ಡಿ.ಕೆ. ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಿರುವುದು ರಾಜ್ಯ ಬಿಜೆಪಿ ಮತ್ತು ಜೆಡಿಎಸ್ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಇತ್ತೀಚಿನ ದಿನಗಳಲ್ಲಿ ಸಿಎಂ ಡಿಕೆಶಿ ಅವರ ನಡವಳಿಕೆಗಳನ್ನು ಗಮನಿಸಿದಾಗ ಬಿಜೆಪಿ ಮತ್ತು ಜೆಡಿಎಸ್ಗೆ ಮುಳ್ಳಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳಿವೆ. ಯಾಕಂದ್ರೆ ಟ್ರಬಲ್ ಶೂಟರ್ ಖ್ಯಾತಿಯ ಡಿಕೆಶಿ ಎಲ್ಲವನ್ನೂ ಅಳೆದು ತೂಗಿ ಹೆಜ್ಜೆಯನ್ನಿಡುತ್ತಿದ್ದಾರೆ. ತನ್ನ ಮುಂದಿನ ಯೋಜನೆಗಳನ್ನು ಯೋಚನೆ ಮಾಡಿಕೊಂಡು, ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಕೂಡ ಸುಳ್ಳಲ್ಲ.
ಸಿಎಂ ಪಟ್ಟದಲ್ಲಿ ಕೂತ ಬಳಿಕ ಡಿಕೆಶಿಯೂ ಬದಲಾವಣೆಯಾಗುತ್ತಿದ್ದಾರೆ. ಆಡಳಿತದಲ್ಲೂ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದ್ದಾರೆ. 2028ಕ್ಕೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಹಾಗಂತ ಖಂಡಿತವಾಗಿಯೂ ಡಿಕೆಶಿಗೆ ಸಿಎಂ ಪಟ್ಟ ಹೂವಿನ ಹಾಸಿಗೆಯಲ್ಲ. ಮುಳ್ಳಿನ ಮೇಲೆ ಕುಳಿತುಕೊಂಡೇ ಅಧಿಕಾರ ನಡೆಸಬೇಕು. ಇಲ್ಲಿ ಡಿಕೆಶಿಗೆ ಬಿಜೆಪಿ ಮತ್ತು ಜೆಡಿಎಸ್ಗಿಂತಲೂ ಪ್ರಬಲ ವಿರೋಧಿಗಳು ಇರೋದು ಸ್ವಪಕ್ಷದವರೇ. ಹಾಗಾಗಿ ಯಾವುದೇ ತೀರ್ಮಾನವಾಗಿರಲಿ, ನಿರ್ಧಾರವಾಗಲಿ ತೆಗೆದುಕೊಳ್ಳುವುದು ಹಿಂದಿನ ಡಿಕೆಶಿ ರೀತಿಯಲ್ಲಾದ್ರೆ ಅಪಾಯವೂ ತಪ್ಪಿದ್ದಲ್ಲ.
ಸಿಎಂ ಪಟ್ಟಕ್ಕೇರಿದ ಎರಡೇ ದಿನದಲ್ಲಿ ಮೂವರು ಸಚಿವರ ಅಸಮಾಧಾನ ಸ್ಫೋಟಗೊಂಡಾಗ ಎಲ್ಲವನ್ನೂ ಸರಿ ಮಾಡುತ್ತೇನೆ ಅಂತ ಸಂಯಮದಿಂದಲೇ ಹೇಳಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನ ಸಭೆಗೆ ಆಗಮಿಸಿದಾಗ ಡಿಕೆಶಿ ಜೊತೆಯಲ್ಲೇ ವಿಧಾನ ಸೌಧದಲ್ಲಿರುವ ಪ್ರತಿಮೆಗಳಿಗೆ ಪುಷ್ಪಾರ್ಚಣೆ ಮಾಡಿದ್ದ್ದ ಮುನಿಯಪ್ಪ ಮರುದಿನವೇ ಅಸಮಾಧಾನ ಹೊರಹಾಕಿದ್ದರು.ಇನ್ನೊಂದೆಡೆ ಮಾತಿಗೆ ತಪ್ಪಿದ್ದಾರೆ ಅಂತ ರಾಮಲಿಂಗಾ ರೆಡ್ಡಿ ರಾಜೀನಾಮೆಯನ್ನೇ ನೀಡಿದ್ದರು. ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಕೆ.ಜೆ.ಜಾರ್ಜ್ ಇಲಾಖೆಯ ಅಧಿಕಾರಿಯನ್ನು ಬದಲಾವಣೆ ಮಾಡಿದ್ದಾರೆ ಅಂತ ಆಕ್ರೋಶವೇ ಹೊರಹಾಕಿದ್ದರು.
