ಭಾರತಕ್ಕೆ ಬಂದಿಳಿದ ಉಕ್ರೇನ್ನಲ್ಲಿ ನೆಲೆಸಿದ್ದ ಭಾರತೀಯರು Saaksha Tv
ನವದೆಹಲಿ: ಉಕ್ರೇನ್ನಲ್ಲಿ ನೆಲೆಸಿದ್ದ ವಿದ್ಯಾರ್ಥಿಗಳು ಸೇರಿದಂತೆ 241 ಭಾರತೀಯರನ್ನು ಏರ್ ಇಂಡಿಯಾ ವಿಶೇಷ ವಿಮಾನ ಮೂಲಕ ಭಾರತಕ್ಕೆ ಕರೆತರಲಾಯಿತು.
ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಉದ್ವಿಗ್ನತೆ ಉಂಟಾದ ಕಾರಣ ಭಾರತೀಯ ಪ್ರಜೆಗಳನ್ನು ಕರೆತರಲು ಕೇಂದ್ರ ಸರ್ಕಾರ ಏರ್ ಇಂಡಿಯಾದ ಮೂರು ವಿಮಾನಗಳನ್ನು ವ್ಯವಸ್ಥೆ ಮಾಡಿದೆ. ಅದರಲ್ಲಿ ಮೊದಲ ವಿಮಾನ 241 ಭಾರತೀಯರನ್ನು ಹೊತ್ತು ಮಂಗಳವಾರ ರಾತ್ರಿ 11.45 ರ ಸುಮಾರಿಗೆ ದೆಹಲಿಗೆ ಬಂದಿಳಿದಿದೆ.
ಉಕ್ರೇನ್ನಲ್ಲಿ ಅಸಾಧಾರಣ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ದೇಶ ತೊರೆಯುವಂತೆ ಭಾರತೀಯ ರಾಯಭಾರಿ ಕಚೇರಿ ಭಾರತೀಯರನ್ನು ಕೇಳಿಕೊಂಡಿತ್ತು. ಅದರಂತೆ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ನಾಗರಿಕರು ಭಾರತಕ್ಕೆ ಬಂದಿಳಿದಿದ್ದಾರೆ.
#WATCH | Air India special flight carrying around 242 passengers from Ukraine reaches Delhi pic.twitter.com/ctuW0sA7UY
— ANI (@ANI) February 22, 2022
ಇದಲ್ಲದೇ ಫೆಬ್ರವರಿ 22, 24, 26 ರಂದು ಇನ್ನೂ ಮೂರು ವಿಮಾನಗಳು ಭಾರತೀಯರನ್ನು ಕರೆತರುವ ಕಾರ್ಯಾಚರಣೆ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಮಾತು:
ಉಕ್ರೇನ್ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹಲವಾರು ವಿದ್ಯಾರ್ಥಿಗಳು, ಪ್ರಜೆಗಳು ತಾಯ್ನಾಡಿಗೆ ವಾಪಸ್ ಆಗಿದ್ದು ಸಂತಸ ತಂದಿದೆ. ಭಾರತೀಯ ರಾಯಭಾರಿ ಕಚೇರಿಯ ಮನವಿಯ ಮೇರೆಗೆ ನಾವು ಇಲ್ಲಿಗೆ ಮರಳಿದ್ದೇವೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿ ಅನಿಲ್ ರಪ್ರಿಯಾ ಮಾತನಾಡಿ, ಉಕ್ರೇನ್ನಲ್ಲಿ ಸದ್ಯಕ್ಕೆ ಗಂಭೀರ ಪರಿಸ್ಥಿತಿ ಇಲ್ಲ. ಯುದ್ಧ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿಂದಾಗಿ ಭಾರತೀಯ ರಾಯಭಾರಿ ಕಚೇರಿಯ ನಿರ್ದೇಶನದ ಮೇರೆಗೆ ನಾವು ಭಾರತಕ್ಕೆ ವಾಪಸ್ ಬಂದಿದ್ದೇವೆ ಎಂದರು.








