ನೊಂದವರ ಮನಸ್ಸಿಗೆ ಯಾವ ಅಕ್ಷರದಿಂದ ಸಾಂತ್ವನ ಹೇಳಲಿ : ಜಗ್ಗೇಶ್
ಬೆಂಗಳೂರು : ಕೊರೊನಾದಿಂದ ಕನ್ನಡ ಚಿತ್ರರಂಗದ ಹಿರಿಯ ನಟ ಶಂಖನಾದ ಅರವಿಂದ್ ಹಾಗೂ ನಿರ್ದೇಶಕ ರೇಣುಕಾ ಶರ್ಮಾ ಕೊನೆಯುಸಿರೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಯಾವ ಅಕ್ಷರದಿಂದ ನೊಂದವರ ಮನಸ್ಸಿಗೆ ಸಾಂತ್ವನ ಹೇಳಲಿ ಎಂದು ನವರಸ ನಾಯಕ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ.
ಟ್ವಿಟ್ಟರ್ ನಲ್ಲಿ ಜಗ್ಗೇಶ್, ಏನೆಂದು ಅಕ್ಷರ ಠಂಕಿಸಲಿ? ಯಾವ ಅಕ್ಷರದಲ್ಲಿ ಸಾಂತ್ವನ ಹೇಳಲಿ? ಯಾವ ಅಕ್ಷರದಿಂದ ಇವರ ಮನೆಯ ನೊಂದವರ ಸಮಾಧಾನ ಪಡಿಸಲಿ? ಒಂದಂತು ಠಂಕಿಸುವೆ ನಿಮ್ಮಗಳ ಜೊತೆ ನಾ ಕಳೆದ ಸಮಯ ಅವಿಸ್ಮರಣೀಯ!! ನಿಮ್ಮ ಆತ್ಮ ರಾಯರಲ್ಲಿ ಲೀನವಾಗಲಿ! ನಿಮ್ಮ ಮನೆಯವರಿಗೆ ಧೈರ್ಯ ಆ ರಾಯರೆ ತುಂಬಲಿ! ಓಂ ಶಾಂತಿ….ಸದ್ಗತಿ ಎಂದು ಬರೆದುಕೊಂಡಿದ್ದಾರೆ.
ಕೊರೊನಾದಿಂದಾಗಿ ಇಂದು ಶಂಖನಾದ ಅರವಿಂದ್ ನಿಧನರಾಗಿದ್ದರೇ ಜ.23ರಂದು ಅವರ ಪತ್ನಿ ರಮಾ ಅವರೂ ಸಹ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದರು. ರಮಾ ಅವರೂ ಕನ್ನಡ ಸಿನಿ ರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ನಿನ್ನೆ ನಿರ್ದೇಶಕ ರೇಣುಕಾ ಶರ್ಮಾ ಅವರೂ ಸಹ ಕೊರೊನಾದಿಂದ ಕೊನೆಯುಸಿರೆಳೆದಿದ್ದರು.