ಬ್ರಾಹ್ಮಿ ಮುಹೂರ್ತದಲ್ಲಿ ಜರುಗಿದ ಇತಿಹಾಸ ಪ್ರಸಿದ್ಧ ಜಾತ್ರೆ
ಕೊಪ್ಪಳ: ಕೊರೊನ 3ನೇ ಅಲೆ ಹಿನ್ನೆಲೆ ಸರ್ಕಾರ ಜಾತ್ರೆಗಳಿಗೆ ನಿರ್ಬಂಧ ವಿಧಿಸಿದೆ. ಆದರೂ ಇತಿಹಾಸ ಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಜಾತ್ರೆ ಸರಳವಾಗಿ ನಡೆದಿದ್ದು, ಇದೇ ಮೊದಲ ಬಾರಿಗೆ ಬ್ರಾಹ್ಮಿ ಮಹೂರ್ತದಲ್ಲಿ ರಥೋತ್ಸವ ಜರುಗಿದೆ.
ಇಂದು ಬೆಳಗಿನ ಜಾವ 4.30 ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಅತ್ಯಂತ ಸರಳವಾಗಿ ರಥೋತ್ಸವ ನಡೆದಿದೆ. ಕೊರೊನಾ ಸೋಂಕು ಹರಡುವ ಹಿನ್ನಲೆ ಜನರು ಸೇರುವುದನ್ನು ತಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಪ್ರತಿಬಾರಿ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಸುಮಾರು 4 ರಿಂದ 5 ಲಕ್ಷ ಜನರು ಸೇರುತ್ತಿದ್ದರು. ಆದರೂ ಸಹ ಸಾವಿರಾರು ಜನರು ರಥೋತ್ಸವಕ್ಕೆ ಆಗಮಿಸಿದ್ದರು. ಜಿಲ್ಲಾಡಳಿತ ನಿರ್ಬಂಧದ ಹಿನ್ನೆಲೆಯಲ್ಲಿ ಜಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ಈ ಬಾರಿ ರದ್ದು ಮಾಡಲಾಗಿದೆ.
ಪ್ರತಿ ವರ್ಷವೂ ಸಂಜೆಯ ವೇಳೆ ರಥೋತ್ಸವ ನಡೆಯುತ್ತಿತ್ತು. ಈ ಬಾರಿ ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರಬಾರದೆಂದು ರಥೋತ್ಸವದ ಸಮಯವನ್ನು ಕೊನೆ ಕ್ಷಣದವರೆಗೂ ಶ್ರೀ ಗವಿಮಠ ಅತ್ಯಂತ ಗುಪ್ತವಾಗಿಟ್ಟು ಮಹಾರಥೋತ್ಸವ ನಡೆಸಿದೆ. ಸಂಪ್ರದಾಯ ಮುರಿಯದಂತೆ ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಗಳಿಗೆ ಅವಕಾಶ ನೀಡಲಾಗಿದೆ.