ಕೊಪ್ಪಳ: ಪ್ರೀತಿಸಿ ಮದುವೆಯಾಗಿದ್ದ ದಂಪತಿ ಮಧ್ಯೆ ವೈಮನಸ್ಸು ಉಂಟಾದ ವೇಳೆ ಕಿರಾತಕನೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಗಂಗಾವತಿ ಕೇಂದ್ರಿಯ ಬಸ್ ನಿಲ್ದಾಣದ ಎದುರಿಗೆ ಇರುವ ಪಾರ್ಕ್ ನಲ್ಲಿ ನಡೆದಿದೆ. ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಪತಿ ಹಾಗೂ ಪತ್ನಿಯ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ರಕ್ಷಣೆಗಾಗಿ ಮಹಿಳೆಯು ಅಲ್ಲಿಯೇ ಇದ್ದ ಪಾರ್ಕ್ ಗೆ ರಕ್ಷಣೆಗಾಗಿ ಹೋಗಿದ್ದಾರೆ. ಈ ವೇಳೆ ನಶೆಯಲ್ಲಿದ್ದ ಕಿರಾತಕರ ಗುಂಪು ಹಲ್ಲೆ ನಡೆಸಿ ಅತ್ಯಾಚಾರ ನಡೆಸಿದೆ ಎನ್ನಲಾಗಿದೆ. ಲಿಂಗರಾಜ ಎಂಬ ಯುವಕ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನುಳಿದ ಆರೋಪಿಗಳನ್ನು ಮೌಲಾಹುಸೇನ್, ಶಿವಕುಮಾರಸ್ವಾಮಿ, ಪ್ರಶಾಂತ, ಮಹೇಶ, ಮಾದೇಶ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಗೊರಗುಂಟೆಪಾಳ್ಯದ 21 ವರ್ಷದ ಯುವತಿ, ಗಂಗಾವತಿ ತಾಲ್ಲೂಕಿನ ಸಿದ್ಧಾಪುರದ ಯುವಕನನ್ನು ಪ್ರೀತಿಸಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದರು. ಆದರೆ, ಇಬ್ಬರ ಮಧ್ಯೆ ಜಗಳ ನಡೆದಿದೆ. ಆಗ ಪತಿ ಮನೆ ಬಿಟ್ಟು ಬಂದಿದ್ದಾನೆ. ಈ ವೇಳೆ ಪತಿಯನ್ನು ಹುಡುಕಿಕೊಂಡು ಪತ್ನಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಪತಿ ಕೂಡ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ. ಆಗ ಇಬ್ಬರೂ ಭೇಟಿಯಾಗಿದ್ದಾರೆ. ಈ ವೇಳೆ ಜಗಳ ಆರಂಭವಾಗಿದೆ. ಇದನ್ನು ಗಮನಿಸಿದ 6 ಜನರ ತಂಡ ಯುವತಿಯನ್ನು ಚುಡಾಯಿಸಿದ್ದಾನೆಂದು ಪತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಮಹಿಳೆ ತನ್ನ ಗಂಡ ಎಂದೂ ಹೇಳಿದರೂ ಹಲ್ಲೆ ನಡೆಸಿದ್ದಾರೆ.
ಗಾಬರಿಗೊಂಡ ಮಹಿಳೆ, ತನ್ನ ರಕ್ಷಣೆಗಾಗಿ ಸಮೀಪದ ಪಾರ್ಕ್ ಕಡೆ ಓಡಿ ಹೋಗಿದ್ದಾಳೆ. ಹಿಂಬಾಲಿಸಿಕೊಂಡು ಬಂದ ಕಾಮುಕರ ಗುಂಪು, ಆಕೆ ಮೈ ಮೇಲಿದ್ದ ಬಟ್ಟೆ ಹರಿದು ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಪೈಕಿ ಓರ್ವ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಆಗ ಪತಿ ಅಕ್ಕಪಕ್ಕದವರನ್ನು ಕರೆ ತರುವ ವೇಳೆಗೆ ಯುವಕರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.