ಅದೇನೋ ಗೊತ್ತಿಲ್ಲ. ಈ ಎಲ್ಲಾ ಘಟನೆಗಳು ನಡೆದಿರುವುದು ರಾಜ್ಯಕ್ಕೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಆಗಮಿಸಿದಾಗಲೇ ಆಗಿರುವುದು ವಿಶೇಷ. ಇದು ಒಂದು ರೀತಿಯಲ್ಲಿ ಡಿಕೆಶಿಗೆ ಪ್ಲಸ್ ಪಾಯಿಂಟ್ ಆಗಿದೆ. ಅಲ್ಲದೆ ರಾಹುಲ್ ಗಾಂಧಿಯವರ ಖಡಕ್ ಸಂದೇಶದ ಮುಂದೆ ಹಿರಿಯರ ಶಾಸಕರು ಸೈಲೆಂಟ್ ಆಗಿದ್ದರು. ಅಲ್ಲದೆ ಮುನಿಯಪ್ಪನವರು ಮುನಿಸು ಮರೆತ್ರೆ, ಜಾರ್ಜ್ ಅವರು ಮತ್ತೆ ಚಾರ್ಜ್ ಆದ್ರು.
ಇನ್ನೊಂದೆಡೆ, ಗೆಳೆಯ ರಾಮಲಿಂಗಾ ರೆಡ್ಡಿ ಅವರ ಅಸಮಾಧಾನವನ್ನು ತಣಿಸಲು ಸ್ವತಃ ಸಿಎಂ ಡಿಕೆಶಿವಕುಮಾರ್ ಅವರೇ ಅಖಾಡಕ್ಕೆ ಧುಮುಕಿ ಸದ್ಯಕ್ಕೆ ಭಿನ್ನರಾಗಗಳನ್ನು ನಿಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ ಡಿಕೆಶಿಗೆ ಇನ್ನಷ್ಟು ಟ್ರಬಲ್ಗಳು ಸ್ವಪಕ್ಷದಿಂದಲೇ ಎದುರಾಗೋದು ಖಚಿತ ಮತ್ತು ನಿಶ್ವಿತ.
ಇತ್ತ ಕಾಂಗ್ರೆಸ್ ಮತ್ತು ಡಿಕೆಶಿ ಸರ್ಕಾರದ ಬೆಳವಣಿಗೆಗಳ ಬಗ್ಗೆ ಪ್ರತಿಪಕ್ಷ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ತಮ್ಮ ಪಕ್ಷವೇ ಮನೆಯೊಂದು ಮೂರು ಬಾಗಿಲು ಆಗಿದೆ. ಅದನ್ನು ಸರಿಪಡಿಸಿಕೊಳ್ಳುವುದು ಬಿಟ್ಟು ಕಾಂಗ್ರೆಸ್ ಪಕ್ಷದಲ್ಲಿನ ಅಸಮಾಧಾನಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೂ ಬರೀ ಸಿದ್ದರಾಮಯ್ಯ ಹಾಗೂ ಅಲ್ಲಿನ ನಾಯಕರ ಬಗ್ಗೆ ಬೈಯುವುದನ್ನು ಬಿಟ್ಟು ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಪಕ್ಷವಾಗಿ ಬಿಜೆಪಿ ಯಾವುದಾದ್ರೂ ಒಂದೇ ಒಂದು ಹೋರಾಟವನ್ನು ಮಾಡಿದೆಯಾ..? ಸರ್ಕಾರದ ಲೋಪದೋಷಗಳನ್ನು ಪಟ್ಟಿಮಾಡಿಕೊಂಡು ವಿಧಾನಸಭೆಯಲ್ಲಿ ಜೋರು ಧ್ವನಿಯಲ್ಲಿ ಬಿಜೆಪಿ- ಜೆಡಿಎಸ್ ನಾಯಕರು ಮಾತನಾಡಿದ್ದಾರಾ..? ಪ್ರತಿಪಕ್ಷಗಳೇ ವೀಕ್ ಆಗಿರುವಾಗ ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ಸರ್ಕಾರ ಕೂಡ ರಾಜ್ಯದ ಅಭಿವೃದ್ದಿ ಮತ್ತು ಸಮಸ್ಯೆಗಳ ಬಗ್ಗೆ ಅಸಡ್ಡೆ ತೋರಿಸಿರುವುದು ವಿಪರ್ಯಾಸವೇ ಸರಿ.
ಹೌದು, ಈಗ ರಾಜ್ಯದ ಸಿಎಂ ಡಿ.ಕೆ. ಶಿವಕುಮಾರ್. ಅಹಂಕಾರಿ, ಯಾರ ಮಾತು ಕೇಳಲ್ಲ.. ಭ್ರಷ್ಟಚಾರದ ಆರೋಪ ಬಿಟ್ರೆ ಡಿಕೆಶಿಯವರನ್ನು ವೈಯಕ್ತಿಕವಾಗಿ ಟೀಕೆ ಮಾಡುವ ಯಾವ ವಿಷ್ಯಗಳು ಇಲ್ಲ. ಈ ಹಿಂದೆ ಬಿಜೆಪಿಯವರಿಗೆ ಏನು ವಿಷ್ಯ ಸಿಗದೇ ಇದ್ದಾಗ ಸಿದ್ದರಾಮಯ್ಯನವರು ಹಿಂದೂ ವಿರೋಧಿ ಎಂದು ಟೀಕಿಸುತ್ತಿದ್ದರು. ಆದ್ರೆ ಡಿಕೆಶಿಯವರನ್ನು ಹಿಂದೂ ವಿರೋಧಿ ಅಂತ ಹೇಳುವ ಯಾವ ನೈತಿಕತೆಯೂ ಬಿಜೆಪಿಯವರಿಗಿಲ್ಲ. ಧರ್ಮ, ದೇವರು, ನಂಬಿಕೆ, ನಿಷ್ಠೆ ವಿಚಾರದಲ್ಲಿ ಡಿಕೆಶಿಯವರ ಮುಂದೆ ಯಾವ ಬಿಜೆಪಿ ನಾಯಕನೂ ಮುಂಚೂಣಿಗೆ ಬರಲ್ಲ. ಕೇವಲ ಬಾಯಿ ಮಾತಿಗೆ ಅಷ್ಟೇ ಸೀಮಿತವಾಗಿರುವ ರಾಜ್ಯ ಬಿಜೆಪಿ ನಾಯಕರು ಇನ್ನಾದ್ರೂ ಎಚ್ಚೆತ್ತುಕೊಳ್ಳಬೇಕಿದೆ.
ಅಂದ ಹಾಗೇ, ಮೊನ್ನೆ ಸಿಎಂ ಡಿಕೆಶಿ ಘೋಷಣೆ ಮಾಡಿರುವ ಭಾರತ್ ಜೋಡೋ ಯುವಕರ ಸಂಘದ ಹಿಂದೆ ಮಾಸ್ಟರ್ ಪ್ಲಾನೇ ಇದೆ. ಬಿಜೆಪಿಗೆ ತಳಮಟ್ಟದಲ್ಲಿ ಆರ್ಎಸ್ಎಸ್ ಹೇಗೆ ಕೆಲಸ ಮಾಡುತ್ತಿದೆಯಾ ಅದೇ ರೀತಿ ಭಾರತ್ ಜೋಡೋ ಯುವಕರ ಸಂಘ ಕೂಡ ಕಾಂಗ್ರೆಸ್ಗೆ ಶಕ್ತಿ ತುಂಬಲಿದೆ. ಮೊದಲೇ ಸಂಘಟನಾ ಚತುರನಾಗಿರುವ ಡಿಕೆಶಿ ಈ ಯೋಜನೆಯನ್ನು ಸರಿಯಾಗಿ ಕಾರ್ಯರೂಪಕ್ಕೆ ತಂದ್ರೆ ಹಿಂದೂತ್ವದ ಅಮಲಿನಲ್ಲಿರುವ ಬಿಜೆಪಿಗೆ ಅಪಾಯ ತಪ್ಪಿದ್ದಲ್ಲ.
ಹಾಗೇ, ಎಸ್ಐಆರ್ ಬಗ್ಗೆಯೂ ಸಿಎಂ ಡಿಕೆಶಿ ಎಚ್ಚರಿಕೆಯ ನಡೆಯನ್ನಿಟ್ಟಿದ್ದಾರೆ. ಪಕ್ಷದ ಪ್ರತಿಯೊಬ್ಬ ಶಾಸಕರಿಗೆ, ನಾಯಕರಿಗೂ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಆದ್ರೆ ಬಿಜೆಪಿ ನಾಯಕರು ಇದರ ಬಗ್ಗೆ ತಲೆನೇಕೆಡಿಸಿಕೊಂಡಿಲ್ಲ. ಹೇಗಿದ್ರೂ ಪ್ರಧಾನಿ ಮೋದಿ, ಅಮಿತ್ ಶಾ ಇದ್ದಾರಲ್ವಾ ಎಂಬ ಅಸಡ್ಡೆಯಲ್ಲಿ ಮುಳುಗಿದ್ದಾರೆ. ಬಿಜೆಪಿಯ ಹೋರಾಟ, ಹಾರಾಟ ಎಲ್ಲವೂ ಬಿಎಸ್ವೈ, ಅನಂತ್ ಕುಮಾರ್ ಕಾಲದಲ್ಲೇ ಮುಗಿದು ಹೋಯ್ತು. ಪ್ರಸ್ತುತ ಬಿಜೆಪಿ ಇದೇ ನಾಯಕರನ್ನು ಮುಂದಿಟ್ಟುಕೊಂಡು ಮುನ್ನಡೆದ್ರೆ ರಾಜ್ಯದಲ್ಲಿ ಬಿಜೆಪಿ ಕತೆ ಮುಗಿದ ಹಾಗೆ.
ಇನ್ನೊಂದೆಡೆ, ಡಿಕೆಶಿ ಸಿಎಂ ಆಗಿರೋದು ಜೆಡಿಎಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಕ್ಕಲಿಗರ ಪ್ರಭಾವಿ ನಾಯಕನಾಗಿ ಬೆಳೆಯುತ್ತಿರುವ ಡಿಕೆಶಿಯಿಂದ ಒಕ್ಕಲಿಗ ಮತಗಳು ಕಳೆದುಕೊಳ್ಳುತ್ತೇವೆ ಎಂಬ ಆಂತಕವಂತೂ ಇದ್ದೆ. ಹಾಗೇ ನೋಡಿದ್ರೆ ಬಿಜೆಪಿ ನಾಯಕರಿಗಿಂತ ಜೆಡಿಎಸ್ನ ಯುವ ನಾಯಕ ನಿಖಿಲ್ ಕುಮಾರ್ ಸ್ವಾಮಿ ಕನಿಷ್ಠ ರಾಜ್ಯ ಪ್ರವಾಸ ಮಾಡಿಕೊಂಡು ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಕೇವಲ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗುತ್ತಿದ್ದಾರೆ. ರಾಜ್ಯ ಬಿಜೆಪಿಯ ಮಾಸ್ ಲೀಡರ್ ಯಾರು ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ.
ಹೀಗಾಗಿ ಬಿಜೆಪಿ – ಜೆಡಿಎಸ್ ನಾಯಕರು ಇನ್ನಾದ್ರೂ ಎಚ್ಚೆತ್ತುಕೊಳ್ಳಬೇಕು. ಸರ್ಕಾರದ ಲೋಪದೋಷಗಳ ಬಗ್ಗೆ ಜೋರು ಧ್ವನಿಯಲ್ಲಿ ಮಾತನಾಡಬೇಕು. ಬೀದಿಗಿಳಿದು ಹೋರಾಟ ನಡೆಸಬೇಕು. ಹಾಗೇ ಸರ್ಕಾರದ ಜನಪರ ಯೋಜನೆಗಳನ್ನು ಬೆಂಬಲಿಸಬೇಕು. ಅದು ಬಿಟ್ಟು ಪ್ರತಿಯೊಂದನ್ನು ಬಾಯಿ ಮಾತಿನಲ್ಲೇ ವಿರೋಧಿಸುವುದಲ್ಲ. ಬದಲಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಬರೀ ಮೋದಿ, ಅಮಿತ್ ಶಾ ಭಜನೆ ಮಾಡಿಕೊಂಡು ಕುಳಿತರೆ ಆಗಲ್ಲ. ಇನ್ನಾದ್ರೂ ಎಚ್ಚೆತ್ತುಕೊಳ್ಳಿ.. ಯಾಕಂದ್ರೆ ಸಿಎಂ ಸಿದ್ದರಾಮಯ್ಯ ಅಲ್ಲ.. ಸಿಎಂ ಡಿ.ಕೆ. ಶಿವಕುಮಾರ್.
ಸನತ್ ರೈ







