ಬೆಂಗಳೂರು : ನಟ ದಿವಂಗತ ಅಂಬರೀಶ್ ಹುಟ್ಟುಹಬ್ಬ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸಮಾಧಿ ಬಳಿ ಹೂವಿನ ಅಲಂಕಾರ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಪತ್ನಿ ಸುಮಾಲತಾ, ಮಗ ಅಭಿಷೇಕ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಸೇರಿ ಕುಟುಂಬದ ಆಪ್ತರು ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದಿವಂಗತ ಅಂಬರೀಶ್ ಪತ್ನಿ ಸುಮಲತಾ, ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಅಭಿಮಾನಿಗಳು ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಆದರೆ ನಿನ್ನೆಯಿಂದಲೇ ಸಾವಿರಾರು ಜನರು ಸೋಶಿಯಲ್ ಮೀಡಿಯಾ, ಫೋನ್ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಆದ್ದರಿಂದ ಅಭಿಮಾನ ಅನ್ನೋದು ಎಲ್ಲೂ ಹೋಗಿಲ್ಲ. ಈ ವರ್ಷ ಅಭಿಮಾನಿಗಳು ಇಂತಹ ಪರಿಸ್ಥಿತಿಯಲ್ಲಿ ಬರಲು ಸಾಧ್ಯವಾಗಿಲ್ಲ. ಪ್ರತಿವರ್ಷನೂ ನಮ್ಮ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿ ಜೈಕಾರ ಹಾಕುತ್ತಿದ್ದರು. ಕೇಕ್, ಹೂವಿನ ಹಾರ ತಂದು ಸಂಭ್ರಮಿಸುತ್ತಿದ್ದರು. ಆದರೆ ಈಗ ಅದೆಲ್ಲಾ ಮನಸ್ಸಿನಲ್ಲಿದೆ. ಅದು ಮರೆಯಲಾಗದ ಕ್ಷಣ, ಆ ನೆನಪು ಎಲ್ಲೂ ಹೋಗಿಲ್ಲ ಎಂದರು.
ಇದೇ ವೇಳೆ ಅಭಿಷೇಕ್ 2ನೇ ಸಿನಿಮಾ ಫಸ್ಟ್ ಲುಕ್ ಲಾಂಚ್ ಬಗ್ಗೆ ಮಾತನಾಡಿದ ಅವರು, ಅಂಬಿ ಹುಟ್ಟುಹಬ್ಬದ ದಿನವೇ ಅಭಿಷೇಕ್ 2ನೇ ಸಿನಿಮಾ ಫಸ್ಟ್ ಲುಕ್ ಲಾಂಚ್ ಆಗಿದ್ದು ಸಂತೋಷವಾಗುತ್ತಿದೆ. ಒಂದು ವರ್ಷದಿಂದ ಅವರ ಸಿನಿಮಾದ ಬಗ್ಗೆ ಅಭಿಮಾನಿಗಳು ಕಾಯುತ್ತಿದ್ದರು. ಮೊದಲ ಸಿನಿಮಾ ಲವ್ ಸ್ಟೋರಿ ಆಗಿತ್ತು. ಹೀಗಾಗಿ ಬೇರೆ ರೀತಿಯ ಪಾತ್ರ ಮಾಡುವಂತಹ ಕಥೆಯನ್ನ ಹುಡುಕುತ್ತಿದ್ದೆವು. ಈ ಬಾರಿ ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಸೂರಿ ಅವರು ತುಂಬಾ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹೀಗಾಗಿ ಎರಡನೇ ಸಿನಿಮಾ ಸೂರಿ ಜೊತೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದರು.