ಕೊಪ್ಪಳ: ರಾಜ್ಯ ರಾಜಕಾರಣದಲ್ಲಿ ಸಭ್ಯತೆಯ ಗೆರೆಗಳು ಅಳಿಸಿ ಹೋಗುತ್ತಿವೆಯೇ ಎಂಬ ಸಂಶಯ ಮೂಡುವಂತೆ ಇಬ್ಬರು ಜನಪ್ರತಿನಿಧಿಗಳ ನಡುವಿನ ಜಗಳ ಈಗ ಬೀದಿ ರಂಪಾಟಕ್ಕೆ ಸಾಕ್ಷಿಯಾಗಿದೆ. ಗಣಿ ಧಣಿ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಸಚಿವ ಶಿವರಾಜ್ ತಂಗಡಗಿ ನಡುವಿನ ವಾಕ್ಸಮರ ಈಗ ವೈಯಕ್ತಿಕ ನಿಂದನೆಯ ಹಂತಕ್ಕೆ ತಲುಪಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಯ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಅವರು ತಂಗಡಗಿ ವಿರುದ್ಧ ನೀಡಿದ್ದ ಏಕವಚನದ ವಾಗ್ದಾಳಿ, ಈಗ ಅದಕ್ಕಿಂತಲೂ ಭೀಕರವಾದ ಪ್ರತಿರೋಧಕ್ಕೆ ಕಾರಣವಾಗಿದೆ. ಮೊದಲ ಬಾರಿಗೆ ಸಚಿವನನ್ನಾಗಿ ಮಾಡಲು ನಿನ್ನನ್ನು ಹೆಲಿಕಾಪ್ಟರ್ ನಲ್ಲಿ ಕರೆದುಕೊಂಡು ಹೋಗಿದ್ದು ನಾನು, ಚೀಲದಲ್ಲಿ ಹಣ ಕೊಟ್ಟಿದ್ದು ನಾನು ಎಂದು ರೆಡ್ಡಿ ಹರಿಹಾಯ್ದಿದ್ದರು. ಇದಕ್ಕೆ ಸಚಿವ ತಂಗಡಗಿ ಅಷ್ಟೇ ಹರಿತವಾಗಿ ಉತ್ತರ ನೀಡಿದ್ದಾರೆ.
ಜೈಲಿನಲ್ಲಿ ಮುದ್ದೆ ಮುರಿದವನು ನೀನು ತಂಗಡಗಿ ಆಕ್ರೋಶ
ಜನಾರ್ದನ ರೆಡ್ಡಿ ಅವರ ಲೇ ತಮ್ಮಾ ಎಂಬ ಸಂಬೋಧನೆಗೆ ಕೆಂಡಾಮಂಡಲವಾಗಿರುವ ಶಿವರಾಜ್ ತಂಗಡಗಿ, ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಬರೆಯುವ ಮೂಲಕ ರೆಡ್ಡಿ ಅವರ ಇತಿಹಾಸವನ್ನು ಕೆದಕಿದ್ದಾರೆ. ಲೇ ಜನಾರ್ದನ ರೆಡ್ಡಿ, ಲೇ ಚಂಚಲಗುಡ ಕೈದಿ ನಂಬರ್ 697, ಜೈಲಿನಲ್ಲಿ ಮುದ್ದೆ ಮುರಿದ ಗಣಿ ಲೂಟಿಕೋರ ಎಂದು ಕರೆಯುವ ಮೂಲಕ ತಂಗಡಗಿ ನೇರ ದಾಳಿ ನಡೆಸಿದ್ದಾರೆ. ನನಗೂ ಲೇ ಎನ್ನಲು ಬರುತ್ತದೆ, ಆದರೆ ಸಂಸ್ಕಾರ ಅಡ್ಡಿ ಬರುತ್ತಿದೆ ಎಂದು ಹೇಳುತ್ತಲೇ ರೆಡ್ಡಿ ಅವರ ವ್ಯಕ್ತಿತ್ವವನ್ನು ಹರಾಜು ಹಾಕಿದ್ದಾರೆ.
ತಾಕತ್ತಿದ್ದರೆ ರಾಜೀನಾಮೆ ಕೊಟ್ಟು ಬಾ ಬಹಿರಂಗ ಸವಾಲು
ಕೇವಲ ಮಾತಿನಲ್ಲೇ ನಿಲ್ಲದ ತಂಗಡಗಿ, ಜನಾರ್ದನ ರೆಡ್ಡಿ ಅವರಿಗೆ ಬಹಿರಂಗ ಸವಾಲು ಎಸೆದಿದ್ದಾರೆ. ನಿನಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದು ಗಂಗಾವತಿಯಲ್ಲಿ ನನ್ನ ವಿರುದ್ಧ ಉಪ ಚುನಾವಣೆ ಎದುರಿಸು. ನೀನು ರಾಜೀನಾಮೆ ನೀಡಿದ 24 ಗಂಟೆಯೊಳಗೆ ನಾನೂ ರಾಜೀನಾಮೆ ನೀಡುತ್ತೇನೆ. ಜನಾದೇಶ ಲೂಟಿಕೋರನಿಗೋ ಅಥವಾ ಜನಸೇವಕನಿಗೋ ಎಂಬುದು ಅಲ್ಲೇ ತೀರ್ಮಾನವಾಗಲಿ ಎಂದು ಪಂಥಾಹ್ವಾನ ನೀಡಿದ್ದಾರೆ.
ನನ್ನ ಬೆಂಬಲದ ಭಿಕ್ಷೆಯಿಂದ ನೀವು ಮಂತ್ರಿಗಳಾಗಿದ್ದು
ಹಳೆಯ ನೆನಪುಗಳನ್ನು ಮೆಲುಕು ಹಾಕಿರುವ ಸಚಿವ ತಂಗಡಗಿ, ನಾನು ಪಕ್ಷೇತರನಾಗಿ ಗೆದ್ದಾಗ ನನ್ನ ಬೆಂಬಲ ಕೋರಿ ನನ್ನ ಮನೆ ಮುಂದೆ ಕಾದು ಕುಳಿತಿದ್ದು ನಿನ್ನ ಪಟಾಲಂ. ಅಂದು ತಮ್ಮುಡು ತಮ್ಮುಡು ಎಂದು ಗೋಗರೆದು ನನ್ನ ಬೆಂಬಲ ಪಡೆದು ನೀವಿಬ್ಬರು ಅಣ್ಣ ತಮ್ಮಂದಿರು ಮಂತ್ರಿಗಳಾದಿರಿ. ಅದು ನನ್ನ ಕ್ಷೇತ್ರದ ಜನ ನೀಡಿದ ಭಿಕ್ಷೆ ಎಂದು ಕುಟುಕಿದ್ದಾರೆ. ಗಣಿ ಲೂಟಿಯ ಅಹಂಕಾರ ನಿನ್ನ ನೆತ್ತಿಗೇರಿದೆ, ಕೃಷ್ಣ ಜನ್ಮಾಷ್ಟಮಿಯ ದಿನ ನಿನ್ನನ್ನು ಕೃಷ್ಣ ಜನ್ಮಸ್ಥಾನಕ್ಕೆ ಅಂದರೆ ಜೈಲಿಗೆ ಕಳಿಸಿದ್ದು ನೆನಪಿದೆಯೇ ಎಂದು ವ್ಯಂಗ್ಯವಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಇಬ್ಬರು ಪ್ರಭಾವಿ ನಾಯಕರ ನಡುವಿನ ಈ ವಾರ್ ಈಗ ರಾಜ್ಯ ರಾಜಕಾರಣದ ಗಮನ ಸೆಳೆದಿದೆ. ಅಭಿವೃದ್ಧಿ ವಿಚಾರಗಳನ್ನು ಬಿಟ್ಟು ಪರಸ್ಪರ ಕೈದಿ, ಲೂಟಿಕೋರ ಎಂಬ ಹಣೆಪಟ್ಟಿ ಹಚ್ಚಿಕೊಳ್ಳುತ್ತಿರುವುದು ಮತದಾರರಲ್ಲಿ ಅಸಮಾಧಾನ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಬದ್ಧ ವೈರಿಗಳ ಕಾಳಗ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ.







