ಭರತ ಖಂಡದಲ್ಲಿ ದಾಯಾದಿಗಳ ಕದನ ಇನ್ನು ನಿನ್ನೆಯದಲ್ಲ. ಮಹಾಭಾರತದ ಕುರುಕ್ಷೇತ್ರದಿಂದ ಇಂದಿನ ಗಡಿ ವಿವಾದದ ತನಕದ ಇತಿಹಾಸವನ್ನು ನೋಡಿದಾಗ ದಾಯಾದಿ ಕಲಹ ಬಿಡಿಸಲಾಗದ ಒಗ್ಗಟ್ಟಿನಂತಿದೆ. ಅದು ರಾಜ್ಯವಂಶಸ್ಥರು ಆಗಿರಬಹುದು.. ಆಧುನಿಕ ಪ್ರಜಾಪ್ರಭುತ್ವದ ಜನನಾಯಕರು ಆಗಿರಬಹುದು..ಅಥವಾ ಜನಸಾಮಾನ್ಯರೇ ಆಗಿರಬಹುದು..ಒಂದಲ್ಲ ಒಂದು ರೀತಿಯಲ್ಲಿ ದಾಯಾದಿಗಳ ನಡುವಿನ ಕಿತ್ತಾಟ ಇದ್ದದ್ದೇ. ಅಂದ ಮೇಲೆ ಭಾರತ – ಪಾಕಿಸ್ತಾನ ನಡುವಿನ ಸಂಘರ್ಷ ಎಂದಾದ್ರೂ ಕೊನೆಯಾಗುವುದುಂಟೆ..!
ಇಷ್ಟು ದಿನ ಭಾರತ – ಪಾಕಿಸ್ತಾನ ನಡುವೆ ಕಾಶ್ಮೀರದ ಮಣ್ಣಿಗಾಗಿ ನಾಲ್ಕೈದು ಯುದ್ಧವೇ ನಡೆದಿದೆ. ಪ್ರತಿ ಬಾರಿ ಭಾರತದ ವಿರುದ್ಧ ಕಾಲುಕೆರೆದು ಯುದ್ಧ ಮಾಡಿ ಸೋತ್ರೂ ಪಾಕಿಸ್ತಾನಕ್ಕೆ ಬುದ್ದಿ ಬಂದಂಗಿಲ್ಲ. ಭಾರತದ ಶಾಂತಿಮಂತ್ರ ಅನ್ನೋದು ಪಾಕಿಸ್ಥಾನಕ್ಕೆ ನೀರಿನಲ್ಲಿ ಹೋಮ ಮಾಡಿದಂಗೆ. ಆದ್ರೆ ಕಳೆದ 19 ವರ್ಷಗಳಿಂದ ಪಾಕ್ನ ಕಪಟ ನಾಟಕವನ್ನು ನಂಬುವ ಸ್ಥಿತಿಯಲ್ಲಿಲ್ಲ. ಅದರಲ್ಲೂ ಕಳೆದ 12 ವರ್ಷಗಳಿಂದ ಪಾಕ್ಗೆ ಭಾರತ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಮೆರಿಕಾ, ಚೀನಾದಂತಹ ಬಲಿಷ್ಠ ರಾಷ್ಟ್ರಗಳ ಸ್ನೇಹವನ್ನು ಪಡೆದುಕೊಂಡ್ರೂ ಭಾರತವನ್ನು ಬಗ್ಗುಬಡಿಯಲು ಸಾಧ್ಯವಾಗುತ್ತಿಲ್ಲ. ಇದೇನಿದ್ರೂ ಉಭಯ ದೇಶಗಳ ನಡುವಿನ ರಾಜಕೀಯ ಮತ್ತು ಆಂತರಿಕ ವಿಷ್ಯ.
ಆದ್ರೆ ಇದೀಗ ಭಾರತ – ಪಾಕಿಸ್ತಾನದ ಆಂತರಿಕ ಜಗಳ ಕ್ರೀಡೆಯ ಮೇಲೆ ಗಾಢವಾದ ಪರಿಣಾಮ ಬೀರುತ್ತಿದೆ. ಈ ಹಿಂದೆ ಪ್ರಮುಖವಾಗಿ ಕ್ರಿಕೆಟ್ – ಹಾಕಿ ಮ್ಯಾಚ್ಗಳನ್ನು ಆಡುವ ಮೂಲಕ ಎರಡು ದೇಶಗಳ ನಡುವೆ ಸೌರ್ಹಾದತೆ ಬೆಳೆಸಬಹುದು ಎಂಬ ಲೆಕ್ಕಚಾರಗಳು ಕೂಡ ಸುಳ್ಳು ಎಂದು ಸಾಬೀತಾಗಿದೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಪಾಕ್ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆಟವನ್ನು ಮುಂದಿಟ್ಟುಕೊಂಡು ಭಾರತದ ವಿರುದ್ದ ಚದುರಂಗವನ್ನಾಡುತ್ತಿದೆ. ವಿಶ್ವ ಮಟ್ಟದಲ್ಲಿ ಭಾರತವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಬೇಕು ಎಂಬ ಪಾಕ್ನ ಉದ್ದೇಶಕ್ಕೆ ಭಾರತ ಚೆಕ್ಮೆಟ್ ನೀಡುತ್ತಲೇ ಬಂದಿದೆ.
ಆದ್ರೆ ಒಂದು ವಿಚಾರ, ವಿಶ್ವ ಕ್ರಿಕೆಟ್ನಲ್ಲಿ ಭಾರತದ ವಿರುದ್ದ ಪಾಕ್ ಆಡಿದ್ರೂ ಆಡದೇ ಇದ್ರೂ ಭಾರತಕ್ಕೆ ಅಥವಾ ಬಿಸಿಸಿಐಗೆ ಏನು ತೊಂದರೆ ಇಲ್ಲ. ಯಾಕಂದ್ರೆ ಬಿಸಿಸಿಐ/ಭಾರತ, ಪಾಕ್ ಕ್ರಿಕೆಟ್ ತಂಡವನ್ನು ನಂಬಿಕೊಂಡು ಕ್ರಿಕೆಟ್ ಆಡುತ್ತಿಲ್ಲ. ಹಾಗೇ ನೋಡಿದ್ರೆ ಇತ್ತೀಚಿನ ವರ್ಷಗಳಲ್ಲಿ ಇಂಡಿಯಾ – ಪಾಕ್ ಪಂದ್ಯ ಹಾಗೇ ಸುಮ್ಮನೆ ಒಂದು ಹೈಪ್ ಅಷ್ಟೇ. ಅದರಲ್ಲೂ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಗಳಲ್ಲಿ ಉಭಯ ದೇಶಗಳ ನಡುವಿನ ಪಂದ್ಯ ರೋಚಕವಾಗಿ ಅಂತ್ಯಕಂಡಿದ್ದು ತುಂಬಾನೇ ವಿರಳ. ಆದ್ರೆ ಬದ್ದ ವೈರಿಗಳು, ರಾಜತಾಂತ್ರಿಕ ಕಾರಣಗಳಿಂದ ಇಂಡೋ – ಪಾಕ್ ನಡುವಿನ ಪಂದ್ಯವನ್ನು ಯುದ್ಧಕ್ಕೆ ಹೋಲಿಸಿಕೊಂಡು ಪ್ರಚಾರ ಮಾಡಿ ದುಡ್ಡು ಮಾಡೋದು ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಅಂದ ಹಾಗೇ ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಸರ್ಕಾರದ ಆಪರೇಷನ್ ಸಿಂಧೂರದ ಆರ್ಭಟಕ್ಕೆ ಪಾಕಿಸ್ಥಾನ ದೊಡ್ಡಣ್ಣನ ಕಾಲಿಗೆ ಬಿದ್ದಿದ್ದು ಗೊತ್ತೇ ಇದೆ. ಆದ್ರೂ ನಮಗೆ ಏನು ಆಗಿಲ್ಲ, ತಪ್ಪೇ ಮಾಡಿಲ್ಲ ಅಂತ ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ದೂರು ನೀಡಿದ್ರೂ ಮುಖಭಂಗ ಅನುಭವಿಸಿದ್ದೂ ಗೊತ್ತಿರುವ ವಿಚಾರವೇ. ಅದರಲ್ಲೂ ಆಪರೇಷನ್ ಸಿಂಧೂರ ಬಳಿಕ ಉಭಯ ದೇಶಗಳ ನಡುವಿನ ಕ್ರೀಡೆಯ ಮೇಲೆ ಗಾಢವಾದ ಪರಿಣಾಮ ಬೀರಿದೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಪಾಕ್ನಲ್ಲಿ ಆಡಲ್ಲ ಎಂದಾಗ ಪಿಸಿಬಿ, ಐಸಿಸಿ ಮೇಲೆ ಒತ್ತಡ ಹೇರಿತ್ತು. ಆದ್ರೆ ಪಿಸಿಬಿಯ ಮನವಿಯನ್ನು ಐಸಿಸಿ ಕ್ಯಾರೇ ಮಾಡಲಿಲ್ಲ. ಬದಲಾಗಿ ತಟಸ್ಥ ತಾಣದಲ್ಲಿ ಆಡಬೇಕಾಯ್ತು. ಹಾಗೇ ನೋಡಿದ್ರೆ 2007ರ ಮುಂಬೈ ಬ್ಲ್ಯಾಸ್ಟ್ ನಂತ್ರ ಉಭಯ ದೇಶಗಳ ನಡುವಿನ ಪಂದ್ಯ ತಟಸ್ಥ ತಾಣದಲ್ಲೇ ನಡೆದಿವೆ. ಹಾಗೇ ಕಳೆದ ವರ್ಷ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿದಾಗಲೂ ಪಿಸಿಬಿ ದೊಡ್ಡ ವಿಷ್ಯವನ್ನಾಗಿಸಿಕೊಂಡಿತ್ತು. ಆದ್ರೆ ಪಾಕ್ ಕ್ರಿಕೆಟ್ ಮಂಡಳಿ ಎಷ್ಟೇ ಬೊಬ್ಬೆ ಹೊಡೆದ್ರೂ ಯಾರು ಕೂಡ ಸಮಾಧಾನ ಮಾಡಲಿಲ್ಲ.
ಇತ್ತೀಚೆಗೆ ಐಪಿಎಲ್ನಿಂದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ಅವರನ್ನು ಕೈಬಿಟ್ಟ ನಂತ್ರ ಮತ್ತೆ ಪಾಕ್ ಮೊಂಡು ವಾದಕ್ಕೆ ಇಳಿದಿತ್ತು. ಅಲ್ಲದೆ ಪಾಕ್ ಮಾತನ್ನು ನಂಬಿಕೊಂಡ ಬಾಂಗ್ಲಾದೇಶ, ಭಾರತದಲ್ಲಿ ತನ್ನ ಆಟಗಾರರಿಗೆ ಆಡಲು ಸುರಕ್ಷತೆ ಇಲ್ಲ. ಬೇರೆ ಕಡೆ ಪಂದ್ಯವನ್ನು ಆಡಿಸಬೇಕು ಎಂದು ಐಸಿಸಿಗೂ ಮನವಿ ಮಾಡಿತ್ತು.
ಹಾಗೇ ನೋಡಿದ್ರೆ ಪಾಕ್ ಆಟಗಾರರಿಗೆ ಭಾರತದಲ್ಲಿ ಸುರಕ್ಷತೆ ಇಲ್ಲ ಅಂತಿಲ್ಲ. ಆದ್ರೆ ಪಾಕ್ ನೆಲದಲ್ಲಿ ಭಾರತ ಆಡಿಲ್ಲ ಎಂಬ ನೆಪವನ್ನಿಟ್ಟುಕೊಂಡು ಪಾಕ್ ಕ್ರಿಕೆಟ್ ಮಂಡಳಿ ಭಾರತದ ವಿರುದ್ದ ಸೇಡು ತೀರಿಸಿಕೊಳ್ಳಲು ಮುಂದಾಯ್ತು. ಆದ್ರೆ ಐಸಿಸಿ ದೊಡ್ಡ ಮನಸ್ಸು ಮಾಡಿ ತಟಸ್ಥ ತಾಣ ಶ್ರೀಲಂಕಾದಲ್ಲಿ ಪಂದ್ಯವನ್ನು ಆಡಿಸಲು ನಿರ್ಧಾರ ಮಾಡಿತ್ತು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಬಾಂಗ್ಲಾದೇಶ ಕೂಡ ಐಸಿಸಿ ಮೇಲೆ ಒತ್ತಡ ಹೇರಿತ್ತು. ಆದ್ರೆ ಐಸಿಸಿ ಬಾಂಗ್ಲಾದೇಶಕ್ಕೆ ಕ್ಯಾರೇ ಮಾಡಲಿಲ್ಲ. ಹೀಗಾಗಿ ಈ ಬಾರಿಯ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ಬದಲು ಸ್ಕಾಟ್ಲೆಂಡ್ ತಂಡ ಅವಕಾಶವನ್ನು ಪಡೆದುಕೊಂಡಿದೆ.
ಇನ್ನೊಂದು ವಿಚಾರ, ಭಾರತ – ಪಾಕ್ ನಡುವಿನ ಪಂದ್ಯ ಅಂದ್ರೆ ಅದು ಕೇವಲ ಒಂದು ಪಂದ್ಯವಲ್ಲ. ಅಲ್ಲಿ ಪ್ರೀತಿ, ಸೌಹಾರ್ದತೆ ಯಾವುದು ಇರಲ್ಲ. ಅಲ್ಲಿರುವುದು ಬರೀ ಪ್ರತಿಷ್ಠೆಯ ಜೊತೆಗೆ ದುಡ್ಡು.. ದುಡ್ಡು.. ದುಡ್ಡು ಅಷ್ಟೇ..! ಒಂದು ಪಂದ್ಯದಿಂದ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆ. ಈ ದುಡ್ಡು ಬಿಸಿಸಿಐನ ಅಕೌಂಟ್ಗೆ ಹೆಚ್ಚುವರಿ ಸೇರ್ಪಡೆ ಅಷ್ಟೇ. ಹಾಗೇ ಐಸಿಸಿ, ನೇರ ಪ್ರಸಾರದ ಹಕ್ಕು ಪಡೆದುಕೊಂಡಿರುವ ಜಿಯೋ ಹಾಟ್ಸ್ಟಾರ್ ಕಂಪೆನಿಗೂ ನಷ್ಟವಾಗುವುದನ್ನು ತಪ್ಪಿಸುತ್ತದೆ. ಆದ್ರೆ ಪಾಕ್ಗೆ ಹಾಗಲ್ಲ. ಭಾರತದ ವಿರುದ್ದ ಪಂದ್ಯವನ್ನಾಡಿದ್ರೆ ಪಿಸಿಬಿ ಬೊಕ್ಕಸಕ್ಕೆ ಕೋಟಿ ಕೋಟಿ ಲೆಕ್ಕದಲ್ಲಿ ದುಡ್ಡು ಬರುತ್ತದೆ. ಇದು ಪಾಕ್ ಕ್ರಿಕೆಟ್ಗೆ ವರದಾನವಾಗುತ್ತದೆ. ಹಾಗೇ ಪಾಕ್ ಸರ್ಕಾರ ಕೂಡ ಇದೇ ದುಡ್ಡಿನಿಂದ ರಕ್ಕಸರಿಗೆ ನೆರವು ನೀಡಲು ಸಾಧ್ಯವಾಗುತ್ತದೆ..!. ಇದೇ ಕಾರಣಕ್ಕಾಗಿ ಭಾರತ ಸರ್ಕಾರ ಕೂಡ ಪಾಕ್ ಆಡಲಿ, ಬಿಡಲಿ ಏನೂ ಸಮಸ್ಯೆ ಇಲ್ಲ ಎಂಬಂತಿದೆ. ಅಷ್ಟೇ ಅಲ್ಲ, ಸದ್ಯ ಐಸಿಸಿ ಬಿಸಿಸಿಐನ ಕೈಯಲ್ಲಿರುವುದರಿಂದ ಭಾರತ ಸರ್ಕಾರ ಕೂಡ ಇಂಡೋ ಪಾಕ್ ಮ್ಯಾಚ್ ನಡೆಯದೇ ಇದ್ರೆ ಒಳ್ಳೆಯದ್ದು ಎಂದು ಮನದೊಳಗೆ ಹುಸಿ ನಗೆ ಬೀರುತ್ತಿದೆ.
ಇದೀಗ ಫೆಬ್ರವರಿ 15ರಂದು ಕೊಲೊಂಬೊದಲ್ಲಿ ಇಂಡೋ ಪಾಕ್ ನಡುವೆ ಟಿ-20 ಪಂದ್ಯ ನಡೆಯಬೇಕಿತ್ತು. ಆದ್ರೆ ಈಗ ಪಾಕ್ ಈ ಪಂದ್ಯವನ್ನು ಆಡಲ್ಲ ಎಂದು ಹೇಳುತ್ತಿದೆ. ಒಂದು ವೇಳೆ ಪಂದ್ಯವನ್ನು ಆಡದಿದ್ರೆ ಭಾರತಕ್ಕೆ ಎರಡು ಪಾಯಿಂಟ್ ಸಿಗುತ್ತದೆ. ಈ ಹಿಂದೆ 1996ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಶ್ರೀಲಂಕಾದ ಅಂತರಿಕ ಯುದ್ದದಿಂದ ರಾವಣನ ನಾಡಲ್ಲಿ ಆಡಲ್ಲ ಎಂದು ಹೇಳಿತ್ತು. ಕೊನೆಗೆÉ ಫೈನಲ್ನಲ್ಲಿ ಅದೇ ಆಸ್ಟ್ರೇಲಿಯಾವನ್ನು ಮಣಿಸಿ ಚೊಚ್ಚಲ ಬಾರಿ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದ ಅರ್ಜುನ್ ರಣತುಂಗಾ ಹುಡುಗರ ಸಾಹಸವನ್ನು ಕ್ರಿಕೆಟ್ ಜಗತ್ತು ಎಂದೆಂದಿಗೂ ಮರೆಯಲ್ಲ.
ಅದಿರಲಿ, ಭಾರತದ ವಿರುದ್ಧ ಪಾಕ್ ಆಡಲ್ಲ ಅಂದ್ರೆ ನಷ್ಟ ಯಾರಿಗೆ..? ಬಿಸಿಸಿಐಗೆ ಏನೂ ನಷ್ಟವಿಲ್ಲ. ಯಾಕಂದ್ರೆ ಈ ಟೂರ್ನಿಯನ್ನು ಆಯೋಜಿಸಿರುವುದು ಐಸಿಸಿ. ಹಾಗಾಗಿ ಬಿಸಿಸಿಐಗೆ ಬರಬೇಕಾದ ದುಡ್ಡು ಬಂದೇ ಬರುತ್ತೆ. ಅಲ್ಲದೆ ಸುಲಭವಾಗಿ ಟೀಮ್ ಇಂಡಿಯಾಗೆ ಎರಡು ಪಾಯಿಂಟ್ ಕೂಡ ಸಿಗುತ್ತದೆ. ಒಂದು ವೇಳೆ ಪಾಕ್ ತನ್ನ ನಿಲುವಿಗೆ ಅಂಟಿಕೊಂಡ್ರೆ ಪಾಕ್ ಕ್ರಿಕೆಟ್ ಮಂಡಳಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಅಷ್ಟೇ ಅಲ್ಲ, ಪಿಎಸ್ಎಲ್, ಇನ್ನಿತರ ದ್ವಿಪಕ್ಷೀಯ ಸರಣಿಗಳ ಮೇಲೂ ಪರಿಣಾಮ ಬೀರುತ್ತದೆ. ಈಗಾಗಲೆ ಜಿಂಬಾಬ್ವೆ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದ ಆಟಗಾರರು ಧೈರ್ಯ ಮಾಡಿಕೊಂಡು ಪಾಕ್ ನೆಲದಲ್ಲಿ ಆಡುತ್ತಿದ್ದಾರೆ. ಆದ್ರೆ ಪಾಕ್ನ ಈ ನಿರ್ಧಾರದಿಂದ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಪಾಕ್ ನಲ್ಲಿ ಪ್ರತಿಭಾವಂತ ಆಟಗಾರರು ಇದ್ರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಸಿಗದೇ ತನ್ನ ಪರಂಪರೆ, ಘನತೆಯನ್ನು ಕಳೆದುಕೊಳ್ಳುತ್ತಿದೆ. ಇದೆಲ್ಲಾ ಗೊತ್ತಿದ್ರೂ ಪಾಕ್ ಭಾರತದ ವಿರುದ್ದ ಸೇಡು ತೀರಿಸಿಕೊಳ್ಳಲು ತನ್ನ ನಿರ್ಧಾರವನ್ನು ಬದಲಾವಣೆ ಮಾಡಿಕೊಳ್ಳದೇ ಇದ್ರೆ ನಷ್ಟ ಪಾಕ್ಗೆ ಹೊರತು ಭಾರತಕ್ಕಲ್ಲ.
ಇನ್ನು ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆದ್ರೆ ಅಂದಾಜು ಮೌಲ್ಯ 2200 ಕೋಟಿಗೂ ಅಧಿಕ ವಹಿವಾಟು ನಡೆಯುತ್ತದೆ. ಅದರಲ್ಲಿ ಸುಮಾರು 10 ಸೆಕೆಂಡುಗಳ ಜಾಹೀರಾತುನಲ್ಲಿ 200-250 ಕೋಟಿ ನಷ್ಟವಾಗಲಿದೆ. ಕಾರ್ಪೋರೇಟು ಕಂಪೆನಿಗಳು ಪ್ರತಿ ಹತ್ತು ಸೆಕೆಂಡು ಜಾಹೀರಾತುಗೆ 12 ಲಕ್ಷಗಳ ವರೆಗೆ ವೆಚ್ಚ ಮಾಡುತ್ತಿವೆ. ಇನ್ನೊಂದು ವಿಚಾರ ಅಂದ್ರೆ ಭಾರತ – ಪಾಕ್ ನಡುವಿನ ಪಂದ್ಯದ ಆದಾಯ ಪಾಕ್ ಕ್ರಿಕೆಟ್ನ ವಾರ್ಷಿಕ ಆದಾಯಕ್ಕಿಂತ ಏಳು ಪಟ್ಟು ಹೆಚ್ಚಳಿದೆ. ಸದ್ಯ ಪಾಕ್ ಕ್ರಿಕೆಟ್ ಮಂಡಳಿಯ ವಾರ್ಷಿಕ ಆದಾಯ 35.5 ಮಿಲಿಯನ್ ಯುಎಸ್ ಡಾಲರ್. ಜಸ್ಟ್ ಊಹೆ ಮಾಡಿ, ಪಾಕ್ನ ಧಿಮಾಕು ಎಷ್ಟಿರಬಹುದು. ಕೇವಲ ಒಂದು ಸೇಡಿಗೋಸ್ಕರ. ಅಂದ ಮೇಲೆ ಬಿಸಿಸಿಐ ಅಥವಾ ಭಾರತ ಸರ್ಕಾರ ಸುಖಾ ಸುಮ್ಮನೆ ಬಿಟ್ಟುಕೊಡುತ್ತದೆಯೋ..? ಅಲ್ಲದೆ ಈ ಪಂದ್ಯವನ್ನು ಒಂದು ಬಿಲಿಯನ್ಗಿಂತಲೂ ಹೆಚ್ಚು ಜನ ಟಿವಿಯಲ್ಲಿ ನೋಡುತ್ತಾರೆ. ಸ್ಟೇಡಿಯಂ ಫುಲ್ ಭರ್ತಿಯಾಗುತ್ತದೆ. ಬಹುಶಃ ಈ ಕಾರಣದಿಂದಲೇ ಇಂಡೋ ಪಾಕ್ ಮ್ಯಾಚ್ ಇಷ್ಟೊಂದು ಹೈಪ್ ಪಡೆದುಕೊಂಡಿರೋದು.
ಒಟ್ಟಿನಲ್ಲಿ ಈಗ ಪಾಕ್ ಕ್ರಿಕೆಟ್ನ ಭವಿಷ್ಯ ಐಸಿಸಿ ಕೈಯಲ್ಲಿದೆ. ಒಂದು ವೇಳೆ ಪಾಕ್ ಭಾರತ ವಿರುದ್ಧ ಆಡದೇ ಇದ್ರೆ ಮೇಲ್ನೋಟಕ್ಕೆ ದಂಡವನ್ನು ಕಟ್ಟಬೇಕಾಗುತ್ತದೆ. ಆದ್ರೆ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಲು ಹಿಂದೆ ಮುಂದೆ ಯೋಚನೆ ಮಾಡುತ್ತಿರುವ ದೇಶಗಳು ಮುಂಬರುವ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಎಂಬುದು ಗೊತ್ತಿಲ್ಲ. ಯಾಕಂದ್ರೆ ಇವತ್ತು ಭಾರತೀಯ ಕ್ರಿಕೆಟ್ ಮಂಡಳಿಯ ನೆರವಿನಿಂದಲೇ ಐಸಿಸಿ ತನ್ನ ಘನತೆಯನ್ನು ಉಳಿಸಿಕೊಂಡಿದೆ. ಹೀಗಾಗಿ ಪಾಕ್ ಏನೇ ಕಿತಾಪತಿ ಮಾಡಿದ್ರೂ ಐಸಿಸಿ ಮಾತ್ರ ಬಿಸಿಸಿಐಯನ್ನು ಬಿಟ್ಟುಕೊಡುವ ಪ್ರಮೇಯವೇ ಬರುವುದಿಲ್ಲ. ಅಷ್ಟು ಮಾತ್ರ ಗ್ಯಾರಂಟಿ ಇದೆ.
ಇಷ್ಟು ದಿನ ಅಮೇರಿಕಾ, ಚೀನಾದ ಜೊತೆ ಕಾಣಿಸಿಕೊಂಡಿರುವ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಸಾಕಷ್ಟು ಬಾರಿ ಛೀಮಾರಿ ಹಾಕಿಸಿಕೊಂಡಿದೆ. ಇದೀಗ ಐಸಿಸಿಯನ್ನು ಮುಂದಿಟ್ಟುಕೊಂಡು ಭಾರತದ ವಿರುದ್ಧ ಕೆಂಡ ಕಾರುತ್ತಿರುವ ಪಾಕಿಸ್ಥಾನದ ಯಾವುದೇ ತಂತ್ರಗಳು ವರ್ಕ್ಔಟ್ ಆಗಲ್ಲ. ಯಾಕೆ ಸುಮ್ಮನೆ ಈ ಕಿತ್ತಾಟ.. ಕಿರಿಕಿರಿ.. ಕಿತಾಪತಿ. ಅದ್ಯಾಕೋ ಡಾ. ರಾಜ್ ಕುಮಾರ್ ಅವರ ಸಂಪತ್ತಿಗೆ ಸವಾಲು ಹಾಡು ನೆನಪಾಗುತ್ತಿದೆ. ನನ್ನ ನೀನು ಗೆಲ್ಲಲಾರೆ.. ಸುಮ್ಮನೆ ಯಾಕೆ ಇದೆಲ್ಲಾ..? ಅಲ್ವಾ..!
ಸನತ್ ರೈ








