ಕಲಬುರಗಿ: ಕಲಬುರಗಿ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಮತೀರ್ಥನಗರದ ಕುಟುಂಬವೊಂದು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆದಾಯ ಪ್ರಮಾಣಪತ್ರ ಪಡೆಯಲು ಹೋಗಿದ್ದ ವ್ಯಕ್ತಿಯೊಬ್ಬರನ್ನು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರೂ, ಅವರ ಜಾತಿಯ ಕಾಲಂನಲ್ಲಿ ಮುಸ್ಲಿಂ ಎಂದು ನಮೂದಿಸುವ ಮೂಲಕ ದೊಡ್ಡ ಪ್ರಮಾದ ಎಸಗಲಾಗಿದೆ. ಈ ತಪ್ಪನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಾಮಾನ್ಯವಾಗಿ ಪ್ರಮಾಣಪತ್ರಗಳಲ್ಲಿ ಹೆಸರು, ವಿಳಾಸ ಅಥವಾ ಫೋಟೋ ಬದಲಾವಣೆಗಳಂತಹ ಸಣ್ಣಪುಟ್ಟ ತಪ್ಪುಗಳನ್ನು ನಾವು ನೋಡಿದ್ದೇವೆ. ಆದರೆ ಕಲಬುರಗಿಯಲ್ಲಿ ನಡೆದ ಈ ಘಟನೆ ವಿಚಿತ್ರವಾಗಿದ್ದು, ತಹಶೀಲ್ದಾರ್ ಕಚೇರಿ ಅಧಿಕಾರಿಗಳ ಎಡವಟ್ಟಿನಿಂದ ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಧರ್ಮಕ್ಕೆ ಸೇರಿಸಿ ಪ್ರಮಾಣಪತ್ರ ನೀಡಲಾಗಿದೆ. ಈ ತಪ್ಪನ್ನು ಸರಿಪಡಿಸಲು ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ.
ಜಾತಿ ಕಾಲಂನಲ್ಲಿ ‘ಮುಸ್ಲಿಂ’ ಎಂದು ಉಲ್ಲೇಖ
ಕಲಬುರಗಿಯ ರಾಮತೀರ್ಥನಗರದ ಮಹಾಂತಪ್ಪ ಕೊತ್ಲೆ ಎಂಬ ವ್ಯಕ್ತಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರು ತಮ್ಮ ಪುತ್ರನ ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಜಾತಿ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂದು ಸ್ಪಷ್ಟವಾಗಿ ನಮೂದಿಸಿದ್ದರು. ಆದರೆ, ಅವರಿಗೆ ವಿತರಿಸಿದ ಪ್ರಮಾಣಪತ್ರದ ಜಾತಿ ಕಾಲಂನಲ್ಲಿ ‘ಮುಸ್ಲಿಂ’ ಎಂದು ಉಲ್ಲೇಖಿಸಿ ಅಧಿಕಾರಿಗಳು ಮಹಾಪ್ರಮಾದ ಎಸಗಿದ್ದಾರೆ.
ಆದಾಯ ಪ್ರಮಾಣಪತ್ರವನ್ನು ಪರಿಶೀಲಿಸಿದ ಮಹಾಂತಪ್ಪ ಕೊತ್ಲೆ ಅವರಿಗೆ ನಿಜಕ್ಕೂ ಆಘಾತವಾಗಿದೆ. ತಹಶೀಲ್ದಾರ್ ಕಚೇರಿ ಅಧಿಕಾರಿಗಳ ಈ ಎಡವಟ್ಟಿನಿಂದಾಗಿ ಮಹಾಂತಪ್ಪ ಕೊತ್ಲೆ ಅವರ ಪುತ್ರನ ಶಿಕ್ಷಣಕ್ಕೆ ತೊಂದರೆಯಾಗಿದ್ದು, ಕುಟುಂಬವು ಕಂಗಾಲಾಗಿದೆ.
ಇದೇ ರೀತಿಯ ತಪ್ಪುಗಳು: ದಾಖಲೆಗಳಲ್ಲಿ ಮೃತ, ಆದರೆ ವಾಸ್ತವದಲ್ಲಿ ಜೀವಂತ!
ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲೂ ಇದೇ ರೀತಿಯ ಒಂದು ಘಟನೆ ನಡೆದಿತ್ತು. ಒಬ್ಬ ವ್ಯಕ್ತಿ ಸಮಾಜದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಆದರೆ, ಸರ್ಕಾರದ ದಾಖಲೆಗಳಲ್ಲಿ ಈಗಾಗಲೇ ಮರಣ ಹೊಂದಿದ್ದಾರೆ ಎಂದು ನಮೂದಾಗಿತ್ತು. ಅಷ್ಟೇ ಅಲ್ಲದೆ, ಅವರು ಮೃತಪಟ್ಟಿದ್ದಾರೆ ಎಂದು ಹೇಳಿ, ಅವರ ಮಕ್ಕಳ ಬದಲಿಗೆ ಬೇರೆಯವರ ಮಕ್ಕಳಿಗೆ ಕಂದಾಯ ಇಲಾಖೆ ಜಮೀನನ್ನು ಖಾತೆ ಮಾಡಿಕೊಟ್ಟಿತ್ತು. ಈ ದೊಡ್ಡ ಎಡವಟ್ಟಿನ ವಿರುದ್ಧ ವ್ಯಕ್ತಿಯ ಕುಟುಂಬ ಮತ್ತು ಊರಿನವರು ನಾಡ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದ್ದರು.








