ಪಾಕ್ ವಿರುದ್ಧದ ಸೋಲಿಗೆ ಕಾರಣವಾದ 5 ತಪ್ಪುಗಳು, ಬ್ಯಾಟಿಂಗ್, ಬೌಲಿಂಗ್ ಮಾಡಲ್ಲ, ಫೀಲ್ಡಿಂಗ್ ಗೆ ಇಳಿದಿಲ್ಲ, ಪಾಂಡ್ಯಾ ಆಯ್ಕೆ ಬಗ್ಗೆ ವಿರಾಟ್ ಮೇಲೆ ಟೀಕೆ
ಕಡುವೈರಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಮೊದಲ ಬಾರಿಗೆ ವಿಶ್ವಕಪ್ ಪಂದ್ಯವೊಂದನ್ನು ಸೋತಿದೆ. ಹೈವೋಲ್ಟೇಜ್ ಮ್ಯಾಚ್ ಆಗಿದ್ದ ಈ ಪಂದ್ಯವನ್ನು ಕಳೆದುಕೊಂಡ ರೀತಿ ಬಗ್ಗೆ ಸಾಕಷ್ಟು ಟೀಕೆಟಗಳು ಕೇಳಿ ಬರ್ತಿವೆ. ಟೀಮ್ ಸೆಲೆಕ್ಷನ್ ನಿಂದ ಹಿಡಿದು ಆನ್ ಫೀಲ್ಡ್ ಡಿಸಿಷನ್ ತನಕ ಎಲ್ಲವೂ ಪ್ರಶ್ನೆಯಲ್ಲಿದೆ. ದುಬೈನಲ್ಲಿ ಪಾಕ್ ವಿರುದ್ಧದ ಸೋಲಿಗೆ 5 ಪ್ರಮುಖ ಕಾರಣಗಳನ್ನು ಹುಡುಕಲಾಗಿದೆ.
1. ಹಾರ್ದಿಕ್ ಪಾಂಡ್ಯಾ ಆಯ್ಕೆ ಹಿಂದೇನಿತ್ತು ತಂತ್ರ..?
ಹಾರ್ದಿಕ್ ಪಾಂಡ್ಯಾ ಟೀಮ್ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡ ಬಗ್ಗೆ ಹಲವು ಚರ್ಚೆಗಳು ಇವೆ. ಆಲ್ ರೌಂಡರ್ ಸ್ಲಾಟ್ ನಲ್ಲಿ ಪಾಂಡ್ಯ ಸ್ಥಾನ ಪಡೆದಿದ್ದಾರೆ. ಆದರೆ ಪಾಂಡ್ಯಾ ಬೆನ್ನು ನೋವಿನ ಕಾರಣದಿಂದ ಇತ್ತೀಚೆಗೆ ಬೌಲಿಂಗ್ ಮಾಡ್ತಿಲ್ಲ. ಇನ್ನು ಬ್ಯಾಟಿಂಗ್ ನಲ್ಲೂ ಟಚ್ ಕಳೆದುಕೊಂಡಿದ್ದಾರೆ. ಹೋಗಲಿ ಫೀಲ್ಡಿಂಗ್ ಆದ್ರೂ ಮಾಡ್ತಾರೆ ಅಂದ್ರೆ ಪಾಕ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಕಾರಣದಿಂದ ಅದನ್ನೂ ಮಾಡಲಿಲ್ಲ. ಹೀಗಾಗಿ ಬ್ಯಾಟಿಂಗ್ ಮಾಡದ, ಬೌಲಿಂಗ್ ಗೆ ಇಳಿಯದ ಮತ್ತು ಫೀಲ್ಡಿಂಗ್ ಬಗ್ಗೆ ಉತ್ಸಾಹ ತೋರದ ಹಾರ್ದಿಕ್ ಪಾಂಡ್ಯಾರನ್ನು ಆಡುವ ಬಳಗದಲ್ಲಿ ಸೇರಿಸಿಕೊಂಡಿದ್ದಕ್ಕೆ ಫ್ಯಾನ್ಸ್ ಕ್ಯಾಪ್ಟನ್ ಕೊಹ್ಲಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
2. ಬ್ಯಾಟಿಂಗ್ ವೈಫಲ್ಯ ಮತ್ತು ಕೊಹ್ಲಿಯ ಸ್ಲೋ ಬ್ಯಾಟಿಂಗ್..!
ಟೀಮ್ ಇಂಡಿಯಾದ ಬ್ಯಾಟಿಂಗ್ ಯೂನಿಟ್ ಕಂಪ್ಲೀಟ್ ಆಗಿ ಫೇಲ್ ಆಗಿತ್ತು. ರೋಹಿತ್ ಮತ್ತು ರಾಹುಲ್ ಆರಂಭದಲ್ಲೇ ಎಡವಿದರು. ಸೂರ್ಯ ಬೇಗನೆ ಮುಳುಗಿದರು. ಆದರೆ ಕೊಹ್ಲಿಯ ಸ್ಲೋ ಬ್ಯಾಟಿಂಗ್ ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಹಳೆಯ ಕೊಹ್ಲಿಯಾಗಿ ಉಳಿದಿಲ್ಲ. ಪಾಕ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸೆಟ್ ಆಗಿದ್ದರೂ ವೇಗವಾಗಿ ರನ್ ಗಳಿಸಲು ಆಗಲಿಲ್ಲ. ಹೀಗಾಗಿ ತಂಡದ ಬ್ಯಾಟಿಂಗ್ ವೈಫಲ್ಯ ಮತ್ತು ಕೊಹ್ಲಿಯ ಸ್ಲೋ ಬ್ಯಾಟಿಂಗ್ ಟೀಕೆಗೆ ಕಾರಣವಾಗಿದೆ.
3. ಕೈಕೊಟ್ಟ ಬೌಲರ್ಗಳು, ವಿಕೆಟ್ ಕಬಳಿಸದ ಸ್ಪಿನ್ನರ್ ಗಳು
ಟೀಮ್ ಇಂಡಿಯಾದ ಎಂಟೈರ್ ಬೌಲಿಂಗ್ ಬಳಗವೇ ಪಾಕ್ ವಿರುದ್ಧದ ಪಂದ್ಯದಲ್ಲಿ ಕೈ ಕೊಟ್ಟಿತ್ತು. ಹೀಗಾಗಿ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಭುವಿ ಮತ್ತು ಬುಮ್ರಾ ಮ್ಯಾಜಿಕ್ ಮಾಡಲಿಲ್ಲ. ಜೊತೆಗೆ ಕೊಹ್ಲಿಯ ಬೌಲಿಂಗ್ ಬದಲಾವಣೆ ಕೂಡ ಚರ್ಚೆಗೆ ಕಾರಣವಾಗಿತ್ತು.ಶಮಿ ದುಬಾರಿ ಆದರು. ವರುಣ್ ಮಿಸ್ಟ್ರಿ ನಡೆಯಲಿಲ್ಲ. ಜಡೇಜಾ ಕಂಟ್ರೋಲ್ ನಲ್ಲಿದ್ದರೂ ವಿಕೆಟ್ ಬೀಳಲಿಲ್ಲ. ಅಶ್ವಿನ್ ಅಥವಾ ಚಹರ್ ಇದ್ದಿದ್ದರೆ ಏನಾಗುತ್ತಿತ್ತು ಅಂತ ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದಾರೆ.
4. ಅದೃಷ್ಟ ಬದಲಿಸಿದ ಟಾಸ್..?
ದುಬೈ ಪಿಚ್ ನಲ್ಲಿ ಫಲಿತಾಂಶವನ್ನೇ ಟಾಸ್ ನಿರ್ಧಾರ ಮಾಡಿತ್ತು ಅಂತ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾ ಶುರುವಾಗಿದೆ. ಟಾಸ್ ಗೆದ್ದವರು ಫೀಲ್ಡಿಂಗ್ ಆರಿಸಿಕೊಂಡು ಪಿಚ್ ಮೇಲಿರುವ ತೇವಾಂಶದ ಲಾಭ ಪಡೆಯುತ್ತಾರೆ. ಪಾಕ್ ನಾಯಕ ಕೂಡ ಅದನ್ನೇ ಮಾಡಿದ್ದರು. ಆರಂಭದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕಬಳಿಸಿ ಲೆಕ್ಕಾಚಾರ ಬದಲಿಸಿದರು.
5. ಡ್ಯೂ ಫ್ಯಾಕ್ಟರ್ ಮತ್ತು ಚೇಸಿಂಗ್ ಲೆಕ್ಕಾಚಾರ
ಟಾಸ್ ಗೆದ್ದ ತಕ್ಷಣ ಡ್ಯೂ ಫ್ಯಾಕ್ಟರ್ ಲೆಕ್ಕಾಚಾರ ಹಾಕಿದ ಪಾಕಿಸ್ತಾನ ಅದನ್ನು ಸರಿಯಾಗಿ ಬಳಸಿಕೊಂಡಿತು. ಎರಡನೇ ಇನ್ನಿಂಗ್ಸ್ ವೇಳೆ ಇಬ್ಬನಿ ಬೌಲರ್ ಗಳು ಗ್ರಿಪ್ ಕಳೆದುಕೊಳ್ಳುವಂತೆ ಮಾಡಿತು. ಅಷ್ಟೇ ಅಲ್ಲ ಬ್ಯಾಟಿಂಗ್ ಸುಲಭವಾಗುವಂತೆ ಮಾಡಿತು. ಒಟ್ಟಿನಲ್ಲಿ ಸಂಡೇ ದಿನ ಅದೃಷ್ಟ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಕಂಪ್ಲೀಟ್ ಆಗಿ ಎಲ್ಲವನ್ನೂ ಕಳೆದುಕೊಂಡಿತು.