ಶಿವಮೊಗ್ಗದ ಗುಡ್ಡೇಕಲ್ ದೇವಸ್ಥಾನ ಆವರಣದಲ್ಲಿ ಜಗತ್ತಿನ ಅತಿ ಎತ್ತರದ 151 ಅಡಿಗಳ ಬಾಲಸುಬ್ರಹ್ಮಣ್ಯ ಮೂರ್ತಿ ಪ್ರತಿಷ್ಠಾಪನೆಗೆ ಭಾನುವಾರ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸಂಸದ ಬಿ.ವೈ.ರಾಘವೇಂದ್ರ ಶಿಲಾನ್ಯಾಸ ನೆರವೇರಿಸಿದರು.
ಪಾಲಿಕೆ ಮೇಯರ್ ಶಿವಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಿ.ರಾಜಶೇಖರ್, ಪ್ರಮುಖರಾದ ಎನ್.ರಮೇಶ್ ಸೇರಿದಂತೆ ಹಲವರು ಇದ್ದರು.
ಬೃಹತ್ ಗಾತ್ರದ ಬಂಡೆ ಮೇಲೆ ಈ ಪ್ರತಿಮೆ ನಿರ್ಮಾಣವಾಗಲಿದೆ. ಬಂಡೆ ಮೇಲೆ ಕಾಂಕ್ರಿಟ್ ಬೆಡ್ ನಿರ್ಮಿಸಿ, ಅದರ ಮೇಲೆ ಪ್ರತಿಮೆ ಸ್ಥಾಪಿಸಲಾಗುತ್ತದೆ. ಬಾಲಸುಬ್ರಹ್ಮಣ್ಯಸ್ವಾಮಿ ಮೂರ್ತಿ ಜತೆಗೆ ಅವರ ವಾಹನ ನವಿಲಿನ ಪ್ರತಿಮೆಯೂ ಇರಲಿದೆ. ಮಲೇಷಿಯಾ ಮತ್ತು ಸೇಲಂನಲ್ಲಿ ಬೃಹತ್ ಮುರುಗನ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ತ್ಯಾಗರಾಜನ್ ಇದನ್ನು ನೆರವೇರಿಸಲಿದ್ದಾರೆ. ರಸ್ತೆ ಮಟ್ಟದಿಂದ ಸುಮಾರು 100 ಅಡಿ ಎತ್ತರದವರೆಗೆ ಬೃಹತ್ ಬಂಡೆ ಇರಲಿದೆ.
151 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಹಾಗಾಗಿ, ಶಿವಮೊಗ್ಗದ ಎಲ್ಲ ದಿಕ್ಕುಗಳಿಂದಲೂ ಪ್ರತಿಮೆ ಕಾಣಿಸಲಿದೆ. ಅಲ್ಲದೆ ದೇಶ-ವಿದೇಶಗಳ ಪ್ರವಾಸಿಗರನ್ನು ಕ್ಷೇತ್ರದತ್ತ ಸೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಪ್ರತಿಮೆ ನಿರ್ಮಾಣಕ್ಕೆ .5 ಕೋಟಿ ವೆಚ್ಚವಾಗಲಿದೆ. ಕಬ್ಬಿಣ, ಸಿಮೆಂಟ್, ಮರಳು ಬಳಸಿ ಪ್ರತಿಮೆ ನಿರ್ಮಿಸಲಾಗುತ್ತದೆ.