ಸುಮ್ಮನೆ ನನ್ನ ತಂಟೆಗೆ ಬರಬೇಡಿ.. ಬಂದ್ರೆ ಸುಮ್ಮನೆ ಬಿಡಲ್ಲ..!
ಈತ ರಕ್ಷಕನೂ ಹೌದು.. ಭಕ್ಷಕನೋ ಹೌದು..ಈತನನ್ನು ಅರ್ಥಮಾಡಿಕೊಳ್ಳೋದೇ ಕಷ್ಟ ಕಷ್ಟ..ಒಂದೊಂದು ಸಲ ಕಿರಿಕ್ ಮನುಷ್ಯನಂತೆ ಕಾಣುತ್ತಾನೆ.. ಸೇಡಿಗೆ ಪ್ರತಿಸೇಡು.. ಪ್ರತಿಕಾರಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಡಾನ್ ರೀತಿ ವರ್ತಿಸುತ್ತಾನೆ.. ಮೈದಾನದಲ್ಲಿ ಚಿಕ್ಕಮಕ್ಕಳ ಬುದ್ಧಿ ಪ್ರದರ್ಶಿಸಿದ್ರೂ ಆಟ, ತಂಡದ ವಿಚಾರ ಬಂದಾಗ ಬಿಟ್ಟುಕೊಡೋ ಮಾತೇ ಇಲ್ಲ. ಆಟದಲ್ಲಿ ಪ್ರಬುದ್ಧತೆ ತೋರಿ ತಂಡವನ್ನು ಗೆಲುವಿನ ದಡ ಸೇರಿಸುವ ಚತುರ ಕಲಾವಿದ. ಇದಕ್ಕಾಗಿಯೇ ಈತನನ್ನು ಚೇಸಿಂಗ್ ಗಾಡ್, ಚೇಸಿಂಗ್ ಮಾಸ್ಟರ್ ಅಂತ ಬಣ್ಣಿಸೋದು.
ಹುಡುಗಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಅಂತರಲ್ಲ.. ಹಾಗೇ ಈತನ ಮನಸು ಮತ್ತು ಆಟವನ್ನು ಅರಿತುಕೊಳ್ಳುವುದು ಅಷ್ಟೇ ಕಷ್ಟ ಉಂಟು. ಮೊದಲ ಎಸೆತದಿಂದ ಕೊನೆಯ ಎಸೆತದವರೆಗೆ ಕ್ರೀಸ್ನಲ್ಲಿ ನಿಂತು ಆಡಬೇಕು.. ತಂಡ ಗೆಲ್ಲಲೇಬೇಕು ಎಂಬುದು ಈತನ ಧೈಯ. ಇದಕ್ಕಾಗಿ ಆತ ಏನು ಬೇಕಾದ್ರೂ ಮಾಡಲು ರೆಡಿ ಇರುತ್ತಾನೆ. ಎದುರಾಳಿ ಆಟಗಾರರು ಕೆಣಕಲು ಬಂದ್ರೆ ಹಿಂದೆ ಮುಂದೆ ನೋಡದೇ ಜಗಳ ಮಾಡ್ತಾನೆ. ಕ್ಷಣ ಮಾತ್ರದಲ್ಲಿ ಎಲ್ಲವನ್ನೂ ಮರೆತು ಆಟದ ಕಡೆ ಗಮನ ಹರಿಸ್ತಾನೆ. ಇದು ಆತನ ಸ್ಪೇಷಾಲಿಟಿ.
ಒಂದೊಂದು ಸಲ ಈತನ ಸ್ವಭಾವ, ವರ್ತನೆ ಇಷ್ಟವಾಗದೇ ಇರಬಹುದು. ಸೀನಿಯರ್ ಪ್ಲೇಯರ್, ಪ್ರಬುದ್ಧ ಕ್ರಿಕೆಟಿಗ, ಎಲ್ಲರಿಗೂ ಮಾದರಿಯಾಗಿರುವ ಕ್ರಿಕೆಟಿಗ ಈ ರೀತಿ ಒರಟನಂತೆ ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಕೂಡ ಕಾಡುತ್ತೆ. ಆದ್ರೆ ಸಣ್ಣ ಸಣ್ಣ ವಿಚಾರಕ್ಕೂ ಕಿರಿಕ್ ಮಾಡಿಕೊಳ್ಳುವ ಬುದ್ಧಿ ತನ್ನ ವರ್ಚಸ್ಸಿಗೆ ದಕ್ಕೆಯಾಗುತ್ತೆ ಎಂಬುದು ಗೊತ್ತಿದ್ರೂ ಆತ ಕ್ಯಾರೇ ಅನ್ನಲ್ಲ. ಯಾಕಂದ್ರೆ ನಾನು ಇರೋದೇ ಹೀಗೆ.. ಯಾರು ಬೇಕಾದ್ರೂ ಏನೇ ಅನ್ನಲಿ.. ಡೋಂಟ್ ಕೇರ್ ಎಂಬ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದಾನೆ. ಅದಕ್ಕಾಗಿಯೇ ಆತ ಇಷ್ಟವಾಗದೇ ಇದ್ರೂ ಇಷ್ಟವಾಗುತ್ತಾನೆ.
ಅದರಲ್ಲೂ ಡೆಲ್ಲಿ ವಿರುದ್ಧದ ಆಡಿದ ರೀತಿ ಕ್ಲಾಸ್ & ಮಾಸ್. 26ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್ಸಿಬಿ ತಂಡಕ್ಕೆ ಜಯ ತಂದುಕೊಟ್ಟ ಪರಿಯೇ ಅತ್ಯದ್ಭುತ. ಅರುಣ್ ಜೆಟ್ಲಿ ಮೈದಾನ ಡೆಲ್ಲಿ ಕ್ಯಾಪಿಟಲ್ಸ್ಗೆ ಮನೆಯಂಗಳ.. ಆತ ಡೆಲ್ಲಿಯ ಮನೆ ಮಗ. ಆಡಿ ಬೆಳೆದ ಮೈದಾನದಲ್ಲಿ ಸೋತ್ರೆ ಮರ್ಯಾದೆ ಇರಲ್ಲ… ಜೊತೆಗೆ ಆಪ್ತ ಗೆಳೆಯನ ವಿರುದ್ಧ ರಿವೇಂಜ್ ತೀರಿಸಿಕೊಳ್ಳಲೇಬೇಕಿತ್ತು. ಅಭಿಮಾನಿಗಳು ಕೂಡ ಆ ಕ್ಷಣವನ್ನು ಎದುರು ನೋಡುತ್ತಿದ್ದಾರೆ ಎಂಬುದು ಆತನಿಗೆ ಚೆನ್ನಾಗಿಯೇ ಗೊತ್ತಿತ್ತು.
ಅದಕ್ಕಾಗಿಯೇ ಸಂಯಮ ಮತ್ತು ಏಕಾಗ್ರತೆಯಿಂದ ಬ್ಯಾಟ್ ಬೀಸಲು ಆರಂಭಿಸಿದ. ನಿಧಾನವಾಗಿಯೇ ತಂಡದ ರನ್ ಗತಿಯನ್ನು ಏರಿಸಲು ಮುಂದಾದ. ಇನ್ನೊಂದೆಡೆ ಕೃನಾಲ್ ಪಾಂಡ್ಯನ ತಾಕತ್ತು ಗೊತ್ತಿದ್ದ ಕಾರಣ ತಾನು ಎಚ್ಚರಿಕೆಯ ಆಟದ ಕಡೆಗೆ ಗಮನ ಹರಿಸಿದ್ದ. ನೋಡ ನೋಡುತ್ತಿದ್ದಂತೆ ಶತಕದ ಜೊತೆಯಾಟವೂ ಬಂತು. ಕೃನಾಲ್ ಪಾಂಡ್ಯನನ್ನು ಅಬ್ಬರಿಸಲು ಬಿಟ್ಟ. ಜೊತೆಗೆ ತಾನು ಅರ್ಧಶತಕ ದಾಖಲಿಸಿದ್ರೂ ಅದನ್ನು ಸಂಭ್ರಮಿಸಲಿಲ್ಲ. ಆತನ ಗುರಿ, ಆಲೋಚನೆಯೇ ಬೇರೆನೇ ಇತ್ತು. ಗೆದ್ದ ಬಳಿಕ ರಿವೇಂಜ್ ಸೆಲೆಬ್ರೆಷನ್ ಮಾಡಬೇಕು ಎಂದು ಮನಸು ಹೇಳ್ತಾ ಇತ್ತು. ಇನ್ನೇನೂ ಆ ಕ್ಷಣ ಬರುತ್ತೆ ಅಂದುಕೊಳ್ಳುವಷ್ಟರಲ್ಲಿ ವಿಕೆಟ್ ಕೈಚೆಲ್ಲಿಕೊಂಡುಬಿಟ್ಟ. ನಿರಾಸೆ, ಹತಾಶೆಯಿಂದಲೇ ಪೆವಿಲಿಯನ್ನತ್ತ ಹೆಜ್ಜೆ ಹಾಕಿದ್ದ. ತಂಡ ಗೆಲುವಿನ ಸನೀಹದಲ್ಲಿದ್ರೂ ಮುಖದಲ್ಲಿ ಸಮಾಧಾನದ ಖುಷಿ ಇರಲಿಲ್ಲ. ಕೊನೆಗೆ ಕೃನಾಲ್ ಪಾಂಡ್ಯ ಮತ್ತು ಟೀಮ್ ಡೇವಿಡ್ ಆರ್ಸಿಬಿಗೆ ಗೆಲುವಿನ ಆರತಿ ಬೆಳಗಿದ್ರೂ ಈತ ಮಾತ್ರ ಗೆಲುವಿನ ಸಂಭ್ರಮದಲ್ಲೂ ಸೇಡು ತೀರಿಸಿಕೊಳ್ಳುವುದು ಹೇಗೆ ಎಂದು ಯೋಚನೆ ಮಾಡ್ತಾ ಇದ್ದ.
ಕೊನೆಗೂ ಆ ಗಳಿಗೆ ಬಂದೇ ಬಿಡ್ತು. ಆಪ್ತ ಗೆಳೆಯ ಕೆ.ಎಲ್. ರಾಹುಲ್ ಜೊತೆ ಮಾತುಕತೆ ವೇಳೆ, ಕೈ ಸನ್ನೆಯಲ್ಲೇ ವೃತ್ತ ಬರೆದು ಡೆಲ್ಲಿ ನಂದು ಎಂದು ರಾಹುಲ್ನನ್ನು ತಬ್ಬಿಕೊಂಡು ಸಂಭ್ರಮಿಸಿದ್ದ. ಯಾಕಂದ್ರೆ ಇದೇ ಕೆ.ಎಲ್. ರಾಹುಲ್ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಆರ್ಸಿಬಿ ವಿರುದ್ಧ ಗೆದ್ದಾಗ ಬ್ಯಾಟ್ನಿಂದ ವೃತ್ತ ಎಳೆದು ಬೆಂಗಳೂರು ನಂದು ಎಂದು ಬೀಗಿದ್ದ. ಅದಕ್ಕೆ ಪ್ರತಿಕಾರದ ಪಂದ್ಯ ಡೆಲ್ಲಿಯದ್ದಾಗಿತ್ತು. ಇದಕ್ಕೆ ಆತ ರಿವೇಂಜ್ ತೀರಿಸಿಕೊಳ್ಳುತ್ತಾನೆ ಎಂದು ಅಭಿಮಾನಿಗಳು ಅಂದುಕೊಂಡಿದ್ರು. ಆದ್ರೆ ಆತ ತಂಡವನ್ನು ಗೆಲುವಿನ ಸನೀಹಕ್ಕೆ ತಂದು ಔಟಾದ. ಆದ್ರೂ ಸೇಡು ತೀರಿಸಿಕೊಳ್ಳುವುದನ್ನು ಮರೆಯಲಿಲ್ಲ.
ನೆನಪಿಡಿ.. ಆತನ ಈ ಸಂಭ್ರಮ ಇಷ್ಟಕ್ಕೆ ಸೀಮಿತವಾಗಿದ್ದು ಆಪ್ತ ಗೆಳೆಯನಿಗೋಸ್ಕರ. ಒಂದು ವೇಳೆ ಕೆ.ಎಲ್. ರಾಹುಲ್ ಜಾಗದಲ್ಲಿ ಬೇರೆ ಯಾರಾದ್ರೂ ಇರುತ್ತಿದ್ರೆ ಆತನ ಪ್ರತಿಕಾರದ ರೀತಿ, ಹವಾನೇ ಬೇರೆನೇ ಆಗಿರುತ್ತಿತ್ತು. ಒಟ್ಟಿನಲ್ಲಿ ಯಾರನ್ನು ಎದುರು ಹಾಕೊಂಡ್ರೂ ನನ್ನನ್ನು ಎದುರು ಹಾಕೊಂಡ್ರೆ ಎಲ್ಲವನ್ನು ಅನುಭವಿಸಲು ಸಿದ್ಧರಿರಬೇಕು. ಇಲ್ಲದಿದ್ರೆ ಸುಮ್ಮನೆ ಆಡ್ಕೊಂಡು ಇರಬೇಕು. ನನ್ನ ತಂಟೆಗೆ ಬರಬೇಡಿ.. ಬಂದ್ರೆ ಎಲ್ಲದಕ್ಕೂ ಸಿದ್ಧವಿರಿ. ಇದು ನನ್ನ ಪಾಲಿಸಿ ಎಂದು ಸಾರಿ ಸಾರಿ ಹೇಳುತ್ತಿರುವ ವಿಶ್ವದ ಏಕೈಕ ಆಟಗಾರ ವಿರಾಟ್ ಕೊಹ್ಲಿ.
ಸನತ್ ರೈ