ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಅಮಾಯಕ ಪ್ರವಾಸಿಗರು ಮೃತಪಟ್ಟಿದ್ದ ಘಟನೆ ದೇಶದಾದ್ಯಂತ ಆಕ್ರೋಶದ ಅಲೆ ಎಬ್ಬಿಸಿತ್ತು. ಈ ಕೃತ್ಯಕ್ಕೆ ಹೊಣೆದಾರರೆಂದರೆ ಪಾಕಿಸ್ತಾನಿ ಬೆಂಬಲದ ಉಗ್ರರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಭಾರತೀಯ ಸೇನೆ, ನಿರ್ದಿಷ್ಟ ಉಗ್ರ ಸ್ಥಳಗಳ ಮೇಲೆ ದಾಳಿ ನಡೆಸಿ 70ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದೆ.
ಈ ಘಟನೆಯಿಂದಾಗಿ ಭಾರತ-ಪಾಕಿಸ್ತಾನ ನಡುವಿನ ವಾತಾವರಣ ಮತ್ತಷ್ಟು ಉದ್ವಿಗ್ನವಾಗಿದೆ. ಅಮೆರಿಕ, ರಷ್ಯಾ, ಇಸ್ರೇಲ್, ಇಟಲಿ, ಇರಾನ್, ಕತಾರ್ ಹೀಗೆ ಹಲವು ಬಲಿಷ್ಠ ರಾಷ್ಟ್ರಗಳು ಭಾರತಕ್ಕೆ ಬೆಂಬಲ ಘೋಷಿಸಿದರೆ, ಚೀನಾ ಹಾಗೂ ಟರ್ಕಿ ಪಾಕಿಸ್ತಾನದ ಬೆಂಬಲಕ್ಕೆ ನಿಂತಿವೆ. ಇದರಿಂದ ಭಾರತದಲ್ಲಿ ಟರ್ಕಿ ವಿರುದ್ಧ ಭಾರೀ ಅಸಮಾಧಾನ ವ್ಯಕ್ತವಾಗಿದೆ.
ಇಲ್ಲಿಯವರೆಗೆ ಸಹಕಾರ ಪ್ರದರ್ಶಿಸಿದ್ದ ಭಾರತ – 2023ರಲ್ಲಿ ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದ ವೇಳೆ ‘ಆಪರೇಷನ್ ದೋಸ್ತ್’ ಮೂಲಕ ನೆರವು ನೀಡಿತ್ತು. ಇದೀಗ ಪಹಲ್ಗಾಮ್ ದಾಳಿಯ ಬಳಿಕ ಯುದ್ಧರಂಗದ ವಾತಾವರಣದಲ್ಲಿ ನರಿ ಬುದ್ಧಿ ತೋರಿದ ಟರ್ಕಿಗೆ ಭಾರತ ಬಿಗ್ ಶಾಕ್ ನೀಡಿದೆ.
ಟರ್ಕಿ ಪಾಕಿಸ್ತಾನಕ್ಕೆ ತನ್ನ ಬಹುಪ್ರಸಿದ್ಧ ಡ್ರೋನ್ಗಳು – ಬೈರಖ್ತರ್ ಹಾಗೂ ಅಸಿಸ್ಗಾರ್ಡ್ ಸೋನ್ಗರ್ –ಗಳನ್ನು ನೀಡಿದ್ದಲ್ಲದೇ, ಇವು ಅಜರ್ಬೈಜಾನ್-ಅರ್ಮೇನಿಯಾ ಯುದ್ಧದಲ್ಲಿ ಅಜರ್ಬೈಜಾನ್ ಗೆಲುವಿಗೆ ಪ್ರಮುಖ ಕಾರಣವಾಗಿದ್ದವು. ಸೋಲಿನ ಬೆನ್ನಲ್ಲೇ ಅರ್ಮೇನಿಯಾ ಭಾರತಕ್ಕೆ ಮನವಿ ಸಲ್ಲಿಸಿ 6000 ಕೋಟಿ ನೀಡಿ 15 ಆಕಾಶ್ ಮಿಸೈಲ್ ಸಿಸ್ಟಂ ಖರೀದಿಸಿತ್ತು.ಇದೇ ಆಕಾಶ್ ಮಿಸೈಲ್ ಸಿಸ್ಟಮ್ನ ಮೂಲಕ ಭಾರತ ಟರ್ಕಿಯ ಡ್ರೋನ್ನ್ನು ಹೊಡೆದುರುಳಿಸಿ ಶಾಕ್ ನೀಡಿದೆ.
ಈ ವಿಜಯದ ಮೂಲಕ ಭಾರತ ತಾನು ಕೇವಲ ರಕ್ಷಣಾತ್ಮಕ ದೇಶವಲ್ಲ, ತಾಳ್ಮೆಯ ಮಿತಿಯನ್ನು ದಾಟಿದರೆ ಶಕ್ತಿಯ ಉತ್ತರ ನೀಡಬಲ್ಲ ದೇಶವೆಂದು ಪುನಃ ಸಾಬೀತುಪಡಿಸಿದೆ. 6000 ಕೋಟಿ ಮೌಲ್ಯದ 15 ಆಕಾಶ್ ಮಿಸೈಲ್ ಸಿಸ್ಟಂಗಳನ್ನು ಖರೀದಿಸಿದ್ದ ಅರ್ಮೇನಿಯಾ ಈಗ ಭಾರತಕ್ಕೆ ಮತ್ತಷ್ಟು ಶಸ್ತ್ರಾಸ್ತ್ರಗಳ ಬೇಡಿಕೆ ಇಡುವ ನಿರೀಕ್ಷೆಯಿದೆ.
ಈ ಡ್ರೋನ್ ಹೊಡೆತದ ಸುದ್ದಿ ಪಾಕಿಸ್ತಾನ ಮಾತ್ರವಲ್ಲ, ಟರ್ಕಿಯನ್ನೂ ಬೆಚ್ಚಿಬೀಳಿಸಿದೆ. ಭಾರತದ ತಾಂತ್ರಿಕ ಸಾಮರ್ಥ್ಯ, ಕಠಿಣ ನಿಲುವು ಹಾಗೂ ತ್ವರಿತ ಪ್ರತಿಕ್ರಿಯೆ ಇಡೀ ಜಗತ್ತಿಗೆ ಒಂದು ಸಂದೇಶ ನೀಡಿದೆ – ಇನ್ನು ಮುಂದೆ ಯಾರೂ ಭಾರತವನ್ನು ತಗ್ಗಿಸಿ ನೋಡುವ ಸಾಧ್ಯತೆ ಇಲ್ಲ!