ತೆಲುಗು ಚಿತ್ರರಂಗದ ಕಲಾತಪಸ್ವಿ ಕೆ.ವಿಶ್ವನಾಥ್ ಅವರು ಇನ್ನಿಲ್ಲ…..
ತೆಲುಗು ಚಿತ್ರರಂಗದ ಹಿರಿಯ ನಿರ್ದೇಶಕ, ಕಲಾತಪಸ್ವಿ ಕೆ.ವಿಶ್ವನಾಥ್ ಅವರು ಇನ್ನಿಲ್ಲ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ.
50 ಕ್ಕೂ ಹೆಚ್ಚು ಚಲನಚಿತ್ರಗಳನ್ನ ನಿರ್ದೇಶಿಸಿರುವ ವಿಶ್ವನಾಥ್ ಅವರ ನಿಧನಕ್ಕೆ ಇಡೀ ಟಾಲಿವುಡ್ ಇಂಡಸ್ಟ್ರಿ ಕಂಬನಿ ಮಿಡಿದಿದೆ. ಶಂಕರಾಭರಣಂ, ಸಪ್ತಪದಿ, ಸ್ವಾತಿಮುತ್ಯ, ಸಾಗರಸಂಗಮ, ಸ್ವರ್ಣಕಮಲ ಮುಂತಾದ ಅತ್ಯಧ್ಭುತ ಚಿತ್ರಗಳನ್ನ ಭಾರತೀಯ ಚಿತ್ರರಂಗಕ್ಕೆ ನೀಡಿದ ಕಲಾ ತಪಸ್ವಿಯನ್ನ ಕಳೆದುಕೊಂಡು ತೆಲುಗು ಚಿತ್ರರಂಗ ಅನಾಥವಾಗಿದೆ.
ಕಾಶಿನಾಥುನಿ ವಿಶ್ವನಾಥ್ ಅವರು ಫೆಬ್ರವರಿ 19, 1930 ರಂದು ಗುಂಟೂರು ಜಿಲ್ಲೆಯ ರಾಯಪಲ್ಲಿಯಲ್ಲಿ ಜನಿಸಿದರು. ಗುಂಟೂರು ಹಿಂದೂ ಕಾಲೇಜಿನಲ್ಲಿ ಇಂಟರ್ ಮುಗಿಸಿರುವ ಅವರು, ಆಂಧ್ರ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಮುಗಿಸಿದ್ದಾರೆ. ಆ ನಂತರ ವಾಹಿನಿ ಸ್ಟುಡಿಯೋದಲ್ಲಿ ಸೌಂಡ್ ಆರ್ಟಿಸ್ಟ್ ಆಗಿ ಸಿನಿಮಾ ವೃತ್ತಿ ಆರಂಭಿಸಿದರು. 1965ರಲ್ಲಿ ಆತ್ಮ ಗೌರವ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕೆ.ವಿಶ್ವನಾಥ್ ಅನೇಕ ಅದ್ಭುತ ಚಿತ್ರಗಳನ್ನು ನಿರ್ದೇಶಿಸಿದ್ದರು. ಸಿರಿಸಿರಿಮುವ್ವ, ಶಂಕರಾಭರಣಂ, ಸಪ್ತಪದಿ, ಸಾಗರಸಂಗಂ, ಸ್ವಾತಿಮುತ್ಯಂ, ಸಿರಿವೆನ್ನೆಲ, ಶ್ರುತಿಲಯಲು, ಸ್ವಯಂಕೃಷಿ, ಸ್ವರ್ಣಕಮಲಂ, ಸೂತ್ರಧಾರುಲು, ಸ್ವಾತಿಕಿರಣಂ ಮುಂತಾದ ಹಲವು ಶಾಸ್ತ್ರೀಯ ಚಿತ್ರಗಳನ್ನ ತೆಲುಗು ಪ್ರೇಕ್ಷಕರಿಗೆ ನೀಡಿದರು.
ಕೆ.ವಿಶ್ವನಾಥ್ ಅನೇಕ ಪ್ರಶಸ್ತಿಗಳನ್ನ 2016ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 1992 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಕೆ.ವಿಶ್ವನಾಥ ಅವರ ನಿಧನ ತೆಲುಗು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದೇ ಹೇಳಬಹುದು. ಅನೇಕ ಶ್ರೇಷ್ಠ ಮತ್ತು ಕಲಾತ್ಮಕ ಚಲನಚಿತ್ರಗಳನ್ನ ಭಾರತೀಯ ಚಿತ್ರರಂಗಕ್ಕೆ ಬಿಟ್ಟು ಹೋಗಿದ್ದಾರೆ.
k viswanath : Kalathapaswi K. Viswanath of Telugu cinema is no more…..