ಬೆಂಗಳೂರು : ನಾನು ಸಚಿವ ಸ್ಥಾನದ ರೇಸ್ ನಲ್ಲಿಲ್ಲ, ಅವಕಾಶ ಸಿಕ್ಕರೆ ಕೆಲಸ ಮಾಡುತ್ತೇನೆ ಎಂದು ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಯಾವಾಗ ಸಂಪುಟ ವಿಸ್ತರಣೆ ಆಗುತ್ತೆ ಎಂಬುವ ಬಗ್ಗೆ ನಿಖರ ಮಾಹಿತಿ ನನಗಿಲ್ಲ. ಅಧಿವೇಶನಕ್ಕೆ ಮೊದಲು ಅಥವಾ ನಂತರ ಆಗುತ್ತದೆಯೋ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮೊನ್ನೆ ನಾನು ಕೂಡ ದೆಹಲಿಗೆ ಹೋಗಿ ನಿನ್ನೆ ವಾಪಸ್ ಬಂದಿದ್ದೇನೆ. ಸಂಪುಟ ವಿಸ್ತರಣೆ ಬಗ್ಗೆ 50-50 ಸಾಧ್ಯತೆ ಇದೆ. ಸಂಪುಟ ವಿಸ್ತರಣೆ ಕುರಿತು ನನಗೆ ಯಾವುದೇ ರೀತಿಯ ಸಂದೇಶ ಬಂದಿಲ್ಲ. ಆದರೆ ನಾನು ಸಚಿವ ಸ್ಥಾನದ ರೇಸ್ ನಲ್ಲಿ ಇದ್ದೇನೆ ಎಂದು ಹೇಳದಿದ್ದರೂ ಅವಕಾಶ ಕೊಟ್ಟರೆ ಕೆಲಸ ಮಾಡುತ್ತೇನೆ, ಇಲ್ಲದಿದ್ದಲ್ಲಿ ಪಕ್ಷದ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಹೇಳಿದರು.
ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಸದ್ಯಕ್ಕಂತೂ ಅಪ್ರಸ್ತುತ ಇಂತಹ ಯಾವುದೇ ವಿದ್ಯಮಾನಗಳು ನಡೆದಿಲ್ಲ, ರಾಜ್ಯದಲ್ಲಿಯೂ ಇಲ್ಲ, ಕೇಂದ್ರದ ನಾಯಕರ ಮಟ್ಟದಲ್ಲಿಯೂ ಇಂತಹ ವಿಷಯಗಳ ಚರ್ಚೆಗೆ ಬಂದಿಲ್ಲ ಎಂದು ತಿಳಿಸಿದರು.