ಭಗವಧ್ವಜಾ ತೆಗೆದು ಅಪಮಾನ | ಹಿಂದು ಸಂಘಟನೆಗಳಿಂದ ಪ್ರತಿಭಟನೆ
ಶಿವಮೊಗ್ಗ: ಯಾವುದೇ ಮಾಹಿತಿ ನೀಡದೆ ಭಗವಾಧ್ವಜವನ್ನು ತೆಗೆದು ಅಪಮಾನ ಮಾಡಿದ್ದಾರೆ ಎಂದು ಹಿಂದೂಪರ ಸಂಘನೆಗಳು ಪ್ರತಿಭಟನೆ ಮಾಡಿರುವ ಘಟನೆ ಸಾಗರದಲ್ಲಿ ನಡೆದಿದೆ.
ಸಾಗರ ನಗರಕ್ಕೆ ಸ್ವಾಗತ ಕಮಾನಿಗೆ ಹಾಕಲಾಗಿದ್ದ ಭಗವಧ್ವಜವನ್ನು ಕೆಳಗೆ ಇಳಿಸಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಗುರುವಾರ ತಡರಾತ್ರಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದಿಢೀರ್ ರಸ್ತೆ ತಡೆ ನಡೆಸಿ ಪೊಲೀಸ್ ಇಲಾಖೆ ವಿರುದ್ಧ ಪ್ರತಿಭಟನೆ ಮಾಡಿದರು.
ಕಳೆದ ವಾರ ಛತ್ರಪತಿ ಶಿವಾಜಿ ಮಹರಾಜರ 392ನೇ ಜಯಂತಿಯನ್ನು ಸಾಗರದಲ್ಲಿ ಆಚರಿಸಲಾಗಿದ್ದು, ಇದರ ಪ್ರಯುಕ್ತ ಸಾಗರ ನಗರಕ್ಕೆ ಪ್ರವೇಶ ದ್ವಾರಕ್ಕೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಭಗವಾಧ್ವಜ ಹಾಕಲಾಗಿತ್ತು.
ಆದರೆ, ಗುರುವಾರ ರಾತ್ರಿ ಪೊಲೀಸ್ ಇಲಾಖೆಯಿಂದ ಸಂಘಟನೆಗೆ ಯಾವುದೇ ಮಾಹಿತಿ ನೀಡದೆ ಭಗವಾಧ್ವಜ ತೆರವುಗೊಳಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.