ನೆರವೇರಿಸಲಾಗಿದ್ದು, ಪುತ್ರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.