ಬೆಂಗಳೂರು : ಕೊರೊನಾ ವೈರಸ್ ಜೊತೆ ಜೊತೆಗೆ ರಾಜ್ಯ ರಾಜಕಾರಣದಲ್ಲಿ ಮಿಂಚಿನ ಸಂಚಲನಗಳು ನಡೆಯುತ್ತಿವೆ. ಈ ತಿಂಗಳ ಮಧ್ಯಭಾಗದಲ್ಲಿ ಸಂಪುಟ ಪುನರ್ ರಚನೆಯ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಸಚಿವಾಕಾಂಕ್ಷಿಗಳು ಭಾರಿ ಮಟ್ಟದ ಲಾಬಿ ನಡೆಸುತ್ತಿದ್ದಾರೆ. ಇದರ ಮಧ್ಯೆ ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ದೆಹಲಿಗೆ ಹಾರಿದ್ದು, ರಾಜಕೀಯ ವಲಯದಲ್ಲಿ ಗುಸುಗುಸು ಶುರುವಾಗಿದೆ.
ಡಿಸಿಎಂ ಲಕ್ಷ್ಮಣ್ ಸವದಿ, ಸಚಿವೆ ಶಶಿಕಲಾ ಜೊಲ್ಲೆ ಅವರ ದೆಹಲಿ ಭೇಟಿ ಬಳಿಕ ರಮೇಶ್ ಜಾರಕಿಹೊಳಿ ಈಗ ದೆಹಲಿಗೆ ತೆರಳಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಲಕ್ಷ್ಮಣ್ ಸವದಿ ಸ್ಥಾನಕ್ಕೆ ಕುತ್ತು, ಡಿಸಿಎಂ ಹುದ್ದೆಗೆ ಲಾಬಿ
ರಮೇಶ್ ಜಾರಕಿಹೊಳಿ ದೆಹಲಿ ಭೇಟಿ ವೇಳೆ ಮುಖ್ಯವಾಗಿ ಲಕ್ಷ್ಮಣ್ ಸವದಿ ಅವರನ್ನು ಉಪಮುಖ್ಯಮಂತ್ರಿ ಡಿಸಿಎಂ ಸ್ಥಾನದಿಂದ ಬಲಾಯಿಸಿ, ಹೆಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಲಾಬಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಅಂದಹಾಗೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಗೆ “ಕೈ” ತೊಟ್ಟ ಸಂದರ್ಭದಲ್ಲಿ ಬಿಜೆಪಿ ಕೇಂದ್ರ ನಾಯಕರು ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಈ ಭೇಟಿಯಲ್ಲಿ ಅದನ್ನು ಕೇಂದ್ರ ನಾಯಕತ್ವಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶ ಜಾರಕಿಹೊಳಿಯದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಅದರಲ್ಲೂ ರಮೇಶ್ ಜಾರಕಿಹೊಳಿ ಆಪ್ತ ಮೂಲಗಳ ಪ್ರಕಾರ ದೊಡ್ಡ ಹೊಣೆಗಾರಿಕೆಗಾಗಿ ಅವರನ್ನು ನವದೆಹಲಿಯ ಪಕ್ಷದ ಕೇಂದ್ರ ನಾಯಕತ್ವದಿಂದ ಕರೆಯಲಾಗಿದೆಯಂತೆ. ಇನ್ನು ರಮೇಶ್ ಜಾರಕಿಹೊಳಿ ಜುಲೈ ಆರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿದಾಗಲೂ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು ಎಂದು ಹೇಳಲಾಗುತ್ತಿದೆ.
ಸಚಿವರು ನವದೆಹಲಿಯ ಭೇಟಿ ವೇಳೆಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಗಜೇಂದ್ರ ಸಿಂಗ್ ಶೇಖಾವತ್, ಸುರೇಶ್ ಅಂಗಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಅರಣ್ಯ, ರೈಲ್ವೆ ಮತ್ತು ಜಲಸಂಪನ್ಮೂಲ ಇಲಾಖೆಗಳ ಅಧಿಕಾರಿಗಳನ್ನು ಭೇಟಿಯಾಗಲು ಯೋಜನೆ ಹಾಕಿಕೊಂಡಿದ್ದಾರೆ.