ಐಪಿಎಲ್ 2021- ಆರ್ ಸಿಬಿ ಗೆಲುವಿನ ಓಟಕ್ಕೆ ಸಿಎಸ್ ಕೆ ಬ್ರೇಕ್..!
ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಆರ್ ಸಿಬಿ ತಂಡಕ್ಕೆ ಸಿಎಸ್ಕೆ ಶಾಕ್ ನೀಡಿದೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 19ನೇ ಪಂದ್ಯದಲ್ಲಿ ಆರ್ ಸಿಬಿ ತಂಡವನ್ನು 69 ರನ್ ಗಳಿಂದ ಸಿಎಸ್ ಕೆ ತಂಡ ಪರಾಭವಗೊಳಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಅಲ್ಲದೆ ಸಿಎಸ್ ಕೆ ತಂಡ ಸತತ ನಾಲ್ಕು ಪಂದ್ಯಗಳಲ್ಲೂ ಜಯ ಸಾಧಿಸಿದ್ದು, ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ.
ಗೆಲ್ಲಲು 192 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಆರ್ ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಲಷ್ಟೇ ಶಕ್ತವಾಯ್ತು.
ನಾಯಕ ವಿರಾಟ್ ಕೊಹ್ಲಿ 8 ರನ್ ಗಳಿಸಿ ಸ್ಯಾಮ್ ಕುರನ್ ಗೆ ವಿಕೆಟ್ ಒಪ್ಪಿಸಿದ್ರೆ, ದೇವದತ್ ಪಡಿಕ್ಕಲ್ 15 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿ 34 ರನ್ ಗಳೊಂದಿಗೆ ತನ್ನ ಹೋರಾಟವನ್ನು ಮುಗಿಸಿದ್ರು.
ನಂತರ ವಾಷಿಂಗ್ಟನ್ ಸುಂದರ್ 7 ರನ್, ಗ್ಲೇನ್ ಮ್ಯಾಕ್ಸ್ ವೆಲ್ 22 ಮತ್ತು ಎಬಿಡಿ ವಿಲಿಯರ್ಸ್ ನಾಲ್ಕು ರನ್ ಗಳಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದ್ರು.
ಇನ್ನುಳಿದಂತೆ ಡೇನಿಯಲ್ ಕ್ರಿಸ್ಟಿಯಾನ್ ಒಂದು ರನ್ ಗಳಿಸಿದ್ದಾಗ ಜಡೇಜಾ ಅವರು ರನೌಟ್ ಮಾಡಿದ್ರೆ, ಕೈಲ್ ಜಾಮಿನ್ಸನ್ 16 ರನ್ ಗಳಿಸಿದ್ದಾಗ ಇಮ್ರಾನ್ ತಾಹೀರ್ ರನೌಟ್ ಮಾಡಿದ್ರು. ಹಾಗೇ ಹರ್ಶಲ್ ಪಟೇಲ್ (0) ಹಾಗೂ ನವದೀಪ್ ಸೈನಿ (2) ಇಮ್ರಾನ್ ತಾಹೀರ್ ಗೆ ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ ಚಾಹಲ್ ಅಜೇಯ 8 ರನ್ ಮತ್ತು ಮಹಮ್ಮದ್ ಸಿರಾಜ್ ಅಜೇಯ 12 ರನ್ ಗಳಿಸಿದ್ರು. ಈ ಮೂಲಕ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ರವೀಂದ್ರ ಜಡೇಜಾ 13 ರನ್ ಗೆ ಮೂರು ವಿಕೆಟ್ ಪಡೆದ್ರು. ಇಮ್ರಾನ್ ತಾಹೀರ್ 16ಕ್ಕೆ 2 ವಿಕೆಟ್ ಹಾಗೂ ಸ್ಯಾಮ್ ಕುರನ್ ಮತ್ತು ಶಾರ್ದೂಲ್ ಥಾಕೂರ್ ತಲಾ ಒಂದೊಂದು ವಿಕೆಟ್ ಕಬಳಿಸಿದ್ರು.
ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತ್ತು. ಸಿಎಸ್ ಕೆ ತಂಡದ ಪರ ರುತುರಾಜ್ ಗಾಯಕ್ವಾಡ್ 33 ರನ್ ಹಾಗೂ ಫಾಫ್ ಡು ಪ್ಲೇಸಸ್ 50 ರನ್ ದಾಖಲಿಸಿದ್ರು. ಅದೇ ರೀತಿ ಸುರೇಶ್ ರೈನಾ 24 ರನ್ ಮತ್ತು ಅಂಬಟಿ ರಾಯುಡು 14 ರನ್ ಗಳಿಸಿ ಹರ್ಶಲ್ ಪಟೇಲ್ ಗೆ ವಿಕೆಟ್ ಒಪ್ಪಿಸಿದ್ರು.
ನಂತರ ಮುಂಬೈ ವಾಂಖಡೆ ಮೈದಾನದಲ್ಲಿ ಘರ್ಜನೆ ಮಾಡಿದ್ದು ರವೀಂದ್ರ ಜಡೇಜಾ. ರವೀಂದ್ರ ಜಡೇಜಾ 28 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್ ಗಳ ಸಹಾಯದಿಂದ ಅಜೇಯ 62 ರನ್ ಗಳಿಸಿದ್ರು. ಅದ್ರಲ್ಲೂ ಜಡೇಜಾ ಹರ್ಶಲ್ ಪಟೇಲ್ ಅವರ ಕೊನೆಯ ಎಸೆತದಲ್ಲಿ 37 ರನ್ ಸಿಡಿಸಿದ್ರು. ಇದ್ರಲ್ಲಿ ಐದು ಸಿಕ್ಸರ್, ಒಂದು ಬೌಂಡರಿ ಮತ್ತು ಎರಡು ರನ್ ಗಳು ಸೇರಿದ್ದವು. ಹೀಗಾಗಿ ಸಿಎಸ್ ಕೆ ತಂಡ 191 ರನ್ ಗಳ ಸವಾಲನ್ನು ಒಡ್ಡಲು ಸಾಧ್ಯವಾಯ್ತು.
ಆಲ್ ರೌಂಡ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ್ರು.