ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುವುದು ಸಾಮಾನ್ಯ. ಆದರೆ ಈಗ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಭಾವಿ ನಾಯಕರ ನಡುವೆ ಸರ್ಕಾರಿ ಬಂಗಲೆಗಾಗಿ ಜಂಗೀ ಕುಸ್ತಿ ಶುರುವಾಗಿದೆ. ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಡಾ. ಎಚ್.ಸಿ. ಮಹದೇವಪ್ಪ ಮತ್ತು ಸಚಿವ ಭೈರತಿ ಸುರೇಶ್ ನಡುವಿನ ಈ ಬಂಗಲೆ ವಾರ್ ಈಗ ಬೀದಿಗೆ ಬಂದಿದ್ದು, ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.
ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಪ್ರದೇಶವಾದ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸ ಈಗ ವಿವಾದದ ಕೇಂದ್ರಬಿಂದು. ಈ ಮನೆಯಲ್ಲಿ ಸದ್ಯ ಹಿರಿಯ ನಾಯಕ ಡಾ. ಎಚ್.ಸಿ. ಮಹದೇವಪ್ಪ ವಾಸವಿದ್ದಾರೆ. ಆದರೆ ಇದೇ ಮನೆ ಈಗ ಸಚಿವ ಭೈರತಿ ಸುರೇಶ್ ಅವರಿಗೆ ಹಂಚಿಕೆಯಾಗಿದೆ. ನಿಯಮದ ಪ್ರಕಾರ ಮನೆ ಖಾಲಿ ಮಾಡಲು ಕಾಲಾವಕಾಶವಿದ್ದರೂ, ಭೈರತಿ ಸುರೇಶ್ ತೋರಿರುವ ಅತಿಯಾದ ಆತುರ ಮತ್ತು ವರ್ತನೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಹದೇವಪ್ಪ ಮನೆಯೊಳಗಿದ್ದಾಗಲೇ ನವೀಕರಣ
ಸೌಜನ್ಯದ ಮಿತಿಯನ್ನೂ ಮರೆತ ಸಚಿವ ಭೈರತಿ ಸುರೇಶ್, ಮಹದೇವಪ್ಪ ಅವರು ಇನ್ನೂ ಮನೆಯಲ್ಲೇ ವಾಸ್ತವ್ಯ ಹೂಡಿರುವಾಗಲೇ ಅಲ್ಲಿಗೆ ಪೇಂಟರ್ ಗಳನ್ನು ಕಳುಹಿಸಿ ಬಣ್ಣ ಬಳಿಯುವ ಕೆಲಸ ಆರಂಭಿಸಿದ್ದಾರೆ. ಅಷ್ಟಕ್ಕೇ ನಿಲ್ಲದ ಸಚಿವರ ಆತುರ, ಮಹದೇವಪ್ಪ ಅವರು ಸಾರ್ವಜನಿಕರನ್ನು ಭೇಟಿ ಮಾಡಲು ಬಳಸುತ್ತಿದ್ದ ಶೀಟ್ ನ ಶೆಡ್ ಅನ್ನು ಜೆಸಿಬಿ ಮೂಲಕ ನೆಲಸಮ ಮಾಡಿಸಿದೆ. ಹಿರಿಯ ನಾಯಕರೊಬ್ಬರು ಮನೆಯಲ್ಲಿದ್ದಾಗಲೇ ಈ ರೀತಿ ದರ್ಪ ಪ್ರದರ್ಶಿಸಿರುವುದು ಸ್ವತಃ ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಕೇವಲ ಎರಡು ದಿನದ ಗಡುವು: ಸಿಬ್ಬಂದಿಗೆ ಆವಾಜ್
ಮೂಲಗಳ ಪ್ರಕಾರ, ಸಚಿವ ಭೈರತಿ ಸುರೇಶ್ ಅವರು ಮಹದೇವಪ್ಪ ಅವರ ಮನೆಯ ಸಿಬ್ಬಂದಿಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಕೇವಲ ಎರಡು ದಿನಗಳಲ್ಲಿ ಮನೆಯನ್ನು ಸಂಪೂರ್ಣವಾಗಿ ಖಾಲಿ ಮಾಡಬೇಕು, ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಚಿವರು ಗುಡುಗಿದ್ದಾರೆ ಎನ್ನಲಾಗುತ್ತಿದ್ದು, ಇದು ಹಿರಿಯ ನಾಯಕನಿಗೆ ಮಾಡಿದ ಅಪಮಾನ ಎಂದು ಬಣ್ಣಿಸಲಾಗುತ್ತಿದೆ.
ಪಾಪ ಅವರಿಗೆ ಆತುರ ಇರಬಹುದು ಮಹದೇವಪ್ಪ ಮಾರ್ಮಿಕ ವ್ಯಂಗ್ಯ
ತಮ್ಮ ನಿವಾಸದ ಮೇಲೆ ನಡೆದ ಈ ಅನಿರೀಕ್ಷಿತ ದಾಳಿಯಿಂದ ಅತೀವ ಬೇಸರಗೊಂಡಿರುವ ಡಾ. ಎಚ್.ಸಿ. ಮಹದೇವಪ್ಪ, ಅತ್ಯಂತ ಸಂಯಮದಿಂದಲೇ ಭೈರತಿ ಸುರೇಶ್ ಅವರಿಗೆ ತಿರುಗೇಟು ನೀಡಿದ್ದಾರೆ. ಪಾಪ, ಅವರಿಗೆ ತುಂಬಾ ಕಷ್ಟವಿರಬಹುದು ಅಥವಾ ಈ ಮನೆಗೆ ಬರಲು ತುಂಬಾ ಆತುರವಿರಬಹುದು. ಅವರು ಸಚಿವರಾಗಿದ್ದಾರೆ, ಅವರ ಕೆಲಸಕ್ಕೆ ನಾನೇಕೆ ಅಡ್ಡಿಪಡಿಸಲಿ? ನಾನು ಬಾಡಿಗೆ ಮನೆ ಹುಡುಕುತ್ತಿದ್ದೇನೆ, ಸಿಕ್ಕ ತಕ್ಷಣ ಹೊರಡುತ್ತೇನೆ ಎಂದು ಹೇಳುವ ಮೂಲಕ ಭೈರತಿ ಸುರೇಶ್ ಅವರ ನಡೆಗೆ ಸಾರ್ವಜನಿಕವಾಗಿಯೇ ಚಾಟಿ ಬೀಸಿದ್ದಾರೆ.
ಒಟ್ಟಿನಲ್ಲಿ, ಒಂದೇ ಪಕ್ಷದ ಇಬ್ಬರು ಪ್ರಭಾವಿ ನಾಯಕರ ನಡುವಿನ ಈ ಬಂಗಲೆ ಜಗಳ ಈಗ ಹಾದಿ ರಂಪ ರಾದ್ಧಾಂತವಾಗಿ ಮಾರ್ಪಟ್ಟಿದೆ. ಹಿರಿಯರಿಗೆ ಗೌರವ ನೀಡುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿ ಮಾಯವಾಗುತ್ತಿದೆಯೇ ಎಂಬ ಪ್ರಶ್ನೆ ಈಗ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಸದ್ಯಕ್ಕೆ ಈ ಬಂಗಲೆ ವಾರ್ ಡಿಕೆಶಿ ಅವರ ಅಂಗಳಕ್ಕೆ ತಲುಪಿದ್ದು, ಮುಖ್ಯಮಂತ್ರಿಗಳು ಈ ಇಬ್ಬರು ಆಪ್ತರ ಜಗಳವನ್ನು ಹೇಗೆ ಶಮನ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.







