ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಲಂಚ ಕೊಡದಿದ್ದರೆ ಯಾವ ಅಧಿಕಾರಿಯ ವರ್ಗಾವಣೆಯೂ ಸಾಧ್ಯವಿಲ್ಲ. ಕಡತಗಳು ಇರುವ ಜಾಗದಿಂದ ಅಲ್ಲಾಡಲ್ಲ, ಅಭಿವೃದ್ಧಿ ಕೆಲಸಗಳು ಮುಂದಕ್ಕೆ ಸಾಗಲ್ಲ. ಇದು “ಲಂಚ, ಲಂಚ, ಬರೀ ಲಂಚಕೋರರ ಸರ್ಕಾರ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. Siddaramaiah saaksha tv
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ, ಕೊರೊನಾ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ಹೆಚ್ಚುವರಿ ವೇತನ ಕೊಟ್ಟಿಲ್ಲ, ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೊಟ್ಟಿಲ್ಲ. ಬಿಜೆಪಿ ಸರ್ಕಾರವೇ ಮುಂದುವರೆದರೆ ಮುಂದೆ ನೌಕರರಿಗೆ ಸಂಬಳ ಮತ್ತು ಪಿಂಚಣಿ ಕೊಡೋಕು ಹಣವಿರಲ್ಲ.
ಅಭಿವೃದ್ಧಿ ವಿಚಾರಗಳಿಂದಾಗಲೀ, ಸಾಧನೆಗಳಿಂದಾಗಲೀ ಚುನಾವಣೆ ಗೆಲ್ಲುವುದು ಅಸಾಧ್ಯ ಎಂಬುದು ಬಿಜೆಪಿ ನಾಯಕರಿಗೆ ಅರಿವಾಗಿದೆ. ಹೀಗಾಗಿ ಮತಗಳನ್ನು ಹಣದ ಮೂಲಕ ಖರೀದಿಸಿ, ಚುನಾವಣೆ ತಯಾರಿಯಲ್ಲಿದ್ದಾರೆ. ಈ ಬಗ್ಗೆ ಮತದಾರರು ಜಾಗೃತರಾಗಿ, ವಿವೇಚನೆಯಿಂದ ತಮ್ಮ ಮತ ನೀಡಬೇಕು.
ಸ್ವಯಂ ಪ್ರೇರಿತರಾಗಿ ಯಾರು ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಲು ಸಂವಿಧಾನದಲ್ಲಿ ಅವಕಾಶವಿದೆ. ಒಂದು ವೇಳೆ ಬಲವಂತವಾಗಿ ಮತಾಂತರ ನಡೆಯುತ್ತಿದ್ದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮತಾಂತರ ನಿಷೇಧ ಕಾಯ್ದೆಯ ಕೋಮು ಧ್ರುವೀಕರಣದ ಅಜೆಂಡಾ ಅಷ್ಟೆ.
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳಿಗೆ ತಮ್ಮ ಸಾಧನೆಯ ಮೂಲಕ ಮತಕೇಳುವ ಧೈರ್ಯ ಇಲ್ಲ. ಇದಕ್ಕಾಗಿ ಜನರ ಮನಸ್ಸಿನಲ್ಲಿ ಕೋಮುವಾದದ ವಿಷತುಂಬಿ, ಹಿಂದುತ್ವದ ಮೂಲಕ ಚುನಾವಣೆ ಗೆಲ್ಲುವ ತಮ್ಮ ಹಳೆಯ ಹುನ್ನಾರಕ್ಕೆ ಮತ್ತೆ ಚಾಲನೆ ನೀಡತೊಡಗಿದ್ದಾರೆ.
ನನ್ನ 5 ವರ್ಷಗಳ ಆಡಳಿತದಲ್ಲಿ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಯಾವ ಮಾನದಂಡವನ್ನು ಉಲ್ಲಂಘಿಸದೆ ಸುಸ್ಥಿರ ಆಡಳಿತ ನೀಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಬಿಜೆಪಿಯವರು ತಮ್ಮ ಸರ್ಕಾರದ ಆರ್ಥಿಕ ನಿರ್ವಹಣೆಯ ಬಗ್ಗೆ ಬಹಿರಂಗವಾಗಿ ಮಾತನಾಡಲಿ ನೋಡೋಣ ಎಂದು ಕರೆಕೊಟ್ಟಿದ್ದಾರೆ.