ನಾವು ಚಿಕ್ಕವರಿದ್ದಾಗ ನಮ್ಮೂರುಗಳಲ್ಲಿ ಚುನಾವಣಾ ಸಂದರ್ಭಗಳಲ್ಲಿ ಬಿಜೆಪಿ ಅನ್ನುವ ಆಗಿನ ಕ್ರಾಂತಿಕಾರಿ ಪಕ್ಷದ ಬೆರಳಣಿಕೆಯ ಕಾರ್ಯಕರ್ತರು ಕೈನಲ್ಲಿ ಕರಪತ್ರಗಳನ್ನು ಹಿಡಿದು ಮನೆ ಮನೆ ಪ್ರಚಾರ ಮಾಡುತ್ತಿದ್ದರಲ್ಲ, ಆಗ ಅವರ ಬಾಯಲ್ಲಿ ಬರುತ್ತಿದ್ದ ಸ್ಲೋಗನ್ ಒಂದೇ “ಯಡಿಯೂರಪ್ಪ ಗುಡುಗಿದ್ರೆ ವಿಧಾನ ಸೌಧ ನಡುಗುವುದು”. ಅಂದಿನಿಂದಲೂ ಇಂದಿನವರೆಗೂ ಈ ರಾಜ್ಯದಲ್ಲಿ ಬಿಜೆಪಿ ಅಸ್ಮಿತೆ ಎಂದರೆ ಅದು ಯಡಿಯೂರಪ್ಪ ಮಾತ್ರ. ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲೆ ಕಮಲ ಅರಳಲು ಕಾರಣ ಆಡ್ವಾಣಿಯ ರಥಯಾತ್ರೆ ಒಂದು ಕಡೆಯಾದ್ರೆ, ಅದನ್ನು ಸಂಘಟನಾ ರೂಪದಲ್ಲಿ ಚಾಲ್ತಿಗೆ ತಂದು ಜನಾಭಿಪ್ರಾಯ ರೂಪಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು ಇದೇ ಯಡಿಯೂರಪ್ಪ. ಇವತ್ತು ಹೈಕಮಾಂಡ್ ಅಂತ ಕರೆಸಿಕೊಂಡಿರುವ ಪ್ರಧಾನಿ ಮೋದಿಯಾಗಲೀ, ಚಾಣಾಕ್ಯ ಅಮಿತ್ ಶಾ ಆಗಲೀ ಆಗ ಯಾರೆಂದೇ ಕನ್ನಡಿಗರಿಗೆ ಗೊತ್ತಿರಲಿಲ್ಲ.
ಯಡಿಯೂರಪ್ಪ ವೀರಶೈವ ಲಿಂಗಾಯಿತರ ಪ್ರಶ್ನಾತೀತ ನಾಯಕ ಅನ್ನೋದು ನಿರ್ವಿವಾದಿತ ಸತ್ಯ. ಬೇಕಿದ್ದರೆ ನೀವೇ ಸ್ವತಃ ಪರೀಕ್ಷೆ ಮಾಡಿ. ದಾವಣಗೆರೆ ದಾಟಿದ ನಂತರ ಇಡೀ ಉತ್ತರ ಕರ್ನಾಟಕ ಯಡಿಯೂರಪ್ಪನವರ ಪ್ರಭಾವಳಿಗೆ ಉಘೇ ಅನ್ನುತ್ತೆ. ಮಧ್ಯ ಕರ್ನಾಟಕದ ಚಿತ್ರದುರ್ಗ ತುಮಕೂರಿನಲ್ಲೂ ಯಡಿಯೂರಪ್ಪನವರ ಪ್ರಭಾವ ಇದೆ. ಶಿವಮೊಗ್ಗವಂತೂ ಬಿಎಸ್ವೈ ತವರು ಜಿಲ್ಲೆಯಾಯಿತು. ಚಿಕ್ಕಮಗಳೂರು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಯಡಿಯೂರಪ್ಪ ಬರುತ್ತಾರೆಂದರೆ ಮಧ್ಯರಾತ್ರಿಯಲ್ಲೂ ಸಾವಿರ ಮಂದಿ ಕಾಯುತ್ತಾರೆ. ಕರಾವಳಿ ಮಂಗಳೂರಿನಲ್ಲಿಯೂ, ಕೃಷ್ಣನ ನಾಡು ಉಡುಪಿಯಲ್ಲೂ ಅವರ ಮಾತನ್ನು ಶಿರಸಾವಹಿಸಿ ಪಾಲಿಸುವ ದೊಡ್ಡ ಕಾರ್ಯಕರ್ತ ಬಳಗವಿದೆ. ಇದಕ್ಕೆ ಕಾರಣ ಇಡೀ ಕರ್ನಾಟಕವನ್ನು ಸುತ್ತಿ ಅವರು ಪಕ್ಷ ಸಂಘಟಿಸಿದ್ದು. ಕರ್ನಾಟಕದ ಎಲ್ಲಾ ಹಳ್ಳಿಗಳನ್ನು ಸುತ್ತಿರುವ ಕರ್ನಾಟಕದ ಪ್ರಮುಖ ನಾಯಕರೆಂದರೆ ಬಂಗಾರಪ್ಪ, ದೇವೇಗೌಡರು ಮತ್ತು ಯಡಿಯೂರಪ್ಪ.
ಎಲ್ಲೋ ಬೂಕನಕೆರೆಯಲ್ಲಿ ಬಾಲ್ಯದಲ್ಲಿ ಲಿಂಬೆಹಣ್ಣು ಮಾರಾಟ ಮಾಡುತ್ತಿದ್ದ ಯಡಿಯೂರಪ್ಪ ಶಿವಮೊಗ್ಗ ಸೇರುವುದು ನಂತರ ಶಿಕಾರಿಪುರವನ್ನು ತಮ್ಮ ರಾಜಕೀಯ ಕರ್ಮಭೂಮಿಯನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಇವೆಲ್ಲವೂ ಜನರಿಗೆ ತಿಳಿದಿರುವಂತದ್ದೆ. ಆದರೆ ಯಡಿಯೂರಪ್ಪನವರ ಹೋರಾಟದ ರಾಜಕೀಯ ಬೆಳವಣಿಗೆ ಪ್ರಾಯಶಃ ಬಹಳಷ್ಟು ಜನರಿಗೆ ಗೊತ್ತಿಲ್ಲ. ಬಹುಶಃ ರೈತರ ಹಕ್ಕುಗಳಿಗಾಗಿ ಗಟ್ಟಿ ಧ್ವನಿ ಎತ್ತಿದ ಕೆಲವೇ ಜನನಾಯಕರಲ್ಲಿ ಯಡಿಯೂರಪ್ಪ ಅಗ್ರಗಣ್ಯರು. ಗ್ರಾಮಿಣ ರೈತರ ಪರವಾಗಿ ಎರಡು ಬಾರಿ ಪಾದಯಾತ್ರೆ ಮಾಡಿದ ಯಡಿಯೂರಪ್ಪನವರ ಸಿಡಿಸಿಡಿ ಸಿಟ್ಟು ಆಡಳಿತ ಪಕ್ಷಕ್ಕೆ ಅನೇಕ ಬಾರಿ ಬೆವರಿಳಿಸಿದೆ. ಸದನದಲ್ಲಿ ಯಡಿಯೂರಪ್ಪನವರ ರೋಶಾವೇಶದ ಭಾಷಣ, ಇದು ತತಕ್ಷಣ ಜಾರಿಯಾಗಲೇಬೇಕು ಎಂದು ಮೇಜು ಕಟ್ಟಿ ಅಬ್ಬರಿಸುತ್ತಿದ್ದ ಪರಿ ಇವುಗಳೇ ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪನವರನ್ನು ಮಾಸ್ ಲೀಡರ್ ರನ್ನಾಗಿಸಿತು.
ಯಡಿಯೂರಪ್ಪನವರನ್ನು ಚೆನ್ನಾಗಿ ಬಲ್ಲವರು ಈ ಮಾತನ್ನು ಖಂಡಿತಾ ಒಪ್ಪುತ್ತಾರೆ, ಅವರು ಕೋಮುವಾದಿಯಲ್ಲ. ಎಲ್ಲಾ ಸಮುದಾಯದವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬಲ್ಲ ಬಹುತ್ವವಾದಿ ನಾಯಕ. ಬಿಎಸ್ವೈ ಅವರು ಆರ್ ಎಸ್ ಎಸ್ ಹಿನ್ನೆಲೆ ಹೊಂದಿದ್ದರೂ ಹಿಂದುತ್ವದ ಉಗ್ರ ಪ್ರತಿಪಾದಕರಲ್ಲ. ರೈತರ ಕಲ್ಯಾಣಕ್ಕಾಗಿ ಮೊತ್ತ ಮೊದಲ ಕೃಷಿ ಬಜೆಟ್ ಮಂಡಿಸಿದವರು ಅವರು.
ಯಡಿಯೂರಪ್ಪ ಸ್ವತಂತ್ರ ಜೀವಿ. ತಮಗನ್ನಿಸಿದ್ದನ್ನು ನೇರವಾಗಿ ನಿರ್ಭೀಡೆಯಿಂದ ಹೇಳಬಲ್ಲ ನಿಷ್ಟುರವಾದಿ ಅವರು. ವಾಜಪೇಯಿ ಬದುಕಿದ್ದಾಗಲೂ ಆಡ್ವಾಣಿ ಅಧಿಪತ್ಯ ಇದ್ದಾಗಲೂ ಯಡಿಯೂರಪ್ಪನವರನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ. ಯಾಕಂದರೆ ಅವರಿಗೆ ಗೊತ್ತಿತ್ತು ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿಯೂ ಇಲ್ಲ.
2013ರ ವಿಧಾನಸಭಾ ಚುನಾವಣೆ ಬಿಜೆಪಿ ಪಾಲಿಗೆ ಯಡಿಯೂರಪ್ಪ ಯಾಕೆ ಅನಿವಾರ್ಯ ಎನ್ನುವುದನ್ನು ಸಾಬೀತು ಮಾಡಿತ್ತು. ತವರು ಜಿಲ್ಲೆ ಯ ಕೆಎಸ್ ಈಶ್ವರಪ್ಪ ಸಹಿತ ಘಟಾನುಘಟಿಗಳು ಸೋಲಿನ ಕಹಿ ಉಂಡಿದ್ದಕ್ಕೆ ಕಾರಣವೇ ಯಡಿಯೂರಪ್ಪನವರ ಮುನಿಸು. ಉದ್ಯಮಿ ರುದ್ರೇಗೌಡರು ಯಾರೆಂದೇ ಗೊತ್ತಿಲ್ಕದಿದ್ದರೂ ಶಿವಮೊಗ್ಗದ ಜನ ಯಡಿಯೂರಪ್ಪನವರನ್ನು ನಂಬಿ ಮತ ಹಾಕಿದ್ದರು. ಯಾರಿಗಾದರೂ ಆ ಸಂದರ್ಭದಲ್ಲಿ ಯಡಿಯೂರಪ್ಪನವರ ಭಾಷಣ ನೆನಪಿದ್ದರೆ ಅವರ ಈ ಮಾತೂ ನೆನಪಿರುತ್ತದೆ. ಈ ಚುನಾವಣೆಯಲ್ಲಿ ಈಶ್ವರಪ್ಪ ಮೂರನೆಯ ಸ್ಥಾನಕ್ಕೆ ಇಳಿಯದಿದ್ರೆ ನಾನು ರಾಜಕೀಯ ಸನ್ಯಾಸತ್ವ ತಗೊಳ್ತೀನಿ ಅಂದಿದ್ರು ಯಡಿಯೂರಪ್ಪ. ಕಾಂಗ್ರೆಸ್ ನ ಪ್ರಸನ್ನ ಕುಮಾರ್ ಅನಿರೀಕ್ಷಿತವಾಗಿ ಗೆದ್ದರೆ, ಈಶ್ವರಪ್ಪ ಮೂರನೆಯ ಸ್ಥಾನಕ್ಕೆ ಕುಸಿದಿದ್ದರು. ರುದ್ರೇಗೌಡರನ್ನು ಕೆಜೆಪಿ ಮೂಲಕ ಇಳಿಸಿ ಮತಗಳಿಕೆಯಲ್ಲಿ ಎರಡನೆಯ ಸ್ಥಾನಕ್ಕೆ ತಂದಿದ್ದು ಯಡಿಯೂರಪ್ಪನವರ ಪ್ರಭಾವವೇ! ಆ ಚುನಾವಣೆಯಲ್ಲಿ ಎಲ್ಲೆಲ್ಲಿ ಬಿಜೆಪಿ ಹೀನಾಯವಾಗಿ ಸೋತಿತ್ತೋ ಅಲ್ಲಿ ಬಹಳಷ್ಟು ಕಡೆ ಕೆಜೆಪಿ ಎರಡನೇ ಸ್ಥಾನ ಮತ್ತು ಮೂರನೆ ಸ್ಥಾನ ಪಡೆದಿತ್ತು. ಅಲ್ಲಿಗೆ ಬಿಜೆಪಿ ಮತಬ್ಯಾಂಕ್ ಅನ್ನು ಸ್ಪಷ್ಟವಾಗಿ ಛಿದ್ರ ಮಾಡಿದ್ದರು ಯಡಿಯೂರಪ್ಪ. ಕರ್ನಾಟಕದಲ್ಲಿ ಪಕ್ಷವನ್ನು ಡ್ಯಾಮೇಜ್ ಮಾಡಬಲ್ಲ ತಾಕತ್ತಿದ್ದ ಇಬ್ಬರು ನಾಯಕರಲ್ಲಿ ಮೊದಲನೆಯವರು ಬಂಗಾರಪ್ಪ ಎರಡನೆಯವರೇ ಯಡಿಯೂರಪ್ಪ. 2014ರ ಲೋಕಸಭಾ ಚುನಾವಣೆ, 2017ರ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಯಡಿಯೂರಪ್ಪನವರ ಸಂಘಟನಾ ಶಕ್ತಿ ಇಲ್ಲದಿದ್ದರೆ ಬಿಜೆಪಿ ಇಲ್ಲಿ ಗಟ್ಟಿಯಾಗಿ ತಳವೂರಲು ಸಾಧ್ಯವಿತ್ತಾ?
ಯಡಿಯೂರಪ್ಪ ತಮ್ಮ ಬೆಂಬಲಿಗರನ್ನು, ನಿಷ್ಟರನ್ನು ಹಾಗೂ ಆತ್ಮೀಯರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಇದಕ್ಕೆ ಉದಾಹರಣೆ ಸದ್ಯ ಸಾಗರದ ಶಾಸಕ ಹರತಾಳು ಹಾಲಪ್ಪ. ಹಾಗೆಯೇ ತಮ್ಮ ವಿರೋಧಿಗಳನ್ನು ಯಾವತ್ತಿಗೂ ಕ್ಷಮಿಸಲ್ಲ ಅನ್ನುವುದಕ್ಕೆ ನಿದರ್ಶನ ಅದೇ ಸಾಗರ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ. ಇವತ್ತೂ ಯಡಿಯೂರಪ್ಪ ಮನಸು ಮಾಡಿದರೆ ಯಾವುದೇ ಪ್ರಭಾವಿ ಜನನಾಯಕರನ್ನು ಅವರದ್ದೇ ಕ್ಷೇತ್ರದಲ್ಲಿ ಸೋಲಿಸಬಲ್ಲರು. ಆದರೆ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುವವರಲ್ಲ. ಒಂದು ಕಾಲದಲ್ಲಿ ಪತ್ರಕರ್ತರಾಗಿದ್ದವರೊಬ್ಬರು ಅವರನ್ನು ಹಿಗ್ಗಾಮುಗ್ಗ ಖಂಡಿಸಿ ಉದ್ದುದ್ದ ಅಂಕಣ ಬರೆದವರೂ ಕೂಡಾ ಟಿಕೆಟ್ ಸಿಕ್ಕ ಕೂಡಲೇ ಓಡಿದ್ದೇ ಯಡಿಯೂರಪ್ಪನವರ ಮನೆಗೆ. ಯಾವ ಕಹಿಯನ್ನೂ ಮನಸಿನಲ್ಲಿಟ್ಟುಕೊಳ್ಳದ ಅವರು ಆ ಪತ್ರಕರ್ತರನ್ನೂ ಗೆಲ್ಲಿಸಿ ದೆಹಲಿ ಪಾರ್ಲಿಮೆಂಟ್ ಕಾಣುವಂತೆ ಮಾಡಿದ್ರು. ಅವರಿಗೆ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಉಳಿದೆಲ್ಲಾ ನಾಯಕರ ಬಗ್ಗೆ ಅವರಿಗೆ ಗೌರವವೂ ಇದೆ. ಕಾಂಗ್ರೆಸ್ ನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಹೆಚ್ ಕೆ ಪಾಟಿಲ್, ದೇಶಪಾಂಡೆ ಮುಂತಾವರು, ಜನತಾದಳದ ವೈಎಸ್ವಿ ದತ್ತ, ಬಸವರಾಜ್ ಹೊರಟ್ಟಿ ಮುಂತಾದ ನಾಯಕರೊಟ್ಟಿಗೆ ನಿಕಟವಾದ ರಾಜಕೀಯೇತರ ಸ್ನೇಹವಿದೆ.
ಒಂದು ಕಾಲದಲ್ಲಿ ಯಡಿಯೂರಪ್ಪ, ಈಶ್ವರಪ್ಪ ಮತ್ತು ಅನಂತ್ ಕುಮಾರ್ ರನ್ನು ದೆಹಲಿಯ ಬಿಜೆಪಿ ನಾಯಕರು ಸೆಟ್ ದೋಸೆ ಎನ್ನುತ್ತಿದ್ದರು. ಅಷ್ಟರಮಟ್ಟಿಗೆ ಇವರು ಮೂವರು ಒಟ್ಟಿಗಿರುತ್ತಿದ್ದರು. ಪಕ್ಷದೊಳಗಿದ್ದವರೇ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡುವೆ ಹುಳಿ ಹಿಂಡಿದರು. ಯಡಿಯೂರಪ್ಪ ಯಾರ ಮೇಲೆಯೂ ಅವಲಂಭಿತರಾಗಿ ಬೆಳೆದವರಲ್ಲ. ಮೊದಲಿನಿಂದಲೂ ಅವರದ್ದು ಒಂಟಿನಡಿಗೆ. ಈಗ ಅಧಿಕಾರದಲ್ಲಿದ್ದರೂ ಅವರು ಒಂಟಿಯೇ. ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳರಂತಹ ಒಂದಷ್ಟು ನಾಯಕರನ್ನು ಹೊರತುಪಡಿಸಿದ್ರೆ ಸದ್ಯ ಯಡಿಯೂರಪ್ಪನವರಿಗೆ ಹೆಚ್ಚಿನ ನಂಬಿಕಸ್ತರು ಸರ್ಕಾರದಲ್ಲಿಲ್ಲ. ಬಿಜೆಪಿ ಒಳಗೆ ಎಲ್ಲವೂ ಸರಿ ಇಲ್ಲ. ಹೈಕಮಾಂಡ್ ಪದೇ ಪದೇ ಯಡಿಯೂರಪ್ಪನವರ ಸಹನೆ ಪರೀಕ್ಷಿಸುತ್ತಲೇ ಇದೆ. ಕಳೆದ ವರ್ಷ ನೆರೆ ಬಂದಾಗ ಸಚಿವ ಸಂಪುಟ ವಿಸ್ತರಣೆ ಮಾಡಲು ಅವಕಾಶ ಕೊಡದೇ ಸತಾಯಿಸಿತು. ನೆರೆ ಪರಿಹಾರ ನೀಡಲು ಮೀನಮೇಶ ಎಣಿಸಿತು. ಈಗ ಪಕ್ಷದೊಳಗೆ ಸರ್ಕಾರದೊಳಗೆ ಯಡಿಯೂರಪ್ಪನವರನ್ನು ನಿಯಂತ್ರಿಸಬಲ್ಲ ಹೈಕಮಾಂಡ್ ನಿರ್ದೇಶಿತ ರೋಬೋಟ್ ಗಳಿವೆ. ಯಡಿಯೂರಪ್ಪ ಕೇಂದ್ರ ಬಿಜೆಪಿ ಪಾಲಿಗೆ ಮಲತಾಯಿ ಮಗನಂತಾಗಿದ್ದಾರಾ? ಗೊತ್ತಿಲ್ಲ. ಆದರೆ ಯಡಿಯೂರಪ್ಪ ಸುಮ್ಮನೆ ಇರುವ ಜಾಯಮಾನದವರಲ್ಲ, ಅದೆಷ್ಟೇ ಅಡೆತಡೆಗಳಿದ್ದರೂ ಎದುರಿಸಬಲ್ಲ ಎದೆಗಾರಿಕೆ ಅವರಲ್ಲಿದೆ.
ಫೇಸ್ ಬುಕ್ ನಲ್ಲಿ ಯಾರೋ ಒಂದಷ್ಟು ಜನ ನಿನ್ನೆ ಯಡಿಯೂರಪ್ಪ ಮುಸಲ್ಮಾನರ ಬಗ್ಗೆ ಕೀಳಾಗಿ ಮಾತಾಡಬೇಡಿ ಅಂದಿದ್ದನ್ನು ಖಂಡಿಸಿ ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಿದ್ದನ್ನು ಗಮನಿಸಿದೆ. ತಾವು ಹಿಂದೂ ಧರ್ಮ ಉಳಿಸಲು ಅವತರಿಸಿಬಂದಿರುವ ದಿವ್ಯಪುರುಷರು ಎನ್ನುವ ಭ್ರಮೆಯಲ್ಲಿರುವ ಇವರಲ್ಲಿ ಬಹಳಷ್ಟು ಜನರಿಗೆ ಈಗಿನ್ನೂ 25 ದಾಟಿರಬಹುದಷ್ಟೆ. ತಮ್ಮ ಜೀವನವ ಮುಕ್ಕಾಲು ಪಾಲು ರಾಜಕಾರಣ ಮಾಡಿಕೊಂಡು ಬಂದ 75 ದಾಟಿದ ಯಡಿಯೂರಪ್ಪನವರನ್ನು ಏಕವಚನದಲ್ಲಿ ಮಾತಾಡಿಸುವ ದೊಡ್ಡಸ್ತಿಕೆ ಈ ಮುಂಡೇವಕ್ಕೆ. ಇವಲ್ಲಿ ಬಹುಪಾಲು ಮಂದಿ ಐಟಿ ಬಿಟಿಯಲ್ಲಿ ಕೆಲಸ ಮಾಡುವ, ಓಟ್ ಹಾಕದೆ ಟೂರ್ ಮಾಡುವ ಬೇಜವಬ್ದಾರಿಯ ಸತ್ (ತ್ತ) ಪ್ರಜೆಗಳು. ಇನ್ನೂ ಕೆಲವರಿದ್ದಾರೆ, ಈ ದೇಶದಲ್ಲೇ ಇಲ್ಲ. ಅವರು ಮಾತಾಡುವ ದಾಟಿ ನೋಡಿದ್ರೆ ಪಾಪ ಯಡಿಯೂರಪ್ಪ ಇವರನ್ನು ಕೇಳಿಯೇ ಆಡಳಿತ ನಡೆಸಬೇಕೇನೋ. ಕೆಲವು ಪೋಸ್ಟ್ ಗಳನ್ನು ನೋಡಿ ಇಷ್ಟು ಹೇಳಬೇಕೆನಿಸಿತು. ಇನ್ನುಳಿದಿದ್ದು ಶಿವನಿಚ್ಛೆ.
– ವಿಭಾ
***








