ಕಲಿಯುಗಕ್ಕೆ ಪುನೀತ್ ದೇವರ ಮಗು – ರಜನಿಕಾಂತ್
ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಗೌರವಿಸಿದೆ. 67 ನೇ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಈ ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಯಾಗಿ ನಟ ರಜನಿಕಾಂತ್ ಮತ್ತು ಜೂನಿಯರ್ ಎನ್ ಟಿ ಆರ್ ಹಾಜರಿದ್ದರು. ಈ ವೇಳೆ ಮಾತನಾಡಿದ ನಟ ರಜನಿಕಾಂತ್ ಅಪ್ಪು ಅವರನ್ನ ದೇವರ ಮಗ ಎಂದು ಹಾಡಿ ಹೊಗಳಿದ್ದಾರೆ. ಕನ್ನಡದಲ್ಲಿ ಮಾತು ಶುರು ಮಾಡಿದ ನಟ ರಜನಿಕಾಂತ್ ಮೊದಲಿಗೆ ಕರ್ನಾಟಕ ರಾಜ್ಯೋತ್ಸವಕ್ಕೆ ಶುಭಾಶಯ ತಿಳಿಸಿದರು. ನಂತರ ಮಾತನಾಡಿ ಅಪ್ಪು ದೇವರ ಮಗುವಾಗಿದ್ದರು. ಅವರ ಆತ್ಮ ನಮ್ಮ ನಡುವೆ ಇದೆ. ಕಲಿಯುಗಕ್ಕೆ ಪುನೀತ್ ದೇವರ ಮಗು, ನಚಿಕೆತ, ಮಾರ್ಕಾಂಡೇಯರ ಸಾಲಿಗೆ ಸೇರುವವರು ಅವರು ಎಂದಿದ್ದಾರೆ.
ಎನ್ ಟಿಅರ್, ಎಂಜಿಆರ್, ಶಿವಾಜಿಗಣೇಶನ್, ರಾಜ್ ಕುಮಾರ್ ಅವರು 50 ವರ್ಷದಲ್ಲಿ ಸಾಧಿಸಿದ್ದನ್ನು ಅಪ್ಪು 20 ವರ್ಷಗಳಲ್ಲಿ ಸಾಧಿಸಿದ್ದರು. ಅಪ್ಪು ಯಾವಾಗಲೂ ನಮ್ಮೊಂದಿಗೇ ಇರ್ತಾರೆ. ಕೇವಲ ನಟನೆಯಿಂದಷ್ಟೇ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಆದರ್ಶಗಳ ಮೂಲಕ ಗೆಲ್ಲಬಹುದು ಅದು ನಮ್ಮ ಅಪ್ಪು ಮಾಡಿದ್ದಾರೆ ಎಂದು ಬಣ್ಣಿಸಿದ್ದಾರೆ.
1979 ರಂದು ನಾನು ಅಪ್ಪುನ ಮೊದಲು ಚೆನ್ನೈನಲ್ಲಿ ನೋಡಿದ್ದು, ರಾಜ್ಕುಮಾರ್ ಜೊತೆ ಪುನೀತ್ ಕೂಡ ಶಬರಿಮಲೆಗೆ ಬರುತ್ತಿದ್ದರು. ನಕ್ಷತ್ರದ ಕಣ್ಣುಗಳಿರುವ ಅಪ್ಪುನ, ಅಣ್ಣಾವ್ರ ಹೆಗೆಲ ಮೇಲೆ ಕೂರಿಸಿಕೊಂಡು 48 ಕಿಲೋ ಮೀ. ನಡೆಯುತ್ತಿದ್ದರು ಎಂದು ಮೊದಲ ಭೇಟಿಯ ನೆನಪನ್ನ ಮೆಲುಕು ಹಾಕಿದರು.
ಅಂದು ಅಪ್ಪು ಸಿನಿಮಾ ನೋಡುತ್ತೀರಾ ಎಂದು ಅಣ್ಣಾವ್ರು ಹೇಳಿದ್ದರು. ಅಪ್ಪು ಚಿತ್ರ ನೋಡಿ, 100 ದಿನ ಓಡುತ್ತೆ ಎಂದಿದ್ದೇ ಅಂದರಂತೆ ಅಪ್ಪು ಸಿನಿಮಾ 100 ದಿನ ಓಡಿತ್ತು. ನಂತರ ಪುನೀತ್ ನಟಿಸಿದ ಅಪ್ಪು ಸಿನಿಮಾಗೆ ನಾನೇ ಅವಾರ್ಡ್ ಕೊಟ್ಟಿದ್ದೆ ಆ ದಿನವನ್ನ ಇಂದಿಗೂ ಮರೆಯಲು ಸಾಧ್ಯವಿಲ್ಲ.
ಅಪ್ಪು ಸಾವಿನ ಸಮಯಲ್ಲಿ ಅಷ್ಟೊಂದು ಜನ ಯಾಕೆ ಬಂದರು. ಅವರ ವ್ಯಕ್ತಿತ್ವಕ್ಕೆ ಬಂದರು. ಅಪ್ಪು ಮಾಡಿರುವ ಕೆಲಸಕ್ಕೆ ಅಷ್ಟೊಂದು ಜನ ಬಂದರು, ಅವರು ಸಮಾಜಕ್ಕೆ ಆದರ್ಶವಾಗಿದ್ದರು ಎಂದು ಅಪ್ಪುನ ರಜನೀಕಾಂತ್ ಹಾಡಿಹೊಗಳಿದ್ದಾರೆ.
Karnataka Ratna : Puneeth is God’s child for Kali Yuga – Rajinikanth