ದಾವಣಗೆರೆಗೂ ತಟ್ಟಿದ ಹಿಜಾಬ್-ಕೇಸರಿ ಶಾಲು ಬಿಸಿ Saaksha Tv
ದಾವಣಗೆರೆ: ಬೆಣ್ಣೆ ನಗರಿ ದಾವಣೆಗೆರಿಗೂ ಹಿಜಾಬ್ ಬಿಸಿ ತಟ್ಟಿದೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ.
ಹಿಜಾಬ್ ವಿವಾದ ರಾಜ್ಯದ ಬಹುತೇಕ ಜಿಲ್ಲೆಗಳ ಕಾಲೇಜಿಗೆ ವ್ಯಾಪಿಸಿದ್ದು, ಈಗ ದಾವಣಗೆರೆಯ ಸರಕಾರಿ ಕಾಲೇಜಿಗೂ ಕಾಲಿಟ್ಟಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಸರಕಾರದ ಆದೇಶವಿದ್ದರೂ ಕೂಡ ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದಾರೆ. ಇದನ್ನು ಕಂಡ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಬಂದಿದ್ದಾರೆ.
ಈ ಕುರಿತು ಪ್ರಶ್ನಿಸಿದ ಆಡಳಿತ ಮಂಡಳಿಗೆ ಎಲ್ಲಿವರೆಗೆ ತರಗತಿಯಲ್ಲಿ ಹಿಜಾಬ್ ಇರುತ್ತದೆಯೋ ಅಲ್ಲಿಯವರೆಗೆ ಕೇಸರಿ ಶಾಲು ಧರಿಸಿಯೇ ಹಾಜರಾಗುತ್ತೇವೆ ಎಂದು ಹಿಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಅಲ್ಲದೇ ಮುಸ್ಲಿಂ ವಿದ್ಯಾರ್ಥಿನಿಯರು ಕೂಡ ನಾವು ಹಿಜಾಬ್, ಬುರ್ಕಾ ಧರಿಸಿಯೇ ಕಾಲೇಜಿಗೆ ಬರುತ್ತೇವೆ. ಸರಕಾರ ಎನೇ ಆದೇಶ ಹೊರಡಿಸಿದರು ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡದಿದ್ದಾರೆ.
ಎರಡು ಬಣದ ವಿದ್ಯಾರ್ಥಿಗಳು ಸಮವಸ್ತ್ರ ನೀತಿ ಸಂಹಿತೆಯನ್ನು ಪಾಲಿಸುತ್ತಿಲ್ಲ. ವಿದ್ಯಾರ್ಥಿಗಳು ಶಾಲಾ ತರಗತಿಯಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿಕೊಂಡೇ ಪಾಠ ಕೇಳುತ್ತಿದ್ದಾರೆ. ಈ ಹಿಜಾಬ್ – ಕೇಸರಿ ಶಾಲು ನಡುವಿನ ಗಲಾಟೆ ತೀರ್ವ ಸ್ವರೂಪ ಪಡೆದ ಹಿನ್ನಲೆಯಲ್ಲಿ ಕಾಲೇಜಿಗೆ ಶಾಸಕ ಎಂ ಪಿ ರೇಣುಕಾಚಾರ್ಯ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಹಿಜಾಬ್ ತಗೆಯಲು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಬಗ್ಗದ ವಿದ್ಯಾರ್ಥಿನಿಯರು ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ ಎಂದು ಶಾಸಕರಿಗೆ ಏರುಧ್ವನಿಯಲ್ಲಿ ಉತ್ತರ ನೀಡಿದ್ದಾರೆ.
ನೀವು ಈ ರೀತಿ ಹಿಜಬ್ ಧರಿಸಿ ಬಂದರೆ ಅವರು ಕೇಸರಿ ಶಾಲು ಧರಿಸುತ್ತಾರೆ. ಇದು ಮತ್ತೆ ಸಂಘರ್ಷಕ್ಕೆ ಕಾರಣವಾಗುತ್ತೆ ಎಂದು ಸಮಾಧಾನ ಮಾಡಲು ಮುಂದಾದಾಗ ಮುಸ್ಲಿಂ ವಿದ್ಯಾರ್ಥಿನಿಯರು ಏನೇ ಆಗಲಿ ನಾವು ಯಾವುದೇ ಕಾರಣಕ್ಕೂ ಹಿಜಬ್ ತೆಗೆಯಲ್ಲ. ಹಿಜಬ್ ಹಾಕಿಕೊಂಡೇ ಕಾಲೇಜಿಗೆ ಬರುತ್ತೇವೆ ಎಂದು ಪಟ್ಟು ಹಿಡಿದು ಕುಳಿತ್ತಿದ್ದಾರೆ.
ದಾವಣಗೆರೆಯಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಕಾರಣವಾದ ಹಿಜಬ್ ವಿವಾದವು ನಗರದ ಜಯದೇವ ಸರ್ಕಲ್ನಲ್ಲಿ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆದಿದೆ.
ಅಲ್ಲದೇ ಹಿಂದೂ ಜಾಗರಣಾ ವೇದಿಕೆಯು ತರಗತಿಗಳಲ್ಲಿ ಹಿಜಬ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನಗರದ ಜಯದೇವ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ಸಂಘಟನೆಗಳ ಪ್ರತಿಭಟನೆ ನಡೆಸಿದ್ದಾರೆ.