ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಯಶಸ್ವಿಯಾಗಿ ಪಾಕಿಸ್ತಾನದಲ್ಲಿನ ಉಗ್ರರ ಅಡಗುತಾಣಗಳ ಮೇಲೆ ನಿಖರ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ದೇಶದಲ್ಲಿ ವಿಜಯೋತ್ಸವದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆ ರಾಜ್ಯದ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದು, ಎಲ್ಲಾ ಮುಜರಾಯಿ ಇಲಾಖೆ ವಶದಲ್ಲಿರುವ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಶಾಂತಿ ಹವನಗಳನ್ನು ನಡೆಸುವಂತೆ ಸೂಚನೆ ನೀಡಿದ್ದಾರೆ.
ಪಹೆಲ್ಗಾಮ್ ದಾಳಿಗೆ ತಕ್ಕ ಪ್ರತಿಫಲ:
ಪಹೆಲ್ಗಾಮ್ ನಲ್ಲಿ ಉಗ್ರರು ನಡೆಸಿದ ಹೀನ ಕೃತ್ಯಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ ಮೂಲಕ ದಾಳಿ ನಡೆಸಿದ್ದು, ಈ ದಾಳಿಗೆ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಭಾರತೀಯ ಸೇನೆಯ ಧೈರ್ಯ ಮತ್ತು ತಂತ್ರಜ್ಞಾನಕ್ಕೆ ದೇಶದಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.
ಪೂಜೆಗಳ ಮೂಲಕ ಸೇನೆಗೆ ಶಕ್ತಿಯ ಆಶೀರ್ವಾದ:
ಭಾರತೀಯ ಸೇನೆ ದೇಶದ ಗಡಿಯನ್ನು ರಕ್ಷಿಸುವಂತ ಜವಾಬ್ದಾರಿ ಹೊತ್ತುಕೊಂಡಿದೆ. ಅವರ ಧೈರ್ಯಕ್ಕೆ ನಾವು ಧನ್ಯರಾಗಬೇಕು. ಅದಕ್ಕಾಗಿ ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಶಕ್ತಿಯ ಪೂಜೆ, ಶಾಂತಿಯ ಹವನ ಮತ್ತು ವಿಶೇಷ ಆರಾಧನೆ ನಡೆಯಬೇಕು, ಎಂದು ಸಚಿವರು ತಿಳಿಸಿದ್ದಾರೆ.
ಈ ನಿರ್ಧಾರಕ್ಕೆ ಮುಜರಾಯಿ ಇಲಾಖೆಯ ಅಧಿಕಾರಿಗಳು, ದೇವಸ್ಥಾನದ ಅರ್ಚಕರು ಹಾಗೂ ಭಕ್ತರು ಸ್ವಾಗತ ವ್ಯಕ್ತಪಡಿಸಿದ್ದಾರೆ. ಈ ಪೂಜೆಗಳ ಮೂಲಕ ನಮ್ಮ ಯೋಧರಿಗೆ ಸಾತ್ವಿಕ ಶಕ್ತಿ ದೊರೆಯಲಿ, ದೇಶದಲ್ಲಿ ಶಾಂತಿ ಹಾಗೂ ಭದ್ರತೆ ಸೇರಲಿ ಎಂಬ ನಂಬಿಕೆಯಿಂದಲೇ ಈ ಕ್ರಮ ಕೈಗೊಂಡಿದ್ದೇವೆ, ಎಂದು ಮುಜರಾಯಿ ಇಲಾಖೆ ಮೂಲಗಳು ತಿಳಿಸಿವೆ.