“ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕು” : ಆರ್ ಜಿವಿ
ನವದೆಹಲಿ : ನಾವು ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕು ಎಂದು ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಆರ್ ಜಿವಿಯ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಹಲ್ ಚಲ್ ಸೃಷ್ಠಿ ಮಾಡಿದೆ. ಕೆಲವರು ವರ್ಮಾ ಪರ ಬ್ಯಾಟ್ ಬೀಸಿದ್ರೆ ಮತ್ತೆ ಕೆಲವರು ಆರ್ ಜಿವಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಆಗಿದ್ದೇನು..?
ದೇಶದಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದ ವರ್ಷ ಕಾಣಿಸಿಕೊಂಡ ಕೊರೊನಾಗಿಂತಲೂ ಕೊರೊನಾ 2.0 ರಾಕೆಟ್ ವೇಗದಲ್ಲಿ ಜನರ ದೇಹ ಹೊಕ್ಕುತ್ತಿದೆ. ಈ ಮಧ್ಯೆ ಉತ್ತರಾಖಂಡ ರಾಜ್ಯದಲ್ಲಿ ಬೃಹತ್ ಕುಂಭಮೇಳ ನಡೆದಿದ್ದು, ಕೋಟ್ಯಾಂತರ ಮಂದಿ ಜನರು ಭಾಗಿಯಾಗಿ ಗಂಗೆಯಲ್ಲಿ ಮಿಂದೆದ್ದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ವರ್ಮಾ ” ಕೊರೋನ ವೈರಸ್ ಕುಂಭಮೇಳದಲ್ಲಿ ಸೇರಿರುವ ಜನರನ್ನು ನೋಡಿ ಬಾಯಿ ಚಪ್ಪರಿಸುತ್ತಿದೆ. ಗುಡ್ ಬೈ ಇಂಡಿಯಾ, ವೆಲ್ ಕಮ್ ಕೊರೊನಾ” ಎಂದು ವ್ಯಂಗ್ಯವಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಕಳೆದ ವರ್ಷದ ತಬ್ಲೀಗ್ ಜಮಾತ್ ಮತ್ತು ಈ ವರ್ಷದ ಕುಂಭಮೇಳಕ್ಕೆ ಆಗಮಿಸಿದ್ದ ಜನರ ಫೋಟೋಳನ್ನ ಶೇರ್ ಮಾಡಿ, ಈಗಿನ ಬಾಹುಬಲಿ ಕುಂಭಮೇಳಕ್ಕೆ ಹೋಲಿಸಿದರೆ, ಕಳೆದ ಮಾರ್ಚ್ 2020ರ ದಿಲ್ಲಿ ಜಮಾತ್ ಸೂಪರ್ ಸ್ಪ್ರೆಡರ್ ಒಂದು ಶಾರ್ಟ್ ಫಿಲ್ಮ್ ಆಗಿತ್ತು. ಎಲ್ಲ ಹಿಂದೂಗಳು ಮುಸ್ಲಿಮರ ಕ್ಷಮೆ ಕೇಳಬೇಕಾಗಿದೆ. ಅವರು ಏನೂ ತಿಳಿಯದೇ ಕಳೆದ ವರ್ಷ ಮಾಡಿದ್ದನ್ನು ನಾವು ಎಲ್ಲವನ್ನೂ ತಿಳಿದುಕೊಂಡು ಈ ವರ್ಷ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಆರ್ ಜಿವಿ ಈ ಟ್ವೀಟ್ ಗೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆರ್ ಜಿವಿ ಮತ್ತೆ ಟ್ರೆಂಡ್ ಆಗಿದ್ದಾರೆ.