ಹೈದರಾಬಾದ್ : ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ನಿರ್ಮಾಣ ಭೂಮಿ ಪೂಜೆಯಲ್ಲಿ ಭಾಗವಹಿಸುವಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರನ್ನು ತೆಲಂಗಾಣ ಬಿಜೆಪಿ ಮುಖಂಡ ಕೃಷ್ಣ ಸಾಗರ್ ರಾವ್ ಆಹ್ವಾನಿಸಿದ್ದಾರೆ.
ಹೈದರಾಬಾದ್ ನಲ್ಲಿ ಮಾತನಾಡಿರುವ ಕೃಷ್ಣ ಸಾಗರ್ ರಾವ್, ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಕೋಟ್ಯಂತರ ಹಿಂದೂಗಳ ಕನಸು ಬಿಜೆಪಿ ಆಡಳಿತಾವಧಿಯಲ್ಲಿ ಸಾಕಾರಗೊಂಡಿರುವುದ್ದಕ್ಕೆ ಬಿಜೆಪಿ ಹೆಮ್ಮೆ ಪಡುತ್ತದೆ. ಇದಕ್ಕೆ ಎಡಪಂಥೀಯರು ಹಾಗೂ ಎಐಎಂಐಎಂ ನಂತಹ ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿರಬಹುದು. ಆದರೂ ನಾನು ಅಸಾದುದ್ದೀನ್ ಒವೈಸಿ ಸೇರಿದಂತೆ ಕಮ್ಯುನಿಸ್ಟ್ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ. ಇಲ್ಲಿಗೆ ಬರುವ ಮೂಲಕ ಅವರು ತಮ್ಮ ಪಕ್ಷಗಳ ಜಾತ್ಯತೀತ ನಿಲುವನ್ನ, ಭ್ರಾತೃತ್ವ, ಸಹಿಷ್ಣುತೆಯ ಮನೋಭಾವವನ್ನು ಪ್ರದರ್ಶಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.