ಯಾದಗಿರಿ: ಕೆಇಎ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನಲಾಗುತ್ತಿದ್ದು, ಈ ಪ್ರಕರಣದ ತನಿಖೆಯನ್ನು ಶನಿವಾರ ಸಿಐಡಿ (CID) ಗೆ ಹಸ್ತಾಂತರಿಸಲಾಗಿದೆ.
ಈ ಕುರಿತು ಯಾದಗಿರಿ ನಗರ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು. ರಾಜ್ಯಾದ್ಯಂತ ಕೂಡ ಈ ಪ್ರಕರಣದ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹೀತೇಂದ್ರ ಸಿಐಡಿ ತನಿಖಾಧಿಕಾರಿಗೆ ಪ್ರಕರಣದ ಕಡತಗಳನ್ನು ಹಸ್ತಾಂತರಿಸಿದ್ದಾರೆ.
ಅಕ್ರಮ ಆರೋಪಿ ಕಿಂಗ್ಪಿನ್ ಆರ್.ಡಿ ಪಾಟೀಲ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಲಾಡ್ಜ್ ನಲ್ಲಿದ್ದ ರುದ್ರಗೌಡನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಅಲ್ಲದೇ, ಆರ್.ಡಿ. ಪಾಟೀಲ್ಗೆ ಆಶ್ರಯ ನೀಡಿದ್ದ ಇಬ್ಬರನ್ನು ಬಂಧಿಸಲಾಗಿದೆ. ಫ್ಲ್ಯಾಟ್ ಮಾಲೀಕ ಶಹಾಪುರದ ಶಂಕರ್ಗೌಡ ಯಾಳವಾರ್ ಮತ್ತು ವ್ಯವಸ್ಥಾಪಕ ದಿಲೀಪ್ನನ್ನು ಬಂಧಿಸಲಾಗಿದೆ.