ಹಿರಿಯ ಮಹಿಳಾ ಸಾಹಿತಿ ಗೀತಾ ನಾಗಭೂಷಣ್ ನಿಧನ
ಕಲ್ಬುರ್ಗಿ, ಜೂನ್ 29: ಕರೋನಾಗಿಂತ ಭೀಕರವಾಗಿ ಹೃದಯಾಘಾತ ಕೊಲ್ಲುತ್ತಿದೆ. ಹಿರಿಯ ಮಹಿಳಾ ಸಾಹಿತಿ ಗೀತಾ ನಾಗಭೂಷಣ್ (78) ಹೃದಯಾಘಾತದಿಂದ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಕಲ್ಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಜೀವ ತೊರೆದ ಗೀತಾ ನಾಗಭೂಷಣ್ ನಮ್ಮ ನಾಡಿನ ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರು.
ಕಲ್ಬುರ್ಗಿ ಮೂಲದವರಾದ ಗೀತಾ ನಾಗಭೂಷಣ್ 2010ರ ಗದಗ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ನಾಡೋಜ ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳಾ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮೊದಲ ಮಹಿಳಾ ಸಾಹಿತಿ ಅನ್ನುವ ಹೆಗ್ಗಳಿಕೆ ಇವರದ್ದು (ಬದುಕು ಕಾದಂಬರಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಲಭಿಸಿತ್ತು) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊತ್ತ ಮೊದಲ ಮಹಿಳೆಯೂ ಇವರೇ.
ಕಲ್ಬುರ್ಗಿಯ ಅತ್ಯಂತ ಕುಗ್ರಾಮದಲ್ಲಿ 25 ಮಾರ್ಚ್ 1942ರಲ್ಲಿ ಜನಿಸಿದ ಗೀತಾ ನಾಗಭೂಷಣ್ ಆಗಿನ ಎಲ್ಲಾ ಸಾಮಾಜಿಕ ಕಟ್ಟುಪಾಡುಗಳನ್ನು ನಿರ್ಲಕ್ಷಿಸಿ ಶಾಲೆ ಕಲಿತವರು. ಬಿಎ, ಬಿಎಡ್ ಹಾಗೂ ಎಂಎ ಪದವಿ ಕಲಿತ ಅವರು ಕೆಲ ಕಾಲ ಶಿಕ್ಷಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ನಾಡೋಜ ಗೀತಾ ನಾಗಭೂಷಣ್ ತಮ್ಮ ಸುದೀರ್ಘ ಸಾಹಿತ್ಯ ಕೃಷಿಯಲ್ಲಿ ಒಟ್ಟು 27 ಕಾದಂಬರಿಗಳನ್ನು, 50 ಸಣ್ಣ ಕಥೆಗಳು, ಎರಡು ಕವನ ಸಂಕಲನಗಳು, 12 ನಾಟಕಗಳು, ಜೊತೆಗೆ ತಲಾ ಒಂದು ಸಂಪಾದನಾ ಕೃತಿ ಹಾಗೂ ಸಂಶೋಧನಾ ಕೃತಿ ರಚಿಸಿದ್ದಾರೆ. ಇವರ ಹಸಿಮಾಂಸ ಮತ್ತು ಹದ್ದು ಕೃತಿ ಹೆಣ್ಣಿನ ಕೂಗು ಎನ್ನುವ ಕನ್ನಡ ಸಿನಿಮಾ ಆಗಿತ್ತು