Gadag | ಮೃತದೇಹ ಸಾಗಿಸಲು ಜನರ ಪರದಾಟ
ಗದಗ : ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮಸ್ಥರು ಸೇತುವೆ ಇಲ್ಲದ ಕಾರಣ ಕೆಸರುಗದ್ದೆಯಂತಾದ ಹಳ್ಳದಲ್ಲಿಯೇ ಮೃತದೇಹವನ್ನು ಹೊತ್ತು ಸಾಗಿ ಅಂತ್ಯಸಂಸ್ಕಾರ ಮುಗಿಸಿದ್ದಾರೆ.
ಹಳ್ಳಿಕೇರಿಯಿಂದ ಕೊಪ್ಪಳ ಜಿಲ್ಲೆಯ ಕವಲೂರಿಗೆ ಹಾಗೂ ಅನೇಕ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆ ಇದಾಗಿದ್ದು, ಪ್ರತಿನಿತ್ಯ ಇದೇ ಹಳ್ಳದ ರಸ್ತೆ ಮೂಲಕ ನೂರಾರು ರೈತರು ತಮ್ಮ ಜೀವದ ಹಂಗು ತೊರೆದು ಜಮೀನಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
![gadag-Hallikeri villagers have no bridge saaksha tv](http://saakshatv.com/wp-content/uploads/2022/09/gadag-1.jpg)
ಪ್ರತಿ ಬಾರಿ ಮಳೆ ಬಂದಾಗ ಹಳ್ಳದಲ್ಲಿ ನೀರು ತುಂಬಿಕೊಂಡು ನಾನಾ ಅವಾಂತರಗಳು ಸೃಷ್ಠಿಯಾಗುತ್ತವೆ.
ಸದ್ಯ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಈ ನಡುವೆ ರೈತ ಕರಿಯಪ್ಪ ಮಾಯಮ್ಮವರ (60) ಜಮೀನಿಗೆ ತೆರಳಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದರು.
ಅವರ ಮೃತದೇಹವನ್ನು ಸಾಗಿಸಲು ಇದೊಂದೇ ಮಾರ್ಗವಿದ್ದು, ಹಳ್ಳದಾಟಲು ರೈತರು ಪರದಾಡಿದ್ದಾರೆ